ಬೀದಿನಾಯಿಗಳಿಗೆ ಪುನರ್ವಸತಿ: ಜಾಗ ನಿಗದಿ ಮಾಡಿ ಸೂಕ್ತ ವ್ಯವಸ್ಥೆಗೆ ದ.ಕ. ಉಸ್ತುವಾರಿ ಸಚಿವ ಸೂಚನೆ

ಬೀದಿನಾಯಿಗಳಿಗೆ ಪುನರ್ವಸತಿ: ಜಾಗ ನಿಗದಿ ಮಾಡಿ ಸೂಕ್ತ ವ್ಯವಸ್ಥೆಗೆ ದ.ಕ. ಉಸ್ತುವಾರಿ ಸಚಿವ ಸೂಚನೆ


ಮಂಗಳೂರು: ಸರ್ವೋಚ್ಛ ನ್ಯಾಯಾಲಯದ ಆದೇಶದ ಮಾರ್ಗಸೂಚಿಯಂತೆ ಬೀದಿ ನಾಯಿಗಳಿಗೆ ಸೂಕ್ತ ಜಾಗದಲ್ಲಿ ಪುನರ್ವಸತಿ ಕಲ್ಪಿಸುವ ಅಗತ್ಯವಿದೆ. ಅದಕ್ಕಾಗಿ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಸೂಕ್ತ ಜಾಗವನ್ನು ನಿಗದಿಪಡಿಸಿ ಕ್ರಮ ವಹಿಸುವಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.

ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಶನಿವಾರ ದ.ಕ. ಜಿಲ್ಲಾ ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಗರದ ಹೊರವಲಯದ ಕುಂಪಲ ಎಂಬಲ್ಲಿ ಬೀದಿ ನಾಯಿಯೊಂದು ವ್ಯಕ್ತಿಯೊಬ್ಬರಿಗೆ ಭೀಕರ ರೀತಿಯಲ್ಲಿ ಹಲ್ಲೆ ಮಾಡಿ ಸಾವಿಗೆ ಕಾರಣವಾಗಿರುವ ವಿಷಯವನ್ನು ಸಭೆಯ ಆರಂಭದಲ್ಲಿ ಪ್ರಸ್ತಾಪಿಸಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಮೃತ ವ್ಯಕ್ತಿ ಕುಟಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಸವೋಚ್ಛ ನ್ಯಾಯಾಲಯದ ಆದೇಶದ ಪ್ರಕಾರ ಸಾರ್ವಜನಿಕ ಸ್ಥಳದಲ್ಲಿರುವ ಬೀದಿನಾಯಿಗಳ್ನು ಸೂಕ್ತ ಜಾಗಕ್ಕೆ ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸಿ ಶಾಶ್ವತವಾಗಿ ವ್ಯವಸ್ಥೆ ಮಾಡಬೇಕಿದೆ. ಇದಕ್ಕಾಗಿ ಟೆಂಡರ್ ಮೂಲಕ ಏಜೆನ್ಸಿಗೆ ಸೂಚಿಸಲಾಗಿದೆ. ಸದ್ಯ ಜಾಗ ಲಭ್ಯವಿಲ್ಲ ಎಂದು ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಾದ ಡಾ. ಅರುಣ್ ಕುಮಾರ್ ಶೆಟ್ಟಿ ಸಭೆಯಲ್ಲಿ ತಿಳಿಸಿದರು.

ನಗರ ಹಾಗೂ ಗ್ರಾಮಾಂತರ ಪ್ರದೇಶದ ಹಲವು ಕಡೆ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದೆ. ಶಾಲಾ ಆವರಣ, ಸುತ್ತುಮುತ್ತಲಿನ ಪ್ರದೇಶಗಳಲ್ಲೂ ಬೀದಿ ನಾಯಿಗಳ ಹಾವಳಿಯಿಂದ ಮಕ್ಕಳು, ಪೋಷಕರು ಆತಂಕದಿಂದಲೇ ಓಡಾಡುವಂತಾಗಿದೆ. ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್. ಭೋಜೇಗೌಡ, ಇತರ ಶಾಸಕರು ಹಾಗೂ ನಾಮನಿರ್ದೇಶಿತ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.

ಮೃತ ವ್ಯಕ್ತಿ ಕುಟುಂಬಕ್ಕೆ ಪರಿಹಾ ನೀಡುವ ಚರ್ಚೆಯ ವೇಳೆ ಪ್ರತಿಕ್ರಿಯಿಸಿದ ಅಧಿಕಾರಿ ಡಾ. ಅರುಣ್ ಕುಮಾರ್, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ನಾಯಿ ಕಡಿತಕ್ಕೆ 5000 ರೂ. ಪರಿಹಾರ ಹಾಗೂ ಮೃತಪಟ್ಟಲ್ಲಿ 5 ಲಕ್ಷ ರೂ.ವರೆಗೆ ಪರಿಹಾರ ನೀಡುವ ಅವಕಾಶ ಇದೆ ಎಂದರು.

ಈ ಬಗ್ಗೆ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ ಸಚಿವ ದಿನೇಶ್ ಗುಂಡೂರಾವ್, ಬೀದಿನಾಯಿಗಳಿಗೆ ಪುನರ್ವಸತಿ ಕಲ್ಪಿಸುವಲ್ಲಿಯೂ ಜಾಗ ಗುರುತಿಸಿ ಅವುಗಳನ್ನು ಸ್ಥಳಾಂತರಿಸಿ, ಅವುಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸಲಹೆ ನೀಡಿದರು.

ರಸ್ತೆ ಬದಿ ಹಣ್ಣುಹಂಪಲುಗಳ ಗಿಡಗಳನ್ನೇ ಹೆಚ್ಚು ಬೆಳೆಸಿ:

ಸಾಮಾಜಿಕ ಅರಣ್ಯ ವಿಭಾಗಕ್ಕೆ ಸಂಬಂಧಿಸಿದಂತೆ ರಸ್ತೆ ಬದಿಗಳಲ್ಲಿ ಹಣ್ಣು ಹಂಪಲುಗಳ ಗಿಡಗಳನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಸಬೇಕು ಎಂದು ಪುತ್ತೂರು ಶಾಸಕ ಅಶೋಕ್ ರೈ, ಪುತ್ತೂರಿನಲ್ಲಿ ಆರ್‌ಟಿಓ ಟ್ರ್ಯಾಕ್ ನಿರ್ಮಾಣಕ್ಕಾಗಿ ೯ ಕೋಟಿ ರೂ. ಅನುದಾನ ಮಂಜೂರಾಗಿ ಒಂದು ವರ್ಷವಾಗಿದೆ. ಆದರೆ, ಸಾಮಾಜಿಕ ಅರಣ್ಯ ಜಾಗದಲ್ಲಿರುವ ಮರಗಳನ್ನು ತೆರವುಗೊಳಿಸುವ ಕಾರ್ಯ ಆಗದೆ, ಅನುದಾನ ಹಿಂದಕ್ಕೆ ಹೋಗುವ ಪರಿಸ್ಥಿತಿ ಎದುರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಕೇಶಿಯಾ ಹಾಗೂ ನೀಲಗಿರಿ ಮರಗಳನ್ನು ತೆರವುಗೊಳಿಸಲು ಈಗಾಗಲೇ ಆದೇಶವಾಗಿದ್ದರೂ ಕ್ರಮ ಆಗುತ್ತಿಲ್ಲ. ಅರಣ್ಯ ಇಲಾಖೆ ಈ ಬಗ್ಗೆ ಗಮನ ಹರಿಸಬೇಕು ಎಂದು ಬೋಜೇಗೌಡರು ಹೇಳಿದಾಗ, 2017-18ರಿಂದ ಹೊಸ ನೀಲಗಿರಿ ಅಥವಾ ಅಕೇಶಿಯಾ ಮರಗಳನ್ನು ನೆಡಲಾಗುತ್ತಿಲ್ಲ. ಪ್ರತಿ ವರ್ಷ ಈ ಮರಗಳ ತೆರವು ಕಾರ್ಯ ನಡೆಯತ್ತಿದೆ. 470 ಹೆಕ್ಟೇರ್ ಈ ವರ್ಷ ಕ್ಲಿಯರ್ ಆಗಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಆಯಂಟನಿ ಮರಿಯಪ್ಪ ತಿಳಿಸಿದರು.

ಸಾಮಾಜಿಕ ಅರಣ್ಯ ಪ್ರದೇಶದಲ್ಲಿ ಅಕೇಶಿಯಾ ಹಾಗೂ ನೀಲಗಿರಿ ಮರಗಳ ತೆರವಿಗೆ ಇರುವ ನಿರ್ಬಂಧದ ಕುರಿತು ರಾಜ್ಯ ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ಸಂಪೂರ್ಣ ತೆರವುಗೊಳಿಸಲು ಕ್ರಮ ವಹಿಸಬೇಕು ಎಂದು ಬೋಜೇಗೌಡರು ಸಲಹೆ ನೀಡಿದರು.

ಮೆಸ್ಕಾಂ ಎಂಡಿ ಗೈರು-ಎಚ್ಚರಿಕೆ ನೋಟೀಸು ನೀಡಲು ಸೂಚನೆ:

ಮೆಸ್ಕಾಂಗೆ ಸಂಬಂಧಿಸಿದ ಚರ್ಚೆಯ ಸಂದರ್ಭ ವ್ಯವಸ್ಥಾಪಕ ನಿರ್ದೇಶಕರು ಸಭೆಯಲ್ಲಿ ಹಾಜರಿಲ್ಲದ ಬಗ್ಗೆ ಜನಪ್ರತಿನಿಧಿಗಳಿಂದ ಆಕ್ಷೇಪ ವ್ಯಕ್ತವಾಯಿತು. ಈ ಹಿಂದಿನ ಸಭೆಗಳಲ್ಲೂ ಅವರು ಹಾಜರಿರುವಂತೆ ತಿಳಿಸಲಾಗಿದ್ದರೂ ಮತ್ತೆ ನಿರ್ಲಕ್ಷ್ಯ ತೋರಲಾಗಿದೆ. ಸಕಾರಣ ನೀಡದೆ ಸಭೆಗೆ ಹಾಜರಾಗದಿರುವ ಅವರ ವಿರುದ್ಧ ಕ್ರಮ ವಹಿಸಬೇಕು ಬೋಜೇಗೌಡರು ಆಗ್ರಹಿಸಿದರು.

ನಾನು ಕೂಡಾ ಹೊಸ ಎಂಡಿಯನ್ನು ನೋಡಿಲ್ಲ. ಯಾವ ಸಭೆಗೂ ಬಂದಿಲ್ಲ ಎಂದು ಉಸ್ತುವಾರಿ ಸಚಿವರು ಹೇಳಿದಾಗ, ಜನಪ್ರತಿನಿಧಿಗಳು ಕ್ರಮಕ್ಕೆ ಆಗ್ರಹಿಸಿದರು.

ಈ ಬಗ್ಗೆ ಎಚ್ಚರಿಕೆ ನೋಟೀಸು ನೀಡಿ ಕ್ರಮ ಕೈಗೊಳ್ಳುವಂತೆ ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿಗೆ ಸೂಚಿಸಿದರು.

ಸಭೆಯಲ್ಲಿ ಶಾಸಕರಾದ ಡಾ. ಭರತ್ ಶೆಟ್ಟಿ, ಹರೀಶ್ ಪಂಜ, ಭಾಗೀರಥಿ ಮುರಳ್ಯ, ಪ್ರತಾಪ್ ಸಿಂಹ ನಾಯಕ್, ಜಿ.ಪಂ. ಸಿಇಒ ವಿನಾಯಕ ನರ್ವಾಡೆ, ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಎಸ್ಪಿ ಅರುಣ್ ಕುಮಾರ್, ನಾಮ ನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು.

ವೆನ್‌ಲಾಕ್ ಆಸ್ಪತ್ರೆಯಲ್ಲಿ ಐಸಿಯು ಕೊರತೆ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾದಾಗ, ಹೊಸ ಮೆಡಿಸಿನ್ ಬ್ಲಾಕ್‌ನಲ್ಲಿ 76 ಹೊಸ ಐಸಿಯು ಅಳವಡಿಕೆಗೆ ಕ್ರಮ ಆಗಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ತಿಳಿಸಿದರು.

ಆಯುಷ್‌ಗೆ ಅವಧಿ ಮೀರಿದ ಔಷಧಿ ಪೂರೈಕ ಆರೋಪ:

ದ.ಕ. ಜಿಲ್ಲೆಯ ಆಯುಷ್ ಇಲಾಖೆಗೆ ಚಿಕ್ಕಮಗಳೂರು, ಹಾಸನ ಮೊದಲಾದ ಕಡೆಗಳಿಂದ ಅವಧಿ ಮೀರಿದ ಔಷಧಿಗಳನ್ನು ತರಿಸಿ ರೋಗಿಗಳಿಗೆ ನೀಡಲಾಗುತ್ತಿರುವ ಕುರಿತಂತೆ ದಾಖಲೆಗಳನ್ನು ಆರೋಗ್ಯಾಧಿಕಾರಿಗೆ ನೀಡಿದ್ದೇನೆ. ಈ ರೀತಿ ಅವಧಿ ಮೀರಿದ ಔಷಧಿಗಳನ್ನು ಬೇರೆ ಕಡೆಯಿಂದ ತರಿಸಲು ಮಧ್ಯವರ್ತಿಗಳನನು ನೇಮಕ ಮಾಡಲಾಗಿದೆ. ಈ ಬಗ್ಗೆ ತನಿಖೆ ಆಗಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಆಗ್ರಹಿಸಿದಾಗ, ಈ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗೆ ಸಚಿವ ದಿನೇಶ್ ಗುಂಡೂರಾವ್ ನಿರ್ದೇಶನ ನೀಡಿದರು.

ಕೆಂಪು ಕಲ್ಲು ಪರವಾನಿಗೆ ಹೆಚ್ಚಿಸಿದರೆ ದರ ಕಡಿತ:

ಕೆಂಪುಕಲ್ಲು ಗಣಿಗಾರಿಕೆ ಮೇಲಿನ ರಾಜಧನ (ರಾಯಲ್ಟಿ) ಕಡಿಮೆಯಾಗಿದ್ದರೂ ಕೆಂಪು ಕಲ್ಲಿನ ದರ ಕಡಿಮೆಯಾಗಿಲ್ಲ. ಇದರಿಂದ ಗೃಹ ನಿರ್ಮಾಣ ಸೇರಿದಂತೆ ಸಾರ್ವಜನಿಕ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೂ ತೊಡಕಾಗಿದೆ ಎಂಬ ಆಕ್ಷೇಪ ಸಭೆಯಲ್ಲಿ ವ್ಯಕ್ತವಾಯಿತು.

ಕೆಂಪು ಕಲ್ಲಿನ ಗಣಿಗಾರಿಕೆಗೆ ನೀಡುತ್ತಿರುವ ಪರವಾನಿಗೆ ಸಂಖ್ಯೆ ಹೆಚ್ಚಳವಾದಾಗ ದರ ಕಡಿಮೆ ಆಗಲಿದೆ. ಕೆಂಪು ಕಲ್ಲು ತೆಗೆಯುವಲ್ಲಿ ಪ್ರಸಕ್ತ ಕಲ್ಲೊಂದಕ್ಕೆ ೨28ರೂ.ನಿಂದ 30 ರೂ. ದರವಿದೆ. ಆದರೆ ಬೇಡಿಕೆ ಹೆಚ್ಚಿದ್ದು, ಸೀಮಿತ ಕಡೆಗಳಲ್ಲಿ ಮಾತ್ರವೇ ಕಲ್ಲು ತೆಗೆಯಲು ಅವಕಾಶ ಇರುವುದರಿಂದ ಜಿಲ್ಲೆಯ ವಿವಿಧ ಕಡೆಗೆ ಪೂರೈಕೆಗೆ ಲಾರಿಗಳವರಿಗೆ ಸಾಗಾಟ ದರ ಹೆಚ್ಚಳವಾಗುತ್ತಿದೆ. ಈಗಾಗಲೇ 60 ರೂ.ಗಳಿದ್ದ ದರ 45ರೂ.ಗಳವರೆಗೆ ಇಳಿಕೆಯಾಗಿದೆ. ಹೆಚ್ಚು ಪರವಾನಿಗೆ ದೊರಕಿದಾಗ ದರವೂ ಇಳಿಕೆಯಾಗಲಿದೆ ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಮಾತನಾಡಿ, ಅರ್ಜಿ ಹಾಕಿದದವರಿಗೆ ನಾವು ಪರವಾನಿಗೆ ನೀಡುತ್ತಿದ್ದೇವೆ. ಕಳೆದ ಮೂರು ತಿಂಗಳಲ್ಲಿ 59 ಕಲ್ಲು ಗಣಿಗಾರಿಕೆದಾರರಿಗೆ ಪರವಾನಿಗೆ ನೀಡಲಾಗಿದೆ. ಒಟ್ಟು 28 ಎಕರೆ 93 ಸೆಂಟ್ಸ್ ಜಾಗದಲ್ಲಿ ಕೆಂಪು ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಹೊಸತಾಗಿ 29 ಅರ್ಜಿಗಳು ಬಂದಿವೆ. ಈ ವಾರ ಜಂಟಿ ಸರ್ವೆ ಮುಗಿದು 10 ದಿನಗಳಲ್ಲಿ ಪರವಾನಿಗೆ ನೀಡಲಾಗುವುದು ಎಂದು ಹೇಳಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article