
ಮಾ.1ರಿಂದ ಶಕ್ತಿನಗರ ಶ್ರೀಕೃಷ್ಣ ಭಜನಾ ಮಂದಿರದ ರಜತ ಮಹೋತ್ಸವ
ಮಂಗಳೂರು: ಶಕ್ತಿನಗರದ ಶ್ರೀಕೃಷ್ಣ ಭಜನಾ ಮಂದಿರದ ರಜತ ಮಹೋತ್ಸವ, ದೇವರ ಪುನಃ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಹಾಗೂ ಏಕಾಹ ಭಜನೋತ್ಸವ ಮಾ.1ರಿಂದ 4 ರವರೆಗೆ ನಡೆಯಲಿದೆ.
ಮಾ.2ರಂದು ಬೆಳಗ್ಗೆ 11.25ಕ್ಕೆ ಶ್ರೀಕೃಷ್ಣ ದೇವರ ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕ ಮತ್ತು ಮಾ.3 ರಂದು ಸೂರ್ಯೋದಯ 6.45ಕ್ಕೆ ದೀಪ ಪ್ರಜ್ವಲನೆಗೊಳಿಸಿ ಆಹೋರಾತ್ರಿ ಹರಿನಾಮ ಸಂಕೀರ್ತನೆಯೊಂದಿಗೆ ಏಕಾಹ ಭಜನೋತ್ಸವ ನೆರವೇರಲಿದೆ ಎಂದು ರಜತ ಮಹೋತ್ಸವ ಸಮಿತಿ ಸಂಚಾಲಕ ಹರೀಶ್ ಕುಮಾರ್ ಜೋಗಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಾ.1 ರಂದು ಸಂಜೆ 3ಕ್ಕೆ ಹೊರೆಕಾಣಿಕೆ ಮೆರವಣಿಗೆ ಶಕ್ತಿನಗರದ ಶ್ರೀ ಮುತ್ತಪ್ಪ ಗುಡಿ ವಠಾರದಿಂದ ಹೊರಟು ಶ್ರೀಕೃಷ್ಣ ಭಜನಾ ಮಂದಿರದವರೆಗೆ ನೂತನ ಸ್ವರ್ಣ ಕಿರೀಟ ಹಾಗೂ ಕಲಶದೊಂದಿಗೆ ಸಾಗಿ ಬರಲಿದೆ. ನಂತರ ನೂತನ ಗರ್ಭಗೃಹದ ಗೇಹ ಪ್ರತಿಗ್ರಹಣ(ವಿಶ್ವಕರ್ಮ ಪೂಜೆ), ಸಾಮೂಹಿಕ ಪ್ರಾರ್ಥನೆ, ವೈದಿಕ ಕಾರ್ಯಕ್ರಮಗಳು, ಬ್ರಹ್ಮಕಲಶ ಮಂಡಲ ಪೂಜೆ, ಕಲಶಾಧಿವಾಸ ನಡೆಯಲಿದೆ ಎಂದರು.
ಮಾ.2ರಂದು ಅಷ್ಟಬಂಧ ಲೇಪನ, ಬ್ರಹ್ಮಕಲಶಾಭಿಷೇಕ, ಪ್ರಸನ್ನ ಪೂಜೆ ನಡೆಯಲಿದೆ. ಶ್ಯಾಮಸುಂದರ ಸಭಾಭವನವನ್ನು ಯೆಯ್ಯಾಡಿ ಶ್ರೀ ಜಯರಾಮ ಭಜನಾ ಮಂದಿರದ ಗೌರವಾಧ್ಯಕ್ಷ ಧೂಮಪ್ಪ ಮೇಸ್ತ್ರಿ ಉದ್ಘಾಟಿಸಲಿದ್ದಾರೆ. ಸಂಜೆ 6 ಗಂಟೆಗೆ ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಶ್ರೀಕೃಷ್ಣ ಭಜನಾ ಮಂದಿರದ ಅಧ್ಯಕ್ಷ ಸುಂದರ ಅಂಚನ್ ಅಧ್ಯಕ್ಷತೆ ವಹಿಸಲಿzರೆ. ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಅವಿನಾಶ್ ಅಂಚನ್, ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ಡಿ. ವೇದವ್ಯಾಸ್ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ. ರಾತ್ರಿ 9 ಗಂಟೆಗೆ ಶ್ರೀಕೃಷ್ಣ ಯಕ್ಷ ಬಳಗದ ವತಿಯಿಂದ ಶ್ರೀ ಏಕಾದಶಿ ದೇವಿ ಮಹಾತ್ಮೆ ಯಕ್ಷಗಾನ ಪ್ರಸಂಗ ಪ್ರದರ್ಶನಗೊಳ್ಳಲಿದೆ ಎಂದರು.
ಮಾ.3 ರಂದು ಸೂರ್ಯೋದಯದಿಂದ ಮಾ.4 ಸೂರ್ಯೋದಯದವರೆಗೆ ಆಹೋರಾತ್ರಿ ಹರಿನಾಮ ಸಂಕೀರ್ತನೆಯೊಂದಿಗೆ ಏಕಾಹ ಭಜನೋತ್ಸವ ನಡೆಯಲಿದೆ. ಸುಮಾರು 25 ಕ್ಕೂ ಹೆಚ್ಚು ಭಜನಾ ತಂಡಗಳು ಪಾಲ್ಗೊಳ್ಳಲಿವೆ. ಮಾ.4 ರಂದು ಬೆಳಗ್ಗೆ 10 ರಿಂದ 12 ರವರೆಗೆ ಸ್ಥಳೀಯ ಪ್ರತಿಭೆಗಳಿಂದ ಕರೋಕೆ ಭಕ್ತಿ ಸಂಗೀತ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಶ್ರೀಕೃಷ್ಣ ದೇವರ ಮಹಾಪೂಜೆ, ಮಹಾ ಅನ್ನಸಂತರ್ಪಣೆ ನಡೆಯಲಿದೆ ಸಂಜೆ 6 ಗಂಟೆಗೆ ಆನಂದ ಪೂಜೆ, ರಾತ್ರಿ 8ರಿಂದ ಶ್ರೀಕೃಷ್ಣ ಲೀಲಾಮೃತ ತಾಳಮದ್ದಳೆ ನಡೆಯಲಿದೆ ಎಂದರು.
ರಜತ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ, ರಜತ ಮಹೋತ್ಸವ ಸಮಿತಿ ಉಪಾಧ್ಯಕ್ಷ ಕೇಶವ ಎಸ್., ಪ್ರಚಾರ ಸಂಚಾಲಕ ರವಿಚಂದ್ರ, ಸಾಂಸ್ಕೃತಿಕ ಸಂಚಾಲಕ ಪ್ರಸಾದ್ ಕುಂದರ್ ಉಪಸ್ಥಿತರಿದ್ದರು.