
ಭಗವಾನ್ ಮಹಾವೀರ ಸ್ವಾಮಿ ನಿರ್ವಾಣೋತ್ಸವ
Friday, November 1, 2024
ಉಜಿರೆ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಭಗವಾನ್ ಮಹಾವೀರಸ್ವಾಮಿ ನಿರ್ವಾಣೋತ್ಸವದ ಪ್ರಯುಕ್ತ ಧರ್ಮಸ್ಥಳದಲ್ಲಿ ಭಗವಾನ್ ಶ್ರೀ ಚಂದ್ರನಾಥಸ್ವಾಮಿ ಬಸದಿಯಲ್ಲಿ ಶುಕ್ರವಾರ ಮುಂಜಾನೆ ಸಮಸ್ತ ಶ್ರಾವಕರು, ಶ್ರಾವಕಿಯರು ಅಷ್ಟವಿಧಾರ್ಚನೆ ಪೂಜೆ ಸಹಿತ ಅರ್ಘ್ಯವೆತ್ತಿದರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಬಾಹುಬಲಿ ಸೇವಾಸಮಿತಿಯ ಸರ್ವಸದಸ್ಯರು ಹಾಗೂ ಊರಿನ ಶ್ರಾವಕರು, ಶ್ರಾವಕಿಯರು ಅಷ್ಟವಿಧಾರ್ಚನೆ ಪೂಜೆ ಸಹಿತ ಅರ್ಘ್ಯ ಎತ್ತುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ದೇಶದ ಎಲ್ಲಾ ಜಿನಮಂದಿರಗಳಲ್ಲಿ ಶುಕ್ರವಾರ ಮುಂಜಾನೆ ಭಗವಾನ್ ಮಹಾವೀರ ಸ್ವಾಮಿಯ ನಿರ್ವಾಣಮಹೋತ್ಸವನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು. ಜೈನರು ಜಪ, ತಪ, ಧ್ಯಾನ, ಸ್ವಾಧ್ಯಾಯದೊಂದಿಗೆ ಉಪವಾಸ ಮೊದಲಾದ ವೃತ-ನಿಯಮಗಳನ್ನು ಪಾಲಿಸಿ ಪುಣ್ಯಸಂಚಯ ಮಾಡಿದರು.