Nelyadi: ಸ್ಥಳೀಯ ಬೆಳೆಗಾರರ ನಿರ್ಲಕ್ಷಿಸಿ ಅಡಿಕೆ ಆಮದು: ಪದ್ಮರಾಜ್ ಆರ್. ಪೂಜಾರಿ
ನೆಲ್ಯಾಡಿ: ದೇಶೀಯ ಅಡಿಕೆ ಬೆಳೆಯನ್ನು ಬಿಟ್ಟು, ಹೊರದೇಶದಿಂದ ಅಡಿಕೆ ಆಮದು ಮಾಡಿಕೊಂಡಿರುವ ಕೇಂದ್ರ ಸರ್ಕಾರ, ಸ್ಥಳೀಯ ಬೆಳೆಗಾರರನ್ನು ನಿರ್ಲಕ್ಷಿಸಿದೆ ಎಂದು ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಹೇಳಿದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನೆಲ್ಯಾಡಿಯಲ್ಲಿ ಗುರುವಾರ ನಡೆದ ಬಹಿರಂಗ ಚುನಾವಣಾ ಸಭೆಯಲ್ಲಿ ಮಾತನಾಡಿದರು.
ಅಡಿಕೆ ಸಮಸ್ಯೆ, ಹೆದ್ದಾರಿ ಕಾಮಗಾರಿ ಸೇರಿದಂತೆ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸ ಆಗಬೇಕಿದೆ. ಸಂಸತ್ ಸದಸ್ಯನಾಗಿ ಆಯ್ಕೆಯಾದ ಮೇಲೆ ತಿಂಗಳಿಗೊಂದು ದಿನ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಿ, ಎಲ್ಲರ ಸಹಕಾರ ಪಡೆದುಕೊಂಡು ಅಭಿವೃದ್ಧಿ ಕಾರ್ಯ ಮಾಡಲಾಗುವುದು ಎಂದರು.
ನಾನೋರ್ವ ಹಿಂದು. ನನ್ನ ಧರ್ಮ ನನಗೆ ಹೇಳಿಕೊಟ್ಟಿರುವ ಆಚಾರ-ವಿಚಾರವನ್ನು ನನ್ನ ಜೀವನದಲ್ಲಿ ಪಾಲಿಸುತ್ತಿದ್ದೇನೆ. ಎಲ್ಲರನ್ನು ಪ್ರೀತಿಸಿ ಎಂದು ನನ್ನ ಧರ್ಮ ನನಗೆ ಹೇಳಿಕೊಟ್ಟಿದೆ. ಹಾಗಾಗಿ ಯಾರನ್ನೂ ದ್ವೇಷ ಮಾಡುವುದು ಬೇಡ. ಪ್ರೀತಿಯಿಂದ ಜನರನ್ನು ಗೆಲ್ಲಬೇಕು ಎಂದರು.
ದೇಶ ಸದೃಢ ಆಗಬೇಕೆನ್ನುವ ವಿರೋಧ ಪಕ್ಷದವರು, ಹಲವು ಮನೆಗಳನ್ನು ಅನಾಥವಾಗಿಸಿದ್ದಾರೆ. ಹೀಗಾದರೆ ದೇಶ ಸದೃಢವಾಗುವುದು ಹೇಗೆ ಎಂದು ಪ್ರಶ್ನಿಸಿದ ಅವರು, ಇದು ಪದ್ಮರಾಜ್ ಗೆ ಸಿಕ್ಕ ಅವಕಾಶ ಅಲ್ಲ. ಹಿಂದುಳಿದ ವರ್ಗದ ಪ್ರತಿಯೋರ್ವ ವ್ಯಕ್ತಿಗೂ ಸಿಕ್ಕಿರುವ ಅವಕಾಶ. ಹಿಂದುಳಿದ ವರ್ಗದ ಅಭ್ಯುದಯಕ್ಕಾಗಿ ಕೆಲಸ ಮಾಡುತ್ತೇನೆ ಎಂದರು.
ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ವೆಂಕಪ್ಪ ಗೌಡ ಮಾತನಾಡಿ, ಜನರ ಬಳಿಗೆ ಹೋಗಿ ಗ್ಯಾರೆಂಟಿ ಯೋಜನೆಗಳ ಬಗ್ಗೆ ಕೇಳಿದರೆ, ಬಿಜೆಪಿಗರು ನಿರ್ಲಕ್ಷ್ಯ ಮಾಡುತ್ತಾರೆ. ಆದ್ದರಿಂದ ಮಹಿಳೆಯರ ಬಳಿ ಕೇಳಿ - ಅವರು ತಮಗೆ ಸಿಕ್ಕ ಗ್ಯಾರೆಂಟಿ ಯೋಜನೆಗಳ ಬಗ್ಗೆ ತಿಳಿಸುತ್ತಾರೆ. ಹಾಗಾಗಿ ಮಹಿಳಾ ಕಾರ್ಯಕರ್ತರು ಮನೆಮನೆಗೆ ತೆರಳಿ ಗ್ಯಾರೆಂಟಿ ಯೋಜನೆಗಳ ಬಗ್ಗೆ ತಿಳಿಸಿ ಎಂದರು.
ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಜಯಪ್ರಕಾಶ್, ಕಿರಣ್ ಬುಡ್ಲೆಗುತ್ತು, ಕೃಷ್ಣಪ್ಪ, ಉಷಾ ಅಂಚನ್, ವಿಜಯ್ ಕುಮಾರ್ ಸೊರಕೆ, ಪಿ.ಪಿ. ವರ್ಗೀಸ್, ಕೆ.ಪಿ. ಥಾಮಸ್, ಅಶೋಕ್, ಬೂತ್ ಹಾಗೂ ಗ್ರಾಮ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಭೇಟಿ..
ಗೋಳಿತ್ತೊಟ್ಟು ಕೋಲ್ಪೆ ಮಸೀದಿ, ನೆಲ್ಯಾಡಿ ಜ್ಞಾನೋದಯ ಬೆಥನಿ ಪಿಯು ಕಾಲೇಜಿಗೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಭೇಟಿ ನೀಡಿದರು. ಕಾಲೇಜು ಪ್ರಾಂಶುಪಾಲ ಡಾ. ಫಾ. ವರ್ಗೀಸ್ ಕೈಪನಡ್ಕ ಶುಭಹಾರೈಸಿದರು. ಉಪಪ್ರಾಂಶುಪಾಲ ಜೋಸ್ ಎಂ.ಜೆ., ಕೆಪಿಸಿಸಿ ಸಂಯೋಜಕ ಕೃಷ್ಣಪ್ಪ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಡಾ. ರಘು, ಸರ್ವೋತ್ತಮ ಗೌಡ, ಥೋಮಸ್ ನೆಲ್ಯಾಡಿ, ಪಿ.ಪಿ. ವರ್ಗೀಸ್, ವಿಜಯ್ ಕುಮಾರ್ ಸೊರಕೆ, ಕಾಂಗ್ರೆಸ್ ಕಡಬ ತಾಲೂಕು ಸಂಯೋಜಕ ಪಿ.ಪಿ. ವರ್ಗೀಸ್, ಕೆಪಿಸಿಸಿ ಕಾನೂನು ಹಾಗೂ ಮಾನವ ಹಕ್ಕು ವಿಭಾಗದ ಪ್ರ. ಕಾರ್ಯದರ್ಶಿ ಎಸಿ ಜಯರಾಜ್, ಜಿಲ್ಲಾ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಸಮಿತಿ ಸದಸ್ಯೆ ಉಷಾ ಅಂಚನ್, ಮಸೀದಿ ಅಧ್ಯಕ್ಷ ಕೆ.ಕೆ. ಅಬೂಬಕ್ಕರ್, ಕೆ.ಕೆ. ಇಸ್ಮಾಯಿಲ್, ಯು.ಕೆ. ಉಮ್ಮರ್, ಕೆ. ಮಹಮ್ಮದ್, ಅಬ್ದುಲ್ ಕುಂಞಿ, ಇಕ್ಬಾಲ್ ಎಸ್., ಹಾರೀಸ್ ಕೌಸರಿ, ಎಂ.ಕೆ. ರಹೀಮ್, ಮುಸ್ತಫಾ ಎಂ., ಕಾಂಗ್ರೆಸ್ ಮುಖಂಡರಾದ ಕೆ.ಪಿ. ತೋಮಸ್, ಜೋಸ್ ಮಾಥಾ ಮೊದಲಾದವರು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಶೆಟ್ಟಿ ಸ್ವಾಗತಿಸಿ, ಸರ್ವೋತ್ತಮ ಗೌಡ ವಂದಿಸಿದರು.