ಕದ್ರಿ ಪಾರ್ಕ್ನಲ್ಲಿ ಸೌಹಾರ್ದ ಕ್ರಿಸ್ಮಸ್ ಉತ್ಸವ ಉದ್ಘಾಟನೆ
Saturday, December 13, 2025
ಮಂಗಳೂರು: ಸಂತ ಮದರ್ ತೆರೆಸಾ ವೇದಿಕೆ ಮತ್ತು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ) ಜಂಟಿ ಆಶ್ರಯದಲ್ಲಿ ನಗರದ ಕದ್ರಿ ಉದ್ಯಾನವನದಲ್ಲಿ ಹಮ್ಮಿಕೊಂಡಿರುವ ಸೌಹಾರ್ದ ಕ್ರಿಸ್ಮಸ್ ಉತ್ಸವ ಶನಿವಾರ ಸಂಜೆ ರಾಷ್ಟ್ರೀಯ ಯುವ ಕ್ರೀಡಾಪಟು, ವಿದ್ಯಾರ್ಥಿ ಯುವರಾಜ್ ಕುಂದರ್ ಕೇಕ್ ಕತ್ತರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂದೇಶ ಪ್ರತಿಷ್ಠಾನದ ನಿರ್ದೇಶಕ ವಂ. ಸುದೀಪ್ ಕ್ರಿಸ್ಮಸ್ ಸಂದೇಶ ನೀಡಿದರು. ಮುಖ್ಯ ಅತಿಥಿ ಸಂತ ಅಲೋಶಿಯಸ್ ಕಾಲೇಜಿನ ಪ್ರಾಧ್ಯಾಪಕ ಡಾ. ಚಾರ್ಲ್ಸ್ ಫುಟ್ತಾದೊ ಶುಭನುಡಿಗಳನ್ನಾಡಿದರು. ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ ಸಮಾಜದಲ್ಲಿ ಸೌಹಾರ್ದತೆಯ ಅಗತ್ಯವನ್ನು ಪ್ರತಿಪಾದಿಸಿ, ನಾಡಿನಲ್ಲಿ ಶಾಂತಿ ನೆಲೆಸಲು ಯೇಸುಕ್ರಿಸ್ತನ ಆದರ್ಶಗಳನ್ನು ಪಾಲಿಸಬೇಕೆಂದು ಕರೆ ನೀಡಿದರು.
ಅತಿಥಿ, ಬ್ಯಾಂಕ್ ನೌಕರರ ಸಂಘದ ಮುಖಂಡ, ಕಲಾವಿದ ಶ್ಯಾಮ್ ಸುಂದರ್ ಜಗತ್ತು ಸುಂದರವಾಗಿರಲು ಪ್ರೀತಿ, ಸಹಬಾಳ್ವೆಯ ಮಹತ್ವ ತಿಳಿಸಿದರು.
ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿರುವ ಸ್ಕೇಟಿಂಗ್ ಪಟು ಯುವರಾಜ್ ಕುಂದರ್ ಅವರನ್ನು ಸನ್ಮಾನಿಸಲಾಯಿತು. ಕೊಡುಗೈ ದಾನಿ ಮೈಕಲ್ ಡಿಸೋಜಾರನ್ನು ಗೌರವಿಸಲಾಯಿತು. ಕ್ರಿಸ್ಮಸ್ ಖೇಲ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಂತ ಆಗ್ನೆಸ್ ಕಾಲೇಜು ಪ್ರಥಮ, ಸಂತ ಅಲೋಶಿಯಸ್ ದ್ವಿತೀಯ ಹಾಗೂ ಸೀತಾ ಭಟ್ ಬಳಗ ತೃತೀಯ ಬಹುಮಾನ ಗಳಿಸಿದರು.
ಅಧ್ಯಕ್ಷತೆಯನ್ನು ವೇದಿಕೆಯ ಅಧ್ಯಕ್ಷ ರಾಯ್ ಕ್ಯಾಸ್ತೆಲಿನೊ ವಹಿಸಿದ್ದರು. ಕಥೊಲಿಕ್ ಸಭಾ ಅಧ್ಯಕ್ಷ ಸಂತೋಷ್ ಡಿ’ಸೋಜ, ಪರಿಸರ ಪ್ರವಾಸೋದ್ಯಮ ನಿಗಮದ ಅಧ್ಯಕ್ಷೆ ಶಾಲೆಟ್ ಪಿಂಟೊ, ಉದ್ಯಮಿ ಸಂತೋಷ್ ಸಿಕ್ವೇರಾ, ಡೊಲ್ಫಿ ಡಿಸೋಜ, ವಿಲ್ಮಾ ಮೊಂತೇರೊ ಉಪಸ್ಥಿತರಿದ್ದರು.
ವೇದಿಕೆಯ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಸ್ವಾಗತಿಸಿದರು. ಜಾನ್ ರೋಹನ್ ಕಾರ್ಯಕ್ರಮ ನಿರ್ವಹಿಸಿ, ಉತ್ಸವದ ಸಂಚಾಲಕ ಸ್ಟ್ಯಾನಿ ಲೋಬೊ ವಂದಿಸಿದರು.
































































