ಆದಾಯ ತೆರಿಗೆ ಕಾಯ್ದೆ-2025: ಕಾರ್ಯಾಗಾರ
ಮಂಗಳೂರಿನ ಆದಾಯ ತೆರಿಗೆ ಹೆಚ್ಚುವರಿ ಆಯುಕ್ತ ಸಿ.ಬಿ.ಸುರೇಶ್ ಕುಮಾರ್ ಮಾತನಾಡಿ ಆದಾಯ ತೆರಿಗೆ ಕಾಯ್ದೆ-2025 ದೇಶದ ಆದಾಯ ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸಿದೆ. ಬದಲಾಗುತ್ತಿರುವ ದೇಶೀಯ ಹಾಗೂ ಜಾಗತಿಕ ಆರ್ಥಿಕ ಸನ್ನಿವೇಶಗಳಿಗೆ ಇದು ಪೂರಕವಾಗಿದೆ ಎಂದು ಹೇಳಿದರು.
ಹಿಂದಿನ ಕಾಯ್ದೆಯು ಹಲವು ಕಠಿಣ ಮತ್ತು ಕ್ಲಿಷ್ಟ ನಿಯಮಗಳನ್ನು ಹೊಂದಿತ್ತು. ಇದೀಗ ಅವುಗಳನ್ನು ಬದಲಾಯಿಸಲಾ ಗಿದೆ. ಆದರೆ ಹೊಸ ಕಾಯ್ದೆಯು ಸಂಪೂರ್ಣ ಹೊಸದಲ್ಲ. ಕೆಲವೊಂದು ಸೇರ್ಪಡೆ ಮತ್ತು ಕೆಲವು ಬದಲಾವಣೆಗಳು ಇದರಲ್ಲಿವೆ. ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸುವುದು ಮತ್ತು ತೆರಿಗೆ ವ್ಯಾಜ್ಯಗಳನ್ನು ಕಡಿಮೆಗೊಳಿಸುವುದು ಇದರ ಉದ್ದೇಶವಾಗಿದೆ ಎಂದು ಹೇಳಿದರು.
ಹಿಂದಿನ ಕಾಯ್ದೆಯಲ್ಲಿದ್ದ 819 ಸೆಕ್ಷನ್ಗಳನ್ನು 536ಕ್ಕೆ ಇಳಿಸಲಾಗಿದೆ. ಈ ಎಲ್ಲಾ ಹೊಸ ತಿದ್ದುಪಡಿಗಳು ಕೇವಲ ಹೊಸ ಪ್ರಕರಣಗಳಿಗೆ ಮಾತ್ರ ಅನ್ವಯಿಸುತ್ತವೆ. ಬಾಕಿ ಇರುವ ಹಳೆಯ ಪ್ರಕರಣಗಳಿಗೆ ಇವು ಅನ್ವಯಿಸುವುದಿಲ್ಲ. ಇದರೊಂದಿಗೆ ಟಿಡಿಎಸ್, ಪಾನ್ ಕಾರ್ಡ್ ಇತ್ಯಾದಿ ಫಾರಂಗಳಲ್ಲಿ ಮಹತ್ತರ ಬದಲಾವಣೆಗಳನ್ನು ತರಲಾಗಿದೆ ಎಂದರು.
ಸರಕಾರವು ದೇಶದ ಮೂಲಸೌಕರ್ಯ ಅಭಿವೃದ್ಧಿಗಾಗಿ ಅಗತ್ಯವಿರುವ ತೆರಿಗೆಯನ್ನು ಸಂಗ್ರಹಿಸುತ್ತಿದೆ. ತೆರಿಗೆ ಪಾವ ತಿಸಿ, ಸರಕಾರದ ಎಲ್ಲಾ ಸೌಲಭ್ಯಗಳನ್ನು ಮುಕ್ತವಾಗಿ ಆನಂದಿಸಿ ಎನ್ನುವ ಸಂದೇಶವನ್ನು ನೀಡಲಾಗುತ್ತಿದೆ. ಸುಮಾರು 20,000 ಸಮಿತಿ ಸದಸ್ಯರ ಪರಿಶ್ರಮದಿಂದ ಈ ಕಾಯ್ದೆಯ ಕರಡು ಸಿದ್ಧಪಡಿಸಲಾಗಿತ್ತು. ಹೊಸ ಕಾಯ್ದೆಯು 2026ರ ಎಪ್ರಿಲ್ನಿಂದ ಜಾರಿಗೆ ಬಂದಿದೆ. ಐಪಿಸಿಯಿಂದ ಬಿಎನ್ಎಸ್ಗೆ ಬದಲಾದಂತೆ ಆದಾಯ ತೆರಿಗೆ ವ್ಯವಸ್ಥೆ ಕೂಡ ಬದಲಾಗಿದೆ ಎಂದು ಸುರೇಶ್ ಕುಮಾರ್ ಹೇಳಿದರು.
ಆದಾಯ ತೆರಿಗೆ ಉಪ ಆಯುಕ್ತ (ವಿನಾಯಿತಿಗಳು) ವೈಶಾಕ್ ಪಿ.ಆರ್. ಹೊಸ ಐಟಿ ಕಾಯ್ದೆಯ ಬದಲಾವಣೆಗಳ ಕುರಿತು ಮಾಹಿತಿ ನೀಡಿದರು.
ಕೆಸಿಸಿಐ ಉಪಾಧ್ಯಕ್ಷ ದಿವಾಕರ್ ಪೈ ಕೊಚ್ಚಿಕರ್, ಖಜಾಂಚಿ ಅಬ್ದುರ್ರಹ್ಮಾನ್ ಮುಸ್ಬಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕೆಸಿಸಿಐ ಅಧ್ಯಕ್ಷ ಪಿ.ಬಿ. ಅಹ್ಮದ್ ಮುದಸ್ಸರ್ ಸ್ವಾಗತಿಸಿದರು. ಕೆಸಿಸಿಐ ಆದಾಯ ತೆರಿಗೆ ಉಪ ಸಮಿತಿ ಅಧ್ಯಕ್ಷ ಸಿಎ ಪ್ರಸನ್ನ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಅಶ್ವಿನ್ ಪೈ ಮಾರೂರ್ ವಂದಿಸಿದರು. ಸಿಇಒ ಮೈತ್ರೇಯ ಕಾರ್ಯಕ್ರಮ ನಿರೂಪಿಸಿದರು.