
ಸಂತ ಫಿಲೋಮಿನಾ ಕಾಲೇಜಿನಲ್ಲಿ ಕ್ರಿಸ್ಮಸ್ ಸ್ನೇಹಕೂಟ
Wednesday, December 25, 2024
ಪುತ್ತೂರು: ಕ್ರಿಸ್ಮಸ್ ಹಬ್ಬದ ಸಂಭ್ರಮಾಚರಣೆಯ ಪರ್ವಕಾಲದಲ್ಲಿ ಸೌಹಾರ್ದತೆ, ಬಂಧುತ್ವದ ದ್ಯೋತಕವಾಗಿ ಕ್ರಿಸ್ಮಸ್ ಸ್ನೇಹ ಸಮಾಗಮ ಸಂಪನ್ನಗೊಂಡಿತು.
ಸ್ನೇಹ ಸಮಾಗಮದ ಸಂದೇಶವನ್ನು ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥ ಡಾ. ರಾಧಾಕೃಷ್ಣ ಗೌಡ ಅವರು ನೀಡಿದರು. ಕ್ರಿಸ್ತರ ಬೋಧನೆಯಲ್ಲಿರುವ ಸರಳತೆ, ಶಾಂತಿ ಮತ್ತು ಕ್ಷಮಾಗುಣಗಳನ್ನು ಮೈಗೂಡಿಸಿಕೊಳ್ಳಬೇಕಾದ ಅಗತ್ಯತೆಯ ಬಗ್ಗೆ ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಬ್ಯಾಂಕ್ ಪುತ್ತೂರು ಕ್ಲಸ್ಟರ್ನ ಮುಖ್ಯ ಪ್ರಬಂಧಕ ಶ್ರೀಹರಿಯವರು ಭಾಗವಹಿಸಿದರು. ತಾಂತ್ರಿಕ ಯುಗದಲ್ಲಿ ಸಹನೆ ಮತ್ತು ಶಾಂತ ಮನೋಭಾವಗಳ ಕೊರತೆಯಿದ್ದು, ಕ್ರಿಸ್ಮಸ್ ಸಂದೇಶ ಪ್ರೇರಣೆಯನ್ನು ನೀಡಲಿ ಎಂದು ಶುಭ ಹಾರೈಸಿದರು.
ಪ್ರಾಂಶುಪಾಲ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಅವರು ಸಭಾಧ್ಯಕ್ಷತೆಯನ್ನು ವಹಿಸಿ ಸಮಭಾವ, ಸಮಚಿತ್ತದಿಂದ ಎಲ್ಲರೂ ಸೇರಿ ಆಚರಿಸುವ ಸ್ನೇಹಕೂಟ ಎಲ್ಲ ಪರ್ವಾಚರಣೆಗಳಿಗಿಂತ ಶ್ರೇಷ್ಠ ಎಂದು ತಿಳಿಸಿ ಎಲ್ಲರಿಗೂ ಶುಭ ಹಾರೈಸಿದರು.
ವಿದ್ಯಾರ್ಥಿಗಳು ಕ್ರಿಸ್ಮಸ್ ಗೀತೆಗಳನ್ನು ಹಾಡಿದರು. ವಾರಿಜಾ ಎಂ. ಮತ್ತು ಬಳಗ ಪ್ರಾರ್ಥಿಸಿದರು. ಕಾಲೇಜಿನ ಶೈಕ್ಷಣಿಕ ಕುಲಸಚಿವ ಡಾ. ನಾರ್ಬರ್ಟ್ ಮಸ್ಕರೇನಸ್ ಸ್ವಾಗತಿಸಿ ಆಡಳಿತ ಸಹಾಯಕ ಮಾರಿಯೆಟ್ ಶೆರ್ಲಿ ವಂದಿಸಿದರು. ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರಶಾಂತ್ ರೈ ಕಾರ್ಯಕ್ರಮ ನಿರೂಪಿಸಿದರು.