ನಗರ ಪರ್ಯಟನೆ ಮಾಡಿದ ‘ಕನ್ನಡದ ತೇರು’
Monday, November 3, 2025
ಪುತ್ತೂರು: ಪುತ್ತೂರಿನ ಕೆಎಸ್ಆರ್ಟಿಸಿ ವಿಭಾಗದಿಂದ ಸರ್ಕಾರಿ ಬಸ್ಸೊಂದನ್ನು ಕನ್ನಡದ ತೇರಾಗಿ ಪರಿವರ್ತಿಸಿ ರಾಜ್ಯೋತ್ಸವದ ದಿನದಂದು ನಗರ ಪರ್ಯಟನೆ ಮಾಡುವುದು ಕಳೆದ ಕೆಲ ವರ್ಷಗಳಿಂದ ನಡೆದುಕೊಂಡು ಬಂದ ರೂಢಿ. ಈ ಹಿನ್ನಲೆಯಲ್ಲಿ ಕೆಎಸ್ಆರ್ಟಿಸಿ ಬಸ್ಸೊಂದನ್ನು ಕನ್ನಡ ರಥವಾಗಿ ಸಿಂಗರಿಸಲಾಯಿತು. ಕನ್ನಡದ ಅಸ್ಮಿತೆಯ ಕೆಂಪು ಮತ್ತು ಹಳದಿ ಬಣ್ಣದ ನಿಶಾನೆ, ವಸ್ತ್ರಗಳಿಂದ ಇಡೀ ಬಸ್ಸನ್ನು ಸಿಂಗರಿಸಲಾಗಿತ್ತು. ಕೆಂಪು-ಹಳದಿ ಬಣ್ಣದ ಬಲೂನ್ಗಳನ್ನು ಬಸ್ಸಿನ ಸುತ್ತ ಜೋಡಿಸಲಾಗಿತ್ತು.
ಪುತ್ತೂರು ಡಿಪ್ಪೋದಲ್ಲಿ ವಿನ್ಯಾಸಗೊಳಿಸಲಾದ ಕನ್ನಡ ತೇರನ್ನು ಕಿಲ್ಲೆ ಮೈದಾನದ ಎದುರು ನಿಲ್ಲಿಸಿ ಶಾಸಕ ಅಶೋಕ್ ರೈ ನಗರ ಪರ್ಯಟನೆಗೆ ಚಾಲನೆ ನೀಡಿದರು.
ಬಳಿಕ ಇಡೀ ಪುತ್ತೂರು ನಗರದ ಎಲ್ಲ ರಸ್ತೆಗಳಲ್ಲಿ ಬಸ್ಸು ಸಂಚರಿಸಿತು. ಕನ್ನಡ ನಾಡು ನುಡಿಯ ಸೊಬಗು, ಶ್ರೀಮಂತಿಕೆ ಸಾಗುವ ಕನ್ನಡ ಹಾಡುಗಳನ್ನು ಬಸ್ಸಿನಲ್ಲಿ ಬಿತ್ತರಿಸುತ್ತಾ ಸಾಗಿತು. ಕೆಎಸ್ಆರ್ಟಿಸಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬಸ್ಸಿನಲ್ಲಿ ಪ್ರಯಾಣಿಸಿದರು.
ಕೆಎಸ್ಆರ್ಟಿಸಿ ಕನ್ನಡ ನಾಡಿನ ಹೆಮ್ಮೆಯ ಸಾರಿಗೆ ಸಂಸ್ಥೆಯಾಗಿದೆ. ನಿತ್ಯ ಕರುನಾಡಿನ ಜನರ ಸೇವೆ ಸಲ್ಲಿಸುತ್ತಿರುವ ಸಂಸ್ಥೆ ವರ್ಷಕ್ಕೊಂದು ದಿನ ಕನ್ನಡದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಕನ್ನಡ ತೇರು ವಿನ್ಯಾಸಗೊಳಿಸಲಾಗಿದೆ. ಕಳೆದ ಅನೇಕ ವರ್ಷಗಳಿಂದ ಈ ಅಭಿಯಾನ ಪ್ರತೀ ವರ್ಷ ನವೆಂಬರ್ ೧ರಂದು ನಡೆಯುತ್ತಿದೆ. ಪುತ್ತೂರಿನ ಜನ ನಮ್ಮ ಈ ಅರಿವು ಕಾರ್ಯಕ್ರಮಕ್ಕೆ ಉತ್ತಮವಾಗಿ ಸ್ಪಂದಿಸಿದ್ದಾರೆ ಎಂದು ಡಿಪ್ಪೋ ಮ್ಯಾನೇಜರ್ ಸುಬ್ರಹ್ಮಣ್ಯ ಪ್ರಕಾಶ್ ಹೇಳಿದರು.