
ಅನುದಾನ ರಹಿತ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘದ ರಾಜ್ಯ ಸಮಿತಿ (ಕುಪ್ಮಾ) ಸಭೆ
ಮಂಗಳೂರು: ಶಕ್ತಿನಗರದ ಶಕ್ತಿ ಪ.ಪೂ. ಕಾಲೇಜಿನಲ್ಲಿ ಅನುದಾನ ರಹಿತ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘ ರಾಜ್ಯ ಸಮಿತಿ (ಕುಪ್ಮಾ)ಯ ಸಭೆಯು ಗೌರವ ಅಧ್ಯಕ್ಷ ಡಾ. ಕೆ.ಸಿ ನಾಕ್, ಅಧ್ಯಕ್ಷ ಡಾ. ಮೋಹನ್ ಆಳ್ವ ಮತ್ತು ಕಾರ್ಯದಶಿ೯ ನರೇಂದ್ರ ನಾಯಕ್ ಅವರ ಮುಂದಾಳತ್ವದಲ್ಲಿ ಇತ್ತೀಚೆಗೆ ನಡೆಯಿತು.
ಸಭೆಯಲ್ಲಿ ಮೂಡುಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ಮಾರ್ಚ್ 25 ರಂದು ನಡೆಯಲಿರುವ ಒಂದು ದಿನದ ಕುಪ್ಮಾ ಜಿಲ್ಲಾ ಸಮಿತಿಯ ಸಂಯೋಜಕರ ಕಾರ್ಯಾಗಾರದ ಕುರಿತಂತೆ ಚರ್ಚೆ ನಡೆಯಿತು. ರಾಜ್ಯದ ಬೇರೆ ಬೇರೆ ಜಿಲ್ಲೆಯಿಂದ ಸುಮಾರು 75 ಮಂದಿ ಸಂಯೋಜಕ ಸದಸ್ಯರು ಭಾಗವಹಿಸುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಈಗಾಗಲೇ ಆಯ್ಕೆಯಾಗಿರುವ ಕುಪ್ಮಾ ಜಿಲ್ಲಾ ಸಂಯೋಜಕರಿಗೆ ಕುಪ್ಮಾವನ್ನು ಅವರ/ಆಯಾಯ ಜಿಲ್ಲೆಗಳಲ್ಲಿ ವಿಸ್ತರಿಸುವುದು ಹೇಗೆ ಎನ್ನುವ ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು ಮಾ.25 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಆಳ್ವಾಸ್ ಕಾಲೇಜು, ಮೂಡುಬಿದಿರೆಯಲ್ಲಿ ನಡೆಸುವ ಬಗ್ಗೆ ವೇಳಾಪಟ್ಟಿಯ ನಿರ್ಣಯವನ್ನು ಕೈಗೊಳ್ಳಲಾಯಿತು.
ಭಾಗವಹಿಸುವ ಜಿಲ್ಲಾ ಸಂಯೋಜಕರಿಗೆ ಸದಸ್ಯರಿಗೆ ವಾಸ್ತವ್ಯ ಹಾಗೂ ಊಟೋಪಚಾರದ ವ್ಯವಸ್ಥೆಯನ್ನು ಆಳ್ವಾಸ್ ಕಾಲೇಜಿನಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ಡಾ. ಮೋಹನ್ ಆಳ್ವ ತಿಳಿಸಿದರು.
ಕಾರ್ಯಕ್ರಮದ ವೇಳಾಪಟ್ಟಿ:
ಬೆಳಗ್ಗೆ 9 ಗಂಟೆಯಿಂದ 10 ಗಂಟೆಯವರೆಗೆ ನೊಂದಣಿ ಮತ್ತು ಉಪಾಹಾರ, ಬೆಳಗ್ಗೆ 10 ಗಂಟೆಯಿಂದ 11 ಗಂಟೆಯವರೆಗೆ ಕಾರ್ಯಾಗಾರದ ಉದ್ಘಾಟನೆ, 11 ಗಂಟೆಯಿಂದ 11.15 ರವರೆಗೆ ಚಾ ವಿರಾಮ, 11.15 ರಿಂದ 12.15 ರವರೆಗೆ ಮೊದಲ ಅವಧಿಯ ಕಾರ್ಯಾಗಾರವನ್ನು ಕುಪ್ಮಾ ಜಿಲ್ಲಾವಾರು ಸಮಿತಿ ರಚನೆಯ ಬಗ್ಗೆ ರಾಜ್ಯ ಕುಪ್ಮಾ ಸಮಿತಿಯ ಉಪಾಧ್ಯಕ್ಷ ಡಾ. ಸುಧಾಕರ ಶೆಟ್ಟಿ ನಡೆಸಿಕೊಡಲಿದ್ದಾರೆ.
ಮಧ್ಯಾಹ್ನ 12.15 ರಿಂದ 1.15 ರವರೆಗೆ ಎರಡನೆಯ ಅವಧಿಯ ಕಾರ್ಯಾಗಾರದಲ್ಲಿ ಪ್ರಶ್ನೋತ್ತರ ಮಾಲಿಕೆಯನ್ನು ವಿಶ್ವನಾಥ ಶೇಷಾಚಲ, ಜೊತೆ ಕಾರ್ಯದರ್ಶಿ, ಕುಪ್ಮಾ ರಾಜ್ಯ ಸಮಿತಿ ಅವರು ನಡೆಸಿಕೊಡುತ್ತಾರೆ. 1.15 ಸಮಾರೋಪ ಸಮಾರಂಭವನ್ನು ರಾಜ್ಯ ಕುಪ್ಮಾ ಸಮಿತಿಯ ನರೇಂದ್ರ ಎಲ್. ನಾಯಕ್ ನಡೆಸಲಿದ್ದಾರೆ.
1.45 ರಿಂದ ಊಟದೊಂದಿಗೆ ಮುಕ್ತಾಯಗೊಳ್ಳಲಿದೆ.
ಜೂನ್ ಅಂತ್ಯದೊಳಗೆ ರಾಜ್ಯವಾರು ಎಲ್ಲಾ ಜಿಲ್ಲೆಗಳಲ್ಲಿ ಕುಪ್ಮಾ ಸಮಿತಿಗೆ ಸದಸ್ಯರನ್ನು ಸೇರ್ಪಡೆಗೊಳಿಸುವುದರ ಜತೆಯಲ್ಲಿ ಜಿಲ್ಲಾವಾರು ಕುಪ್ಮಾ ಸಮಿತಿಗಳನ್ನು ರಚನೆ ಮಾಡಿ ಗೌರವ ಅಧ್ಯಕ್ಷರು 01/ ಅಧ್ಯಕ್ಷರು 01/ ಉಪಾಧ್ಯಕ್ಷರು 04/ ಕಾರ್ಯದರ್ಶಿಗಳು 01/ ಸಹಕಾರ್ಯದರ್ಶಿ 02/ ಖಚಾಂಚಿ 01 ಸೇರಿದಂತೆ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಿ ಸಮಿತಿಯನ್ನು ರಚಿಸಿ ಕಾರ್ಯನಿರ್ವಹಿಸುವುದು ಇದರ ಉದ್ದೇಶವಾಗಿದೆ.
ಮೂಡುಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ನಡೆಯುವ ಈ ಕಾರ್ಯಾಗಾರದಲ್ಲಿ ರಾಜ್ಯ ಕುಪ್ಮಾ ಸಮಿತಿಯ ಸದಸ್ಯರು ಸೇರಿದಂತೆ ರಾಜ್ಯದ ಜಿಲ್ಲಾ ಸಂಯೋಜಕರು ತಪ್ಪದೇ ಭಾಗವಹಿಸಬೇಕೆಂದು ತೀರ್ಮಾನಿಸಲಾಯಿತು.
ಸಭೆಯಲ್ಲಿ ಕುಪ್ಮಾದ ರಾಜ್ಯದ ಗೌರವ ಅಧ್ಯಕ್ಷ ಹಾಗೂ ಶಕ್ತಿ ಪ.ಪೂ. ಕಾಲೇಜಿನ ಸಂಸ್ಥಾಪಕ ಡಾ. ಕೆ.ಸಿ. ನಾಕ್, ಇನ್ನೊರ್ವ ಗೌರವ ಅಧ್ಯಕ್ಷ ಹಾಗೂ ವೆಂಕಟರಮಣ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ. ರಾಧಕೃಷ್ಣ ಶೆಣೈ, ರಾಜ್ಯ ಅಧ್ಯಕ್ಷ ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವ, ರಾಜ್ಯ ಕಾರ್ಯದರ್ಶಿ ಹಾಗೂ ಎಕ್ಸಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ನಾಯಕ್, ರಾಜ್ಯ ಉಪಾಧ್ಯಕ್ಷ ಹಾಗೂ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ, ರಾಜ್ಯ ಉಪಾಧ್ಯಕ್ಷ ಹಾಗೂ ಸೂರಜ್ ಇಂಟರ್ ನ್ಯಾಷನಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮಂಜುನಾಥ್ ರೇವಣ್ಕರ್, ಜೊತೆ ಕಾರ್ಯದರ್ಶಿ ವಿಶ್ವನಾಥ್ ಶೇಷಾಚಲ, ಕುಪ್ಮಾ ರಾಜ್ಯ ಸಮಿತಿ ಸದಸ್ಯ ಬಿ.ಎ. ನಾಝೀರ್, ಕೋಶಾಧಿಕಾರಿ ರಮೇಶ್ ಕೆ., ಸಂಯೋಜಕ ಕರುಣಾಕರ್ ಬಳ್ಕೂರ್ ಉಪಸ್ಥಿತರಿದ್ದರು.