
ಬಿಳಿನೆಲೆ ಕೈಕಂಬ ಶಾಲಾ ಮಕ್ಕಳಿಗೆ ಅನುಭವ ಮಂಟಪದ ಪಾಠ ಮಾಡಿದ ಸಿಎಂ
ಸುಬ್ರಹ್ಮಣ್ಯ: ಶಾಲಾ ಪ್ರವಾಸ ಅಂಗವಾಗಿ ಬೆಳಗಾವಿ ಸುವರ್ಣಸೌಧಕ್ಕೆ ಭೇಟಿ ನೀಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಬಿಳಿನೆಲೆ ಕೈಕಂಬ ಸರಕಾರಿ ಪ್ರಾಥಮಿಕ ಶಾಲೆಯ ಸಹಿತ ಇತರೆ ವಿದ್ಯಾರ್ಥಿಗಳಿಗೆ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಭವ ಮಂಟಪದ ಬಗ್ಗೆ ಪಾಠ ಮಾಡಿದರು.
ಬಿಳಿನೆಲೆ ಕೈಕಂಬ ಶಾಲೆಯಿಂದ ಶಾಲೆಯ ಸುಮಾರು 33 ಮಕ್ಕಳು ಶಾಲಾ ಪ್ರವಾಸ ಶಿಕ್ಷಕರೊಂದಿಗೆ ತೆರಳಿದ್ದರು. ಬೆಳಗಾವಿ ಸುವರ್ಣಸೌಧಕ್ಕೆ ಭೇಟಿ ನೀಡಿದ್ದ ಅವರು ಮೊದಲಿಗೆ ಸಭಾಪತಿ ಯು.ಟಿ. ಖಾದರ್ ಅವರೊಂದಿಗೆ ಸಂವಾದ ನಡೆಸಿದರು.
ಈ ವೇಳೆ ಶಾಲಾ ಮಕ್ಕಳು ನೋಡದೇ (ಬಾಯಿಪಾಠ) ಸಂವಿಧಾನ ಪೀಠಿಕೆಯನ್ನು ಯು.ಟಿ.ಖಾದರ್ ಎದುರು ವಾಚಿಸಿದರು. ಈ ಬಗ್ಗೆ ಮೆಚ್ಚುಗೆ ಸೂಚಿಸಿದ ಯು.ಟಿ. ಖಾದರ್ ಅವರು ಮಕ್ಕಳನ್ನು ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ಮಾಡಿದರು.
ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎದರೂ ಬಿಳಿನೆಲೆ ಕೈಕಂಬ ಶಾಲಾ ಮಕ್ಕಳು ನೋಡದೆ ಸಂವಿಧಾನ ಪೀಠಿಕೆ ವಾಚಿಸಿದರು. ಇದಕ್ಕೆ ಸಿಎಂ ಮೆಚ್ಚುಗೆ ಸೂಚಿಸಿ ಮಕ್ಕಳು, ಶಿಕ್ಷಕರನ್ನು ಶ್ಲಾಘಿಸಿದರು. ಬಳಿಕ ಸಿದ್ದರಾಮಯ್ಯ ಅವರು ಬಿಳಿನೆಲೆ ಕೈಕಂಬ ಶಾಲಾ ಮಕ್ಕಳು ಸೇರಿದಂತೆ ಶಾಲಾ ಪ್ರವಾಸಕ್ಕೆ ಅಲ್ಲಿಗೆ ಆಗಮಿಸಿದ್ದ ವಿದ್ಯಾರ್ಥಿಗಳಿಗೆ ಹನ್ನೆರಡನೇಯ ಶತಮಾನದಲ್ಲಿಯೇ ಪ್ರಜಾಪ್ರಭುತ್ವ ಪರಿಕಲ್ಪನೆಯ ಮೇಲೆ ರೂಪುಗೊಂಡಿದ್ದ ಅನುಭವ ಮಂಟಪದ ಬಗ್ಗೆ ಅಲ್ಲಿದ್ದ ವಿವರಿಸಿದರು.
ಬಿಳಿನೆಲೆ ಶಾಲಾ ಮುಖ್ಯ ಶಿಕ್ಷಕಿ ಪವಿತ್ರಾ, ಎಸ್ಡಿಎಂಸಿ ಅಧ್ಯಕ್ಷ ನವೀನ್, ಶಿಕ್ಷಕಿ ವನಿತಾ ಮತ್ತಿತರರು ಜತೆಗಿದ್ದರು.