ಅಡಿಕೆಗೆ ಪರ್ಯಾಯ ಬೆಳೆ ದೊಡ್ಡ ಸವಾಲು: ಕ್ಯಾ.ಬ್ರಿಜೇಶ್ ಚೌಟ
ಪುತ್ತೂರು: ಹಳದಿರೋಗ ಪೀಡಿತ ಪ್ರದೇಶದಲ್ಲಿ ಅಡಿಕೆಗೆ ಪರ್ಯಾಯ ಬೆಳೆಯನ್ನು ಬೆಳೆಸುವುದು ದೊಡ್ಡ ಸವಾಲಿನ ಕೆಲಸವಾಗಿದೆ. ಹಾಗಿದ್ದರೂ ಕಾಫಿ ಬೆಳೆಯನ್ನು ಬೆಳೆಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ. ಕೇಂದ್ರದ ಕೃಷಿ ಸಚಿವರು ಈ ಹಳದಿರೋಗ ಪ್ರದೇಶಗಳನ್ನು ವೀಕ್ಷಣೆ ಮಾಡುವ ಭರವಸೆ ನೀಡಿದ್ದಾರೆ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ಪುತ್ತೂರು ಮಹಾಲಿಂಗೇಶ್ವರ ದೇವಳದಲ್ಲಿನ ಶತರುದ್ರ ಸೇವೆಯಲ್ಲಿ ಪಾಲ್ಗೊಂಡ ಬಳಿಕ ಅವರು ಮಾದ್ಯಮಗಳೊಂದಿಗೆ ಮಾತನಾಡಿದರು.
ಅಡಿಕೆಗೆ ಸಂಬಂಧಿಸಿ ಕೇಂದ್ರದ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಈಗಾಗಲೇ ಉನ್ನತಮಟ್ಟದ ಸಭೆಯನ್ನು ನಡೆಸಿದ್ದಾರೆ. ಇದರಲ್ಲಿ ಅಡಿಕೆಗೆ ಹಳದಿರೋಗ ಸಮಸ್ಯೆ ಹಾಗೂ ಎಲೆಚುಕ್ಕಿ ರೋಗದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ರೋಗಪೀಡಿತ ಪ್ರದೇಶದಲ್ಲಿ ಅಡಿಕೆ ಹಾಗೂ ಪರ್ಯಾಯ ಬೆಳೆಯನ್ನು ಬೆಳೆಸಲು ಸಮಸ್ಯೆ ಇದೆ. ಹಾಗಾಗಿ ಒನ್ ಟೈಮ್ ಪ್ಯಾಕೇಜ್ ಘೋಷಣೆ ಮಾಡಬೇಕು. ಪರ್ಯಾಯ ಬೆಳೆ ಬಗ್ಗೆ ಪ್ರಯತ್ನ ನಡೆಸಬೇಕು ಎಂಬ ಬೇಡಿಕೆಗಳನ್ನು ಇಡಲಾಗಿದೆ. ಕಾಫಿ ಬೋರ್ಡಿನ ಅಧ್ಯಕ್ಷರನ್ನು ಕರೆಸಿ ಜಿಲ್ಲೆಯಲ್ಲಿ ಕಾಫಿ ಬೆಳೆ ಬೆಳೆಯಲು ಮಣ್ಣು ಪರೀಕ್ಷೆ ನಡೆಸುವಂತೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಪುತ್ತೂರಿನ ಮಹಾಲಿಂಗೇಶ್ವರ ದೇವಳದ ಜೀರ್ಣೋದ್ಧಾರ ಕಾರ್ಯದ ಹಿನ್ನಲೆಯಲ್ಲಿ ಕೇಂದ್ರದ ಪ್ರಸಾದಂ ಯೋಜನೆಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಸದ್ಯ ಅದರ ಮಾಹಿತಿ ತಿಳಿದಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಪ್ರಸಾದಂ ಯೋಜನೆ ಬೋಗಸ್ ಆಗಿದ್ದರೆ ಚಾಮುಂಡೇಶ್ವರಿ, ಸವದತ್ತಿ ಎಲ್ಲಮ್ಮ ಕ್ಷೇತ್ರಗಳಲ್ಲಿ ಕೆಲಸ ನಡೆಯುತ್ತಿರಲಿಲ್ಲ. ಹಾಗಾಗಿ ಈ ಯೋಜನೆಯ ಮಾರ್ಗಸೂಚಿ ಹಾಗೂ ಅವಧಿ ಬಗ್ಗೆ ನೋಡಬೇಕಾಗಿದೆ ಎಂದು ಅವರು ಹೇಳಿದರು.
ಕಾಂಗ್ರೇಸ್ ಸರ್ಕಾರ ಬಂದಾಗ ಹಿಂದೂ ಕಾರ್ಯಕರ್ತರನ್ನು ಹಾಗೂ ಹಿಂದೂ ಸಮಾಜವನ್ನು ಧಮನಿಸುವ - ಗೊಂದಲಕ್ಕೀಡು ಮಾಡುವ ಕೆಲಸ ಮಾಡುತ್ತಲೇ ಬಂದಿದೆ. ಇದೇನು ಹೊಸ ವಿಚಾರವಲ್ಲ. ಈ ಹಿಂದೆಯೂ ಅದನ್ನೇ ಮಾಡಿತ್ತು. ಈಗಲೂ ಅದನ್ನು ಮುಂದುವರಿಸುತ್ತಿದೆ ಎಂದು ಚೌಟ ಹೇಳಿದರು.
ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಪ್ರಾರಂಭವಾದ ಹಿನ್ನೆಲೆಯಲ್ಲಿ ಪ್ರಸಾದಂ ಯೋಜನೆಗೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಸದ್ಯಕ್ಕೆ ಅದರ ಮಾಹಿತಿ ತಿಳಿದಿಲ್ಲ, ಅದನ್ನು ಫಾಲೋ ಅಪ್ ಮಾಡುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.