Mangalore: ತುಳುನಾಡಿನ ಜಾನಪದ ಕ್ರೀಡೆ ಕಂಬಳದಲ್ಲಿ ಭಾರತೀಯ ವೈದ್ಯಕೀಯ(ಐಎಂಎ)ಸಂಘದ ಪ್ರವೇಶ
Thursday, April 11, 2024
ಮಂಗಳೂರು: ಭಾರತೀಯ ವೈದ್ಯಕೀಯ ಸಂಘ ಮಂಗಳೂರು ಪ್ರಪ್ರಥಮ ಬಾರಿಗೆ ವೈದ್ಯಕೀಯ ಸೇವೆಯ ಜೊತೆಗೆ ತುಳುನಾಡಿನ ಜಾನಪದ ಕ್ರೀಡೆ ಕಂಬಳದಲ್ಲಿ ಪಾಲ್ಗೊಳ್ಳಲಿದ್ದು, ಡಾ. ಅವಿನ್ ಆಳ್ವ ಅವರ ನೇತೃತ್ವದಲ್ಲಿ ವೈದ್ಯಕೀಯ ಸಂಘವು ಸ್ವತಃ ಕಂಬಳದ ಕೋಣಗಳನ್ನು ಕಂಬಳದ ಕರೆಗೆ ಇಳಿಸಲಿದೆ. ಇದರೊಂದಿಗೆ ತುಳು ನಾಡಿನ ಜಾನಪದ ಕ್ರೀಡಾ ಸಂಸ್ಕೃತಿಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದೆ ಎಂದು ಭಾರತೀಯ ವೈದ್ಯಕೀಯ(ಐಎಂಎ) ಸಂಘದ ಮಂಗಳೂರು ಘಟಕದ ಅಧ್ಯಕ್ಷ ಡಾ. ರಂಜನ್ ಆರ್.ಕೆ. ತಿಳಿಸಿದ್ದಾರೆ.
ಅವರು ಎ.10 ರಂದು ನಗರದ ಐಎಂಎ ಸಭಾಂಗಣದಲ್ಲಿಂದು ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯನ್ನು ದ್ದೇಶಿಸಿ ಮಾತನಾಡುತ್ತಿದ್ದರು.
ಎ.12 ರಂದು ಸಂಜೆ 5 ಗಂಟೆಗೆ ಆರಂಭಗೊಳ್ಳುವ ಕರಾವಳಿ ಜೋಡುಕರೆ ಕಂಬಳ ಟ್ರಸ್ಟ್ ಇದರ ಆಯೋಜನೆಯಲ್ಲಿ ಗುರುಪುರದಲ್ಲಿ ನಡೆಯುವ ‘ಮೂಳೂರು-ಅಡ್ಡೂರು’ ಹೊನಲು ಬೆಳಕಿನ ಜೋಡುಕರೆ ಕಂಬಳ ಉತ್ಸವದಲ್ಲಿ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರು, ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು ಸಕ್ರಿಯವಾಗಿ ಪಾಲ್ಗೊಳ್ಳಲಿದ್ದೇವೆ. ಈ ನಿಟ್ಟಿನಲ್ಲಿ ಕಂಬಳ ಸಮಿತಿಯವರ ಜೊತೆಗೆ ಈಗಾಗಲೇ ಮಾತುಕತೆಯನ್ನು ನಡೆಸಿದ್ದು, ಸಮಿತಿಯವರು ನಮಗೆ ಸಂಪೂರ್ಣವಾಗಿ ಸಹಕಾರ ನೀಡುವುದಾಗಿ ಭರವಸೆಯನ್ನು ನೀಡಿದ್ದಾರೆ ಎಂದು ಡಾ. ರಂಜನ್ ತಿಳಿಸಿದರು.
ಭಾರತೀಯ ವೈದ್ಯಕೀಯ ಸಂಘ ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಡಾ. ಅವಿನ್ ಆಳ್ವ, ಪೂರ್ವ ಅಧ್ಯಕ್ಷ ಜೊರೊಮ್ ಪಿಂಟೊ, ಕೋಶಾಧಿಕಾರಿ ಡಾ. ಪ್ರಶಾಂತ್, ಕಾರ್ಯಕಾರಿ ಸಮಿತಿ ಸದಸ್ಯ ಡಾ. ನಂದ ಕಿಶೋರ್ ಮತ್ತಿತರರು ಉಪಸ್ಥಿತರಿದ್ದರು.