ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದೂ ಸಮಾಜದ ಧ್ವನಿಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ: ಶಾಸಕ ಭರತ್ ಶೆಟ್ಟಿ
Saturday, November 1, 2025
ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ಆರ್ ಎಸ್ ಎಸ್, ಹಿಂದೂ ಸಮಾಜದ ಮುಖಂಡರ ಮೇಲೆ ಕೇಸುಗಳನ್ನು ದಾಖಲಿಸಿ, ಯಾವುದೇ ನೋಟಿಸು ನೀಡದೆ ಠಾಣೆಗೆ ಕರೆದೊಯ್ಯುತ್ತಿದ್ದು, ಹಿಂದೂ ಸಮಾಜದ ಧ್ವನಿಯನ್ನು ಹತ್ತಿಕ್ಕುವ ಕೆಲಸವನ್ನು ಮಾಡುತ್ತಿದೆ. ಇದೀಗ ವಿಕಾಸ್ ಪುತ್ತೂರು, ಶರಣ್ ಪಂಪ್ ವೆಲ್ ಅವರ ಮೇಲೆ ಸುಳ್ಳು ಕೇಸು ದಾಖಲಿಸಿರುವುದನ್ನು ಖಂಡಿಸುವುದಾಗಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಭಾರತೀಯ ಜನತಾ ಪಕ್ಷ, ಪ್ರಧಾನಿ ನರೇಂದ್ರ ಮೋದಿ, ಸ್ವತಹ ಬಿಜೆಪಿ ಶಾಸಕರಾದ ನನ್ನ ಮೇಲೆಯೂ ಇಲ್ಲಸಲ್ಲದ ಬರಹಗಳನ್ನು ಬರೆದು ಪೋಸ್ಟ್ ಮಾಡುತ್ತಾರೆ. ಇಂಥ ಘಟನೆಗಳಿಗೆ ಪೊಲೀಸ್ ಇಲಾಖೆ ಮೌನವಾಗಿರುತ್ತದೆ. ಶರಣ್ ಪಂಪ್ ವೆಲ್ ಅವರು ಜನಸಂಖ್ಯಾ ಜಿಹಾದಿ ವಿಡಿಯೋವನ್ನು ಶೇರ್ ಮಾಡಿದ ಮಾತ್ರಕ್ಕೆ ಯಾವ ನೋಟಿಸು, ಸೆಕ್ಷನ್ ಕೂಡ ಹಾಕದೆ ಏಕಾಏಕಿ ವಶಕ್ಕೆ ಪಡೆದುಕೊಳ್ಳುತ್ತಿರುವುದು ನೋಡಿದರೆ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ ವನ್ನು ಹರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಹಿಂದೂ ಸಮಾಜದ ಮುಖಂಡರನ್ನು ಬಲವಾದ ಪ್ರಕರಣಗಳು ಇಲ್ಲದೆ ಠಾಣೆಗಳಲ್ಲಿ ಕರೆದುಕೊಂಡು ಹೋಗಿ ಕೂರಿಸುತ್ತಾ ಹೋದರೆ ಹಿಂದೂ ಸಮಾಜ ಆಕ್ರೋಷಿತವಾಗಿ ಎದ್ದು ನಿಂತರೆ ಸರಕಾರಕ್ಕೆ ನಿಯಂತ್ರಿಸುವುದು ಕಷ್ಟವಾದೀತು ಎಂದು ಎಚ್ಚರಿಕೆ ನೀಡಿದ್ದಾರೆ.