Mangalore: ಸಂವಿಧಾನವನ್ನು ಉಳಿಸುವ, ರಕ್ಷಿಸುವ ನಮ್ಮೆಲ್ಲರ ಜವಾಬ್ದಾರಿ: ಬಿ. ರಮಾನಾಥ ರೈ
ಮಂಗಳೂರು: ಬಿಜೆಪಿ ಸಂವಿಧಾನ ಬದಲಿಸಲು ಹೊರಟಿದ್ದು, ಅದಕ್ಕಾಗಿ ಪ್ರಯತ್ನ ಮುಂದುವರಿಸಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನವನ್ನು ರಕ್ಷಣೆ ಉಳಿಸುವ ಮತ್ತು ರಕ್ಷಣೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 133ನೇ ಜನ್ಮದಿನಾಚರಣೆ ಅಂಗವಾಗಿ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಬಾಬಾ ಸಾಹೇಬರ ಬಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ ಬಳಿಕ ಅವರು ಮಾತನಾಡುತ್ತಿದ್ದರು.
ಹಿಂದಿನಿಂದಲೂ ಕಾಂಗ್ರೆಸ್ ಪಕ್ಷ ದುರ್ಬಲ ವರ್ಗದ ಪರವಾಗಿ ಕಾರ್ಯಕ್ರಮಗಳನ್ನು ರೂಪಿಸುತಾ ಬಂದಿದೆ. ಹಿಂದೆ ಬೇರೆ ಬೇರೆ ಸಂದರ್ಭದಲ್ಲಿ ಸಂವಿಧಾನ ತಿದ್ದುಪಡಿ ತರಲಾಗಿತ್ತಾದರೂ ಸಮಾಜದ ದುರ್ಬಲ ವರ್ಗದ ಪರವಾಗಿ ಆಗಿದೆ. ಅಂಬೇಡ್ಕರ್ ಅವರು ಜೀವನದುದ್ದಕ್ಕೂ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ದೇಶದ ಸಾಮಾಜಿಕ ವ್ಯವಸ್ಥೆಗೆ ಸಮಾನತೆಯ ಸ್ಪರ್ಶ ನೀಡಿದ್ದು ಬಾಬಾ ಸಾಹೇಬರು. ಅವರು ಸಂವಿಧಾನದ ಮೂಲಕ ನಮಗೆ ತೋರಿಸಿಕೊಟ್ಟ ಹಾದಿಯಲ್ಲಿ ಸಾಗೋಣ ಎಂದು ಕರೆ ನೀಡಿದರು.
ಕೆ. ಅಶ್ರಫ್, ನೀರಜ್ ಚಂದ್ರಪಾಲ್, ಟಿ. ಪೊನ್ನಯ್ಯ, ಪ್ರಕಾಶ್ ಸಾಲ್ಯಾನ್, ಎ.ಸಿ. ವಿನಯರಾಜ್, ವಿಶ್ವಾಸ್ ದಾಸ್, ಶುಭೋದಯ ಆಳ್ವ, ಮಂಜುಳಾ ನಾಯಕ್, ವಳವೂರ್ ಮೊಹಮ್ಮದ್, ಸುರೇಶ್ ಪೂಜಾರಿ, ಸಂಜನಾ ಛಲವಾದಿ, ಉದಯ ಕುಂದರ್, ಸಮರ್ಥ್ ಭಟ್, ನೆಲ್ಸನ್, ಸುರೇಶ್ ಕುಲಾಲ್ ನಾವೂರ್ ಮತ್ತಿತರರು ಉಪಸ್ಥಿತರಿದ್ದರು. ಮಾಜಿ ಮೇಯರ್ ಮಹಾಬಲ ಮಾರ್ಲ ಸ್ವಾಗತಿಸಿ, ಶಬ್ಬೀರ್ ಎಸ್. ವಂದಿಸಿದರು.