Kundapura: ಜೈ ಕುಂದಾಪ್ರ ಸೇವಾ ಟ್ರಸ್ಟ್ ವತಿಯಿಂದ ಮಂದಾರ್ತಿ ಹಬ್ಬದಲ್ಲಿ ದೇಣಿಗೆ ಸಂಗ್ರಹ..!
ಕುಂದಾಪುರ: ‘ನೊಂದವರಿಗೆ ನೆರವಿನ ದಾರಿ ದೀಪ-ಯುವ ಮನಸ್ಸುಗಳಿಗೆ ಸ್ಫೂರ್ತಿ’ಯಾದ ಜೈ ಕುಂದಾಪ್ರ ಸೇವಾ ಟ್ರಸ್ಟ್ (ರಿ.) ಸಂಸ್ಥೆಯು ಇತ್ತೀಚೆಗೆ ನಡೆದ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಗೆಂಡ ಸೇವೆ ಹಾಗೂ ರಥೋತ್ಸವದ ಜಾತ್ರೆಯಲ್ಲಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹ ಮಾಡಿತು.
ಅನಾರೋಗ್ಯ ಪೀಡಿತ ಪುಟ್ಟ ಮಕ್ಕಳ ಚಿಕಿತ್ಸೆಯ ವೆಚ್ಚವಾಗಿ, ಎರಡು ಕಿಡ್ನಿ ವೈಫಲ್ಯದಿಂದ ಹಾಸಿಗೆ ಹಿಡಿದ, ಕ್ಯಾನ್ಸರ್ ಕಾಯಿಲೆಯಿಂದ ಬಳತ್ತಿರುವವರಿಗೆ ಮಂದಾರ್ತಿ ಹಬ್ಬದಲ್ಲಿ ವಿಶೇಷವಾಗಿ ಭಕ್ತಿ ಮತ್ತು ಶೃದ್ಧೆಯಿಂದ ಸಂಸ್ಥೆಯ ಓರ್ವ ಸದಸ್ಯರು ಆಂಜನೇಯ ವೇಷ ಧರಿಸಿ ಮೆರವಣಿಗೆ, ಚೆಂಡೆ ವಾದನದ ಮೂಲಕ ದೇಣಿಗೆ ಸಂಗ್ರಹಿಸಲಾಯಿತು.
ಜೈ ಕುಂದಾಪ್ರ ಸೇವಾ ಸಂಸ್ಥೆಯಲ್ಲಿ ಕಳೆದ 6-7 ವರ್ಷಗಳಿಂದ ಸಂಸ್ಥೆಯ ಜೊತೆಗೆ ಸಕ್ರಿಯವಾಗಿ ಯೋಜನೆಗಳಿಗೆ ಸಹಕಾರ ಪ್ರೋತ್ಸಾಹ ನೀಡುವ ಗೌರವ ಸಲಹೆಗಾರ ಆದಿತ್ಯ ಕೋಟ ಅವರು ಆಂಜನೇಯ ವೇಷ ಧರಿಸಿ ಜೈ ಕುಂದಾಪ್ರ ತಂಡಕ್ಕೆ ಸಾಥ್ ನೀಡಿದರು.
ಶ್ರೀ ಮಹಾಂಕಾಳಿ ಮಾರಿಯಮ್ಮ ಚೆಂಡೆಬಳಗ ಖಾರ್ವಿಕೇರಿ-ಗಂಗೊಳ್ಳಿ ಅವರು ಜೈ ಕುಂದಾಪ್ರ ಸೇವಾ ಸಂಸ್ಥೆಯ ದೇಣಿಗೆ ಸಂಗ್ರಹ ಕಾರ್ಯಕ್ರಮದಲ್ಲಿ ಸಹಕರಿಸಿದರು. ಜೈ ಕುಂದಾಪ್ರ ಸೇವಾ ಸಂಸ್ಥೆಯ ಯೋಜನೆಗೆ ಧನ ಸಹಾಯ ಮಾಡಿರುವ ಭಕ್ತಾದಿಗಳಿಗೆ, ದಾನಿಗಳಿಗೆ ಸರ್ವ ಸದಸ್ಯರ ಪರವಾಗಿ ಟೀಮ್ ಜೈ ಕುಂದಾಪ್ರ ಸೇವಾ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಪುಂಡಲೀಕ ಮೊಗವೀರ್ ತೆಕ್ಕಟ್ಟೆ ಅವರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ಜೈ ಕುಂದಾಪ್ರ ಸೇವಾ ಟ್ರಸ್ಟ್ ಕಾರ್ಯದರ್ಶಿ ದಿವ್ಯ ಕುಂದಾಪುರ, ಮನೀಶ್ ಕುಲಾಲ್ ಜನ್ನಾಡಿ, ಸಂತು ಕೋಟ, ಮಹಿಳಾ ಘಟಕದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.





