
ಬಾಂಗ್ಲಾದ ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧ ಧ್ವನಿ ಎತ್ತದ, ಕಾಂಗ್ರೆಸ್ ಎಡಪಕ್ಷಗಳಿಗೆ ಪ್ಯಾಲೆಸ್ತೇನ್ ಬೇಗ ಕಾಣುತ್ತದೆ: ಛಾಟಿ ಬೀಸಿದ ಡಾ. ಭರತ್ ಶೆಟ್ಟಿ ವೈ
ಮಂಗಳೂರು: ಪ್ಯಾಲಸ್ತೇನ್ ಪರ ಹೋರಾಟ ಮಾಡುವ ಮೊದಲು ಇಸ್ರೇಲ್ ಮೇಲೆ ಉಗ್ರರು ನಡೆಸಿದ ನರಮೇಧ, ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆಯುವ ದೌರ್ಜನ್ಯದ ಬಗ್ಗೆಯೂ ಕಾಂಗ್ರೆಸ್, ಎಡಪಕ್ಷಗಳು ಕನಿಕರ ತೋರಿ ಖಂಡಿಸುವ ಕೆಲಸ ಮಾಡಬೇಕು ಎಂದು ಶಾಸಕ ಡಾ. ಭರತ್ ಶೆಟ್ಟಿ ವೈ ಪ್ರಕಟಣೆಯಲ್ಲಿ ಛಾಟಿ ಬೀಸಿದ್ದಾರೆ.
ಬಾಂಗ್ಲಾ ದೇಶದಲ್ಲಿ ಹಿಂದೂಗಳನ್ನು ಹತ್ಯೆ ಮಾಡಿ ಅವರ ಆಸ್ತಿ, ಮನೆಗೆ ಬೆಂಕಿ ಹಾಕಿದಾಗಲೂ ಈ ಎಡ ಪಕ್ಷಗಳಿಗೆ ಕನಿಕರ ಬಂದಿಲ್ಲ. ಮೌನವಾಗಿ ವೀಕ್ಷಿಸಿ ಸಂಭ್ರಮಿಸುತ್ತಿದ್ದಾರೆ. ರೈತರ ಮೇಲೆ, ದೇಶದ ಜನರನ್ನು ಬೀದಿಗೆ ತಳ್ಳುತ್ತಿರುವ ವಕ್ಫ್ ದೌರ್ಜನ್ಯದ ಬಗ್ಗೆಯೂ ಚಕಾರ ಎತ್ತದ ಈ ಎಡ ಪಕ್ಷಗಳು ಮೌನಕ್ಕೆ ಶರಣಾಗಿವೆ.
ಇಸ್ರೇಲ್ನ ಯಹೂದಿಗಳ ಮೇಲೆ ನಡೆದ ದಾಳಿಯನ್ನು ಕಂಡು ಕಾಣದಂತೆ ಇರುವ ಮನಸ್ಥಿತಿಯ ಮಂದಿ ಇಂದು ಉಗ್ರರ ನಾಮಾವಶೇಷವಾಗುತ್ತಿರುವಾಗ ಪ್ರತಿಭಟನೆಯ ನೆನಪಾಗುತ್ತದೆ.
ಪ್ಯಾಲಸ್ತೇನ್ ದಾಳಿ ಮಾಡಲು ಪ್ರಚೋದನೆ ನೀಡಿದವರನ್ನು ಮೊದಲು ಖಂಡಿಸುವ ಧೈರ್ಯ ತೋರಬೇಕು. ಕೇವಲ ಹಿಂದೂ ವಿರೋಧಿ ಓಟ್ ಬ್ಯಾಂಕ್ ಮಾಡುವ ಕಾಂಗ್ರೆಸ್ ಸಹಿತ ಇಂತಹ ರಾಜಕೀಯ ಪಕ್ಷಗಳ ಬಂಡವಾಳ, ಮೊಸಳೆ ಕಣ್ಣೀರು ಜನರಿಗೆ ಅರಿವಾಗತೊಡಗಿದ್ದು ದೇಶದಲ್ಲಿ ರಾಷ್ಟ್ರೀಯ ತೆಯ ಚಿಂತನೆಯ ಧ್ರುವೀಕರಣ ಆರಂಭಗೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.