
ಪಕ್ಷಿಗಳಿಗೆ ನೀರಿಡುವ ಕಾರ್ಯ ಶ್ಲಾಘನೀಯ: ಪ್ರೊ. ಗಣಪತಿ ಗೌಡ
Friday, March 7, 2025
ಮಂಗಳೂರು: ಪರಿಸರ ನಾಶ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಜಾಗತಿಕ ತಾಪಮಾನ ಏರಿಕೆಯಾಗಿದೆ. ಇದು ಪ್ರಾಣಿಪಕ್ಷಿಗಳ ಅಸ್ಥಿತ್ವದ ಮೇಲೆ ಪರಿಣಾಮ ಬೀರುತ್ತಿದೆ ಎಂದು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿಗೌಡ ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಯುವ ರೆಡ್ಕ್ರಾಸ್ ಘಟಕದ ವತಿಯಿಂದ ಪಕ್ಷಿಗಳಿಗೆ ನೀರಿಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನೀರು ಎಲ್ಲರ ಅಗತ್ಯಗಳಲ್ಲಿ ಒಂದಾಗಿದೆ. ಮನುಷ್ಯನಾದರೆ ನೀರಿರುವ ಕಡೆ ಹುಡುಕಿಕೊಂಡು ಹೋಗಿ ಅದನ್ನು ಪಡೆಯುತ್ತಾನೆ. ಆದರೆ ಪಕ್ಷಿಗಳ ಸ್ಥಿತಿ ಬಹಳ ಕಷ್ಟವಾಗುತ್ತಿರುವ ಈ ಹೊತ್ತಿನಲ್ಲಿ ಪಕ್ಷಿಗಳಿಗೆ ನೀರಿಡುವ ಪದ್ಧತಿ ಉತ್ತಮವಾದುದು. ಯುವ ರೆಡ್ಕ್ರಾಸ್ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವುದು ಶ್ಲಾಘನೀಯ ಎಂದರು.
ಯುವ ರೆಡ್ಕ್ರಾಸ್ನ ಕಾರ್ಯಕ್ರಮ ಅಧಿಕಾರಿ ಡಾ. ಭಾರತಿ ಪಿಲಾರ್, ಪ್ರಕೃತಿ ಆರಾಧಕರಾದ ನಾವು ಪರಿಸರ ರಕ್ಷಣೆಯ ಗುರುತರ ಜವಾಬ್ದಾರಿ ಹೊಂದಿದ್ದೇವೆ. ಜಾಗತಿಕ ತಾಪಮಾನದಿಂದ ಸಂಕಷ್ಟಕೊಳ್ಳಗಾಗಿರುವ ಪಕ್ಷಿಸಂಕುಲಕ್ಕೆ ನೀರು ಒದಗಿಸುವ ಮೂಲಕ ಅಳಿಲು ಸೇವೆ ಮಾಡುವ ಸಲುವಾಗಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ ಎಂದು ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ವಿದ್ಯಾರ್ಥಿ ಮಣಿಕಂಠ ವಂದಿಸಿದರು.