
Moodubidire: ಉಳ್ಳಾಲ ಕೋಟೆ ಜಮೀನು ಪ್ರಕರಣ ಸುಖಾಂತ್ಯ
ಮೂಡುಬಿದಿರೆ: ಇಲ್ಲಿನ ಕರಿಂಜೆಯ ಉಳ್ಳಾಲಕೋಟೆ ದೈವಸ್ಥಾನದ ಜಾಗದ ಸುತ್ತಲೂ ಜೆಸಿಬಿ ಮೂಲಕ ಅಗೆದು, ಹಾನಿ ಮಾಡಿರುವ ಮೂಲಕ ಭುಗಿಲೆದ್ದ ದೈವಸ್ಥಾನದ ಜಾಗದ ಕುರಿತಾದ ತಕರಾರು ಇದೀಗ ಸುಖಾಂತ್ಯಗೊಂಡಿದೆ.
ಪ್ರಕರಣವು ಪೊಲೀಸ್ ಸ್ಟೇಶನ್ ಮತ್ತು ನ್ಯಾಯಾಲಯದ ಹಾದಿ ತುಳಿದಿತ್ತು. ಪ್ರಕರಣ ಇತ್ಯರ್ಥವಾಗುವ ತನಕ ದೈವಸ್ಥಾನ ಮಾತ್ರವಲ್ಲ ಊರಿನ ಯಾವುದೇ ಮನೆಮನೆಗಳಲ್ಲಿ ಕೋಲ ಬಲಿ ಉತ್ಸವ ನಡೆಸದಿರಲು ಊರವರು ದೈವಸ್ಥಾನದಲ್ಲಿ ತೀರ್ಮಾನಿಸಿದ್ದರು.
ದೈವಸ್ಥಾನದಲ್ಲಿ ಕರಿಂಜೆಗುತ್ತು ಕೃಷ್ಣರಾಜ ಹೆಗ್ಡೆಯವರ ಹಿರಿತನದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಎರಡೂ ಕಡೆಯವರ ನಡುವೆ ಸೌಹಾರ್ದ ಮಾತುಕತೆ ನಡೆದು, 15 ದಿನಗಳ ಒಳಗೆನಡೆದ ತಪ್ಪುಗಳನ್ನು ಸರಿಪಡಿಸಿ ಗ್ರಾಮ ದೈವಗಳ ಅಚಾರ ವಿಚಾರ ಪರಂಪರೆಗೆ ಚ್ಯುತಿಬಾರದಂತೆ ನೋಡಿಕೊಳ್ಳಲು ಒಮ್ಮತದಿಂದ ನಿರ್ಧರಿಸಲಾಯಿತು.
ಎರಡೂ ಕಡೆಯವರು ಹೂಡಿರುವ ದಾವೆಗಳನ್ನು ಹಿಂಪಡೆಯುವರೇ ತೀರ್ಮಾನಿಸಲಾಯಿತು. ರಾಜಿ ಸಂಧಾನ ನಡೆಸುವಲ್ಲಿ ಯಶಸ್ವಿಯಾದ ಮಂಗಳೂರಿನ ವಕೀಲ ಮಯೂರ ಕೀರ್ತಿ, ಸ್ಥಳದಲ್ಲಿ ಆಗಿರುವ ಹಾನಿ ಸರಿಪಡಿಸಿ, ಅವಶ್ಯವಿರುವ ಜಾಗವನ್ನು ‘ದಾನ ಶಾಸನ’ ಮೂಲಕ ಬಿಟ್ಟುಕೊಡುವುದಾಗಿ ತಿಳಿಸಿದ ಅಮರೇಂದ್ರ ಎಚ್., ಮಾರೂರು ಖಂಡಿಗ ರಾಮದಾಸ ಆಸ್ರಣ್ಣ, ಪ್ರಸನ್ನ ಅಸ್ರಣ್ಣ ಸುಕೀರ್ತಿ ಜೈನ್, ಶ್ರೀಧರ ಜೈನ್, ನಾಗೇಶ್ ಪೈ, ಯಶವಂತ ಶೆಟ್ಟಿ ಸಾಧು ಪೂಜಾರಿ ಅಡಿಮಾರು, ದಿನೇಶ್ ಪೂಜಾರಿ, ಕಾರ್ತಿಕ್ ರಾವ್, ಕೂಶ ಪೂಜಾರಿ, ಸುಧಾಕರ ಸಹಿತ ಊರಿನವರು ಪಾಲ್ಗೊಂಡಿದ್ದರು.