ಲೋನ್ ತೆಗೆಸಿಕೊಡುವುದಾಗಿ ನಂಬಿಸಿ ವಂಚನೆ: ಮಹಿಳೆ ಬಂಧನ
ಬ್ರಹ್ಮಾವರ ತಾಲೂಕಿನ ಆರೂರು ಗ್ರಾಮದ ಕೌಶಲ್ಯ ಎಂಬಾಕೆಯೇ ಬಂಧಿತಳು ಎಂದು ಗುರುತಿಸಲಾಗಿದೆ. 2023ರ ನವೆಂಬರ್ ನಲ್ಲಿ ಬಾರಕೂರು ಹೇರಾಡಿಯ ಸರಿತಾ ಲೂವಿಸ್ ಎಂಬವರಿಗೆ ಕೌಶಲ್ಯ ಪಿಎಂಇಜಿಪಿ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ಹೇಳಿದ್ದು ನಂತರದ ದಿನಗಳಲ್ಲಿ ಸಬ್ಸಿಡಿ ಲೋನ್ ಬಗ್ಗೆ ಹಲವಾರು ಕಾರಣಗಳನ್ನು ತಿಳಿಸಿ ಹಣ ಪಾವತಿಸುವಂತೆ ತಿಳಿಸಿದ್ದಳು.
ಅದರಂತೆ ಸರಿತಾ ಲೂವಿಸ್ ಹಂತ ಹಂತವಾಗಿ ಕೌಶಲ್ಯಳ ಖಾತೆಗೆ ಹಾಗೂ ಆಕೆ ತಿಳಿಸಿದ ವ್ಯಕ್ತಿಗಳಾದ ಆಕೆಯ ಗಂಡ ಸಂದೇಶ ಮತ್ತು ಪ್ರಕಾಶ, ಆಶೀಶ ಶೆಟ್ಟಿ, ರಾಜೇಂದ್ರ ಬೈಂದೂರು, ಗೀತ, ಹರಿಣಿ, ನವ್ಯ, ಕುಮಾರ್, ಮಾಲತಿ, ಪ್ರವೀಣ್, ಹರಿಪ್ರಸಾದ್, ನಾಗರಾಜ ಮತ್ತು ಭಾರತಿ ಸಿಂಗ್ ಎಂಬವರಿಗೆ ಒಟ್ಟು 80,72,000ರೂ. ಹಣ ನೀಡಿದ್ದರು ಎನ್ನಲಾಗಿದೆ. ಆದರೆ ಸರಿತಾ ಲೂವಿಸ್ ಗೆ ಇದುವರೆಗೂ ಲೋನ್ ಹಣ ಸಿಗಲಿಲ್ಲ.
ಅದೇ ರೀತಿ ಕೌಶಲ್ಯ, ಅಂಜಲಿನ್ ಡಿಸಿಲ್ವಾ ಎಂಬವರಿಗೂ ಪಿಎಂಇಜಿಪಿ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ಹೇಳಿ ಹಂತ ಹಂತವಾಗಿ ಸರಿತಾ ಲೂವಿಸ್ ಗೆ ತಿಳಿಸಿದ ವ್ಯಕ್ತಿಗಳ ಖಾತೆಗಳಿಗೆ 65,00,000 ರೂ. ನಗದು ಹಣವನ್ನು ಪಾವತಿಸಿದ್ದರು. ಕೌಶಲ್ಯ ಇವರಿಬ್ಬರಿಗೆ ಒಟ್ಟು 4 ಕೋಟಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಹಾಗೂ ಬ್ಯಾಂಕ್ ನೌಕರ ಎಂದು ಪೋನ್ ನಲ್ಲಿ ಮಾತನಾಡಿ ನಂಬಿಸಿ ಒಟ್ಟು 1,45,72,000 ರೂ. ಹಣ ಪಡೆದು ಮೋಸ ಮಾಡಿರುವುದಾಗಿ ದೂರಲಾಗಿದೆ. ಅದರಂತೆ ಬ್ರಹ್ಮಾವರ ಪೊಲೀಸರು ಪ್ರಕರಣ ದಾಖಲಿಸಿ, ಆರೋಪಿ ಕೌಶಲ್ಯಳನ್ನು ಬಂಧಿಸಿದ್ದಾರೆ. ತನಿಖೆ ನಡೆದಿದೆ.