
ದ್ವೇಷ ಭಾಷಣ ಮಾಡಿದ ಶಿಕ್ಷಕರ ಭಾಷಣಕ್ಕೆ ಆಕ್ಷೇಪ: ಕಾರ್ಯಕ್ರಮ ರದ್ದು
ಮಂಗಳೂರು: ಸಾರ್ವಜನಿಕ ಸಭೆಯಲ್ಲಿ ಕೋಮು ದ್ವೇಷದ ಭಾಷಣ ಮಾಡಿರುವ ಆರೋಪ ಹೊಂದಿರುವ ಶಿಕ್ಷಕ ಡಾ.ಅರುಣ್ ಉಳ್ಳಾಲ್ ಎಂಬವರನ್ನು ಸರಕಾರಿ ವಸತಿ ಶಾಲೆಯೊಂದು ಸಂವಾದ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಹ್ವಾನಿಸಿ ಕೆಲ ಪೋಷಕರ ಆಕ್ಷೇಪದ ಹಿನ್ನೆಲೆಯಲ್ಲಿ ಕೊನೆ ಕ್ಷಣದಲ್ಲಿ ಕಾರ್ಯಕ್ರಮವನ್ನೇ ರದ್ದುಗೊಳಿಸಿದ ಘಟನೆ ಗುರುವಾರ ಬೆಳ್ತಂಗಡಿಯಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಹೊಸಂಗಡಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೊಳಪಟ್ಟ ಇಂದಿರಾ ಗಾಂಧಿ ಸರಕಾರಿ ವಸತಿ ಶಾಲೆಯಲ್ಲಿ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗಾಗಿ ಗುರುವಾರ ಬೆಳಗ್ಗೆ ಸಂವಾದ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರಿನ ಖಾಸಗಿ ವಿದ್ಯಾಸಂಸ್ಥೆಯೊಂದರ ಶಿಕ್ಷಕ ಡಾ.ಅರುಣ್ ಉಳ್ಳಾಲ್ ಎಂಬವರನ್ನು ಕರೆಯಲಾಗಿತ್ತು.
ಆದರೆ ಕೋಮು ವೈಷಮ್ಯ ಬಿತ್ತುವ ಭಾಷಣ ಮಾಡಿರುವ ಆರೋಪ ಎದುರಿಸುತ್ತಿರುವ ಅರುಣ್ ಉಳ್ಳಾಲ್ರನ್ನು ಮಕ್ಕಳಿಗೆ ಉಪದೇಶ ನೀಡಲು ಆಹ್ವಾನಿಸಲಾಗಿದೆ ಎಂದು ಕೆಲ ಪೋಷಕರು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗೆ ಮೌಖಿಕವಾಗಿ ದೂರು ನೀಡಿದ್ದರು, ದ್ವೇಷ ಭಾಷಣ ಮಾಡುವವರನ್ನು ಶಾಲೆಗೆ ಉಪನ್ಯಾಸಕ್ಕೆ ಆಹ್ವಾನಿಸಿದ ಶಾಲೆಯ ಪ್ರಾಂಶುಪಾಲ ಶ್ರೀಧರ ಶೆಟ್ಟಿಯವರನ್ನು ಕೂಡ ವಿದ್ಯಾರ್ಥಿಗಳ ಪೋಷಕರು ತರಾಟೆಗೆ ತೆಗೆದುಕೊಂಡಿದ್ದರು.
ಪೋಷಕರ ತೀವ್ರ ಆಕ್ಷೇಪದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆರಂಭಗೊಳ್ಳುವುದಕ್ಕಿಂತ ಅರ್ಧ ತಾಸು ಮೊದಲು ಸಂವಾದ ಕಾರ್ಯಕ್ರಮವನ್ನು ರದ್ದುಗೊಳಿಸಿರುವುದಾಗಿ ಇಲಾಖಾಧಿಕಾರಿಗಳು ಹಾಗೂ ಶಾಲಾ ಪ್ರಾಂಶುಪಾಲರು ಘೋಷಿಸಿ ವಿವಾದವನ್ನು ಸುಖಾಂತ್ಯಗೊಳಿಸಿದರು.