
ಪೊಳಲಿಯಲ್ಲಿ ಐದನೇ ದಂಡಮಾಲೆ: 78 ತುಲಾಭಾರ ಸೇವೆ
Wednesday, March 19, 2025
ಬಂಟ್ವಾಳ: ಸುದೀರ್ಘ ಒಂದು ತಿಂಗಳ ಕಾಲ ನಡೆಯುವ ಸಾವಿರ ಸೀಮೆಯ ಒಡತಿ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ಐದನೇ ದಂಡಮಾಲೆಯ ಬುಧವಾರ 78 ತುಲಾಭಾರ ಸೇವೆ ನಡೆಯಿತು.
ಕ್ಷೇತ್ರದ ತಂತ್ರಿಗಳಾದ ಸುಬ್ರಹ್ಮಣ್ಯ ತಂತ್ರಿ ಹಾಗೂ ವೆಂಕಟೇಶ್ ತಂತ್ರಿಗಳ ಮಾರ್ಗದರ್ಶನದಲ್ಲಿ ದೇವಳದ ಅರ್ಚಕರಾದ ಮಾಧವಭಟ್, ಪರಮೇಶ್ವರ ಭಟ್, ರಾಮ್ ಭಟ್ ಹಾಗೂ ನಾರಾಯಣ ಭಟ್ ಅವರು ತುಲಾಭಾರ ಸೇವೆ ನೆರವೇರಿಸಿದರು. ತುಲಾಭಾರ ಸೇವಾದಾರರು ಅಕ್ಕಿ, ತೆಂಗಿನಕಾಯಿ, ಸೀಯಾಳ, ಬೆಲ್ಲ, ಬಾಳೆಹಣ್ಣು, ಧವಸದಾನ್ಯದಿಂದ ಗಳಿಂದ ತುಲಾಭಾರ ಮಾಡಿಸಿ ಕೃತಾರ್ಥರಾದರು.
ಮಾ.14 ರಂದು ಕ್ಷೇತ್ರದಲ್ಲಿ ಧ್ವಜಾರೋಹಣ ಗೊಂಡಿದ್ದು, ಎ.11 ರ ತನಕ 28ದಿನಗಳ ಕಾಲ ಪೊಳಲಿಯಲ್ಲಿ ಜಾತ್ರಾ ಮಹೋತ್ಸವ ನಡೆಯಲಿದೆ. ಎ.5 ರಂದು ಕೊಡಿ ಚೆಂಡು, ಕುಮಾರ ರಥ, ಎ.6 ರಂದು ಎರಡನೇ ಚೆಂಡು, ಹೂವಿನ ತೇರು, ಎ.7 ರಂದು ಮೂರನೇ ಚೆಂಡು, ಸೂರ್ಯಮಂಡಲ, ಎ.8 ನಾಲ್ಕನೇ ಚೆಂಡು, ಚಂದ್ರಮಂಡಲ, ಎ.9 ರಂದು ಕಡೇ ಚೆಂಡು ಬೆಳ್ಳಿರಥ, ಆಳುಪಲ್ಲಕಿ ರಥ, ಎ.10 ರಂದು ಮಹಾರಥೋತ್ಸವ, ಎ.11 ರಂದು ಆರಾಡ ಅವಭ್ಯತ ಸ್ನಾನ, ಮಗ್ರಂತಾಯ ನೇಮ, ಎ.12 ರಂದು ನೇಮೋತ್ಸವ ಪ್ರಧಾನ ದೈವ ಶ್ರೀ ಕೊಡಮಣಿತ್ತಾಯ ನೇಮ ನಡೆಯಲಿದೆ.