
ಕಾಂಗ್ರೆಸ್ ಸರ್ಕಾರದಿಂದಾಗಿ ರೈತರಿಗೆ ಆತ್ಮಹತ್ಯೆ ಮಾಡುವ ಸ್ಥಿತಿ: ಶಾಸಕ ಹರೀಶ್ ಪೂಂಜ
ಬೆಳ್ತಂಗಡಿ: 1974ರಲ್ಲಿ ಗುಪ್ತವಾಗಿ ಮಾಡಿದ ನೋಟಿಫಿಕೇಶನ್ ಮತ್ತು ಈಗಿನ ಕಾಂಗ್ರೆಸ್ ಸರ್ಕಾರ ಅತಿಯಾಗಿ ಮುಸ್ಲಿಂ ಸಮುದಾಯವನ್ನು ಒಲೈಕೆ ಮಾಡಲು ಹೊರಟ ಪರಿಣಾಮ ಸಾವಿರಾರು ರೈತರ ಕೃಷಿ ಜಮೀನು ವಕ್ಫ್ ಅಸ್ತಿಯಾಗುತ್ತಿದೆ. ಇದರಿಂದ ಸಾವಿರಾರು ರೈತರು ಆತ್ಮಹತ್ಯೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಿನ ಸರ್ಕಾರ ಗ್ಯಾರಂಟಿ ಯೋಜನೆ ನೆಪದಲ್ಲಿ ಅಧಿಕಾರಕ್ಕೆ ಬಂದಿದೆ. ಈಗ ಜನರಿಗೆ ಸರಿಯಾಗಿ ಗ್ಯಾರಂಟಿ ಯೋಜನೆ ನೀಡದೆ ಜನರನ್ನು ಮೋಸಮಾಡುತ್ತಿದೆ. ಸರ್ಕಾರ ಆರ್ಥಿಕ ದಿವಾಳಿಯಾಗಿದ್ದು ಮಳೆ ಹಾನಿಗೆ ಪರಿಹಾರ ನೀಡುತ್ತಿಲ್ಲ. ರಸ್ತೆ ಅಭಿವೃದ್ಧಿಗೆ ಹಣವಿಲ್ಲ. ಅಂಗವಿಕಲರ ಅನುದಾನ ಬರುತ್ತಿಲ್ಲ. ಸರ್ಕಾರಿ ಶಾಲಾ ಕಟ್ಟಡ ಹಾನಿಗೂ ಹಣ ನೀಡುತ್ತಿಲ್ಲ. ಇದೀಗ ವಕ್ಫ್ ಆಸ್ತಿ ಗೊಂದಲದಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗುತ್ತಿದೆ ಎಂದರು.
ಮೂಡ ಹಗರಣದಲ್ಲಿ ಸ್ವತಃ ಮುಖ್ಯಮಂತ್ರಿಗಳ ಕುಟುಂಬ ಭಾಗಿಯಾಗಿದೆ. ಎಸ್ಸಿ/ಎಸ್ಟಿ ಅನುದಾನ ದುರುಪಯೋಗ ಇನ್ನಿತರ ಹಗರಣಗಳಿಂದ ಕಾಂಗ್ರೆಸ್ ಸರ್ಕಾರ ಜನರ ಮುಂದೆ ನಿಲ್ಲಲು ಭಯ ಪಡುತ್ತಿದೆ. ಬಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ 1500 ವರ್ಷ ಇತಿಹಾಸದ ದೇವಸ್ಥಾನದ ಆಸ್ತಿ ವಕ್ಫ್ ಎಂದು ಆರ್ಟಿಸಿಯಲ್ಲಿ ಬಂದಿದೆ. ಸಚಿವ ಎಂ.ಬಿ. ಪಾಟೀಲ್ ಅವರ ಕ್ಷೇತ್ರದಲ್ಲಿ ಇಡೀ ಗ್ರಾಮವೇ ವಕ್ಫ್ ಆಸ್ತಿ ಆಗಿದೆ. ದ.ಕ ಜಿಲ್ಲೆಯಲ್ಲಿ ಕೂಡ ವಕ್ಫ್ ಆಸ್ತಿ ಇರುವ ಬಗ್ಗೆ ಮಾಹಿತಿ ಬಂದಿದೆ. ಬಿಜೆಪಿ ಈ ಬಗ್ಗೆ ಪ್ರತಿ ಮಂಡಲ ವ್ಯಾಪ್ತಿಯಲ್ಲಿ ಮಾಹಿತಿ ಕಲೆಹಾಕುತ್ತಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದ ಈ ಷಡ್ಯಂತ್ರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿಗಳಾದ ಜಯಾನಂದ ಗೌಡ, ಪ್ರಶಾಂತ್ ಪಾರೆಂಕಿ ಉಪಸ್ಥಿತರಿದ್ದರು.