.jpeg)
ಸಂಶಯಾಸ್ಪದ ಸಾವು ಪ್ರಕರಣ: ಸಹೋದರ ಪೊಲೀಸ್ ವಶಕ್ಕೆ
Wednesday, October 30, 2024
ಕಟೀಲು: ಅನುಮಾನಾಸ್ಪದವಾಗಿ ಸಾವಿಗೀಡಾದ ರೀತಿಯಲ್ಲಿ ಕಟೀಲು-ಗಿಡಿಗೆರೆ ಸಮೀಪ ಭಾನುವಾರ ಬೆಳಿಗ್ಗೆ ವ್ಯಕ್ತಿಯೊಬ್ಬನ ಮೃತದೇಹ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ತನಿಖೆಯ ವೇಳೆ ಸಂಶಯಗಳು ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ವಿಶೇಷ ತಂಡಗಳಿಂದ ತನಿಖಾ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಟೀಲು-ಕೊಂಡೆಮೂಲ ನಿವಾಸಿ ತಾರನಾಥ (40) ಎಂಬಾತ ಕೇಬಲ್ ವಯರ್ ಕುತ್ತಿಗೆಗೆ ಬಿಗಿದು ಮೃತಪಟ್ಟು ಅಂಗಾತ ಮಲಗಿದ ಸ್ಥಿತಿಯಲ್ಲಿ ಮನೆಯಿಂದ 100ಮೀ. ದೂರದಲ್ಲಿ ಶವ ಪತ್ತೆಯಾಗಿದ್ದು ಶನಿವಾರ ಸಂಜೆ ಮನೆಯಲ್ಲಿ ಮಾತಿನ ಚಕಮಕಿ ನಡೆದ ಬಳಿಕ ಬಾರೊಂದಕ್ಕೆ ತೆರಳಿ ಮಧ್ಯಸೇವನೆ ಮಾಡಿದ್ದನೆನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಮನೆಯಲ್ಲಿಯೇ ಇದ್ದ ತಾರನಾಥನ ಸಹೋದರನನ್ನು ಬಜಪೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮೃತನ ಮನೆಪರಿಸರ ಸ್ಥಳೀಯರಲ್ಲಿ ವಿಚಾರ ವಿನಿಮಯ ನಡೆಸಲಾಗಿದ್ದು ಸಮೀಪದ ಸಿಸಿ ಕ್ಯಾಮೆರಾ ದಾಖಲೆಗಳನ್ನು ಪರಿಶೀಲಿಸಿಲಾಗಿದೆ.
ಮರಣೋತ್ತರ ಪರೀಕ್ಷೆ ಪ್ರಕ್ರಿಯೆ ಅಂತಿಮಗೊಂಡಿಲ್ಲವಾದ ಕಾರಣ ವರದಿ ಪಡೆದ ಬಳಿಕವಷ್ಟೇ ಈ ಅನುಮಾನಾಸ್ಪದ ಸಾವು ಆತ್ಮಹತ್ಯೆಯೋ? ಕೊಲೆಯೋ? ಎಂಬುದರ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.