
ಕಲೆಗಳಿಂದ ಭಾರತದ ಶ್ರೀಮಂತಿಕೆ ಉಳಿದಿದೆ: ರಶ್ಮಿತಾ ಯುವರಾಜ್ ಜೈನ್
ಮಂಗಳೂರು: ಕಲೆಗಳಿಂದ ಭಾರತದ ಶ್ರೀಮಂತಿಕೆ ಉಳಿದಿದೆ. ಕಲಾರಂಗದಲ್ಲಿ ತೊಡಗಿಕೊಂಡಿರುವ ಕಲಾವಿದರ ಕೊಡುಗೆ ಸ್ಮರಣೀಯ ಎಂದು ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್ ಹೇಳಿದರು.
ನೃತ್ಯಾಂಗನ್ ಸಂಸ್ಥೆ, ಅಲೋಶಿಯಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ ನೃತ್ಯ ಲಹರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ದೇಶದಲ್ಲಿ ಪ್ರದೇಶಗಳಿಗೆ ಅನುಸಾರವಾಗಿ ಹಲವು ಕಲೆಗಳಿವೆ. ಜಾನಪದ ಹಾಗೂ ಶಾಸ್ತ್ರೀಯ ಕಲೆಗಳು ಜನಮಾನಸದ ಮೇಲೆ ಅಚ್ಚಳಿಯದ ಪ್ರಭಾವ ಬೀರಿವೆ. ಕಾವ್ಯಾ ಗಣೇಶ್ ಶಾಸ್ತ್ರೀಯ ನೃತ್ಯವನ್ನು ಮತ್ತು ಉತ್ತರ ಭಾರತದಲ್ಲಿ ಅಳಿವಿನ ಅಂಚಿನಲ್ಲಿರುವ ಬುಡಕಟ್ಟು ಜನಾಂಗದ ಸಮಸ್ಯೆಯನ್ನು ಬಿಂಬಿಸುವ ಪ್ರಾಚಿ ಸಾಥಿ ಅವರ ನಾಟ್ಯ ಈ ದೇಸಿ ಸೊಗಡನ್ನು ಪ್ರತಿಬಿಂಬಿಸಿವೆ. ಮಂಗಳೂರಿನ ಸದಭಿರುಚಿಯ ಪ್ರೇಕ್ಷಕರು ನೃತ್ಯವನ್ನು ಸ್ವೀಕರಿಸಿದ ರೀತಿಯೂ ಶ್ಲಾಘನೀಯ ಎಂದರು.
ಚೆನ್ನೈಯ ಕಲಾವಿದೆ ಕಾವ್ಯಾ ಗಣೇಶ್ ಡಾನ್ಸಿಂಗ್ ಟು ಹರ್ ಓನ್ ಟ್ಯೂನ್ ಎಂಬ ಏಕವ್ಯಕ್ತಿ ನೃತ್ಯವನ್ನು ಸಾದರಪಡಿಸುವರು. ಬಳಿಕ ಮುಂಬೈಯ ಕಲಾವಿದೆ ಪ್ರಾಚಿ ಸಾಥಿ ಭರತನಾಟ್ಯ, ವರ್ಲಿ ಕಲೆ ಮತ್ತು ತಲ್ಲೀನತೆಯ ಆನಿಮೇಷನ್ ಎಂಬ ಕಲ್ಪನೆಯ ವೆನ್ ವಾಲ್ಸ್ ಡಾನ್ಸ್ ಎಂಬ ಎಂಬ ಏಕವ್ಯಕ್ತಿ ನೃತ್ಯ ಪ್ರಸ್ತುತಪಡಿಸುವರು. ಯೋನಿತಾ ಜೈನ್ ಬೆಂಗಳೂರು ಬೆಳಕು ಸಂಯೋಜನೆ ನಿರ್ವಹಿಸಿದರು. ನೃತ್ಯಾಂಗನ್ ಸಂಸ್ಥೆ ನಿರ್ದೇಶಕಿ, ಕಲಾವಿದೆ ರಾಧಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.