ಮೂಡುಬಿದಿರೆ ಶ್ರೀಗಳ ಜೈನ ತೀಥ೯ಕ್ಷೇತ್ರಗಳ ಯಾತ್ರೆ
ಸ್ವಾಮೀಜಿಯವರು ನವೆಂಬರ್ ನ. 27ರಂದು ರಾಂಚಿ ಕ್ಷೇತ್ರದಿಂದ ಜೈನರ ಪವಿತ್ರ ಶಾಶ್ವತ ಸಿದ್ಧ ಕ್ಷೇತ್ರವಾದ ಸಮ್ಮೇದ ಶಿಖರ್ಜಿಗೆ ತಲುಪಿದರು. ಮರುದಿನ ಬೆಳಗ್ಗೆ ಸ್ವಾಮೀಜಿಯವರು ಸುಮಾರು 27 ಕಿ.ಮೀ.ಗಳಷ್ಟು ಪರ್ವತ ಪರಿಕ್ರಮವನ್ನು ಪೂರ್ಣಗೊಳಿಸಿ, 20 ತೀರ್ಥಂಕರರ ಮುಕ್ತಿ ಪಡೆದ ಪವಿತ್ರ ಚರಣ ದರ್ಶನ ಮಾಡಿದರು.
ಮೂಡುಬಿದಿರೆ ಸ್ವಾಮೀಜಿಯವರನ್ನು ಅಧ್ಯಕ್ಷ ಅಜಯ್ ಬಾಬು ಅರಾ ಅವರು ಪಾದ ಪೂಜೆ ಮಾಡಿ ಗೌರವಿಸಿದರು.
ಸ್ವಾಮೀಜಿಯವರು ಗುಣಾಯತನ್ ತೀರ್ಥಕ್ಕೆ ಭೇಟಿ ನೀಡಿದರು. ಅಲ್ಲಿ 108 ಮುನಿ ಸಮತಾ ಸಾಗರ್ ಹಾಗೂ ಮೂಲತಃ ಉಡುಪಿ ಜಿಲ್ಲೆ ಬಸರೂರಿನವರಾದ ಆಚಾರ್ಯ 108 ಶಂಭವ ಸಾಗರ್ ಅವರು ಉಪಸ್ಥಿತರಿದ್ದರು. ಶಿಖರ್ಜಿಯಲ್ಲಿ ನಡೆದ ಅದಿನಾಥ ಸ್ವಾಮಿ ಪಂಚ ಕಲ್ಯಾಣದ ಎರಡನೇ ದಿನದ ಸಮಾರಂಭದಲ್ಲಿ ಆಚಾರ್ಯ ತನ್ಮಯ ಸಾಗರ್ ಮುನಿ ಮಹಾರಾಜರನ್ನು ಸ್ವಾಮೀಜಿಯವರು ಗೌರವಿಸಿದರು.
ದೀಕ್ಷಾ ಕಲ್ಯಾಣದ ಕುರಿತು ಮಾತನಾಡಿದ ಭಟ್ಟಾರಕ ಸ್ವಾಮೀಜಿ, ಸಂಸಾರ ಜೀವನದಲ್ಲಿ ಗೃಹಸ್ಥ ಜೀವನ ಮತ್ತು ಸನ್ಯಾಸ ಜೀವನ ಎಂಬ ಎರಡು ವಿಭಾಗಗಳಿವೆ. ಸನ್ಯಾಸ ಜೀವನವು ಸಂಚಿತ ಕರ್ಮವನ್ನು ನಾಶ ಮಾಡಿ ಮುಕ್ತಿ ಪಡೆಯಲು ಸಹಾಯಕವಾಗಿದ್ದು, ಮಹಾ ವ್ರತಗಳು ಇದಕ್ಕೆ ನೇರವಾಗುತ್ತವೆ. ಹಾಗಾಗಿ ಭಾರತೀಯ ಸಂಸ್ಕೃತಿಯಲ್ಲಿ ಯತಿ ದೀಕ್ಷೆಗೆ ವಿಶೇಷ ಮಹತ್ವ ನೀಡಲಾಗಿದೆ ಎಂದು ನುಡಿದರು.
ಮನೋಜ್ ಜೈನ್, ಪಂಡಿತ್ ಪ್ರದೀಪ್, ಮಹೇಶ್ ಪಂಡಿತ್, ದಿಲೀಪ್ ಮೊದಲಾದವರು ಉಪಸ್ಥಿತರಿದ್ದರು.
ಶೀತಲ್ ನಾಥ ತೀರ್ಥಂಕರರ ಜನ್ಮ ಭೂಮಿಗೆ ಭೇಟಿ ನೀಡಿದರು. ಜಾರ್ಖಂಡ್ ರಾಜ್ಯದ ಇಟ್ಕೋರಿ, ಬದ್ಧಲ್ಪುರ ಕ್ಷೇತ್ರಗಳ ದರ್ಶನವನ್ನು ಮಾಡಿದರು.
