
ಗೋ ಹತ್ಯೆ, ಸಾಗಾಟ: ಹಿಂದೂಗಳ ಭಾವನೆಗೆ ಧಕ್ಕೆ: ನಂದನ್ ಮಲ್ಯ
ಮಂಗಳೂರು: ಗೋವನ್ನು ದೇವತೆಯ ರೂಪದಲ್ಲಿ ಪೂಜಿಸುವುದು ಸನಾತನ ಧರ್ಮದ ಸಂಸ್ಕೃತಿ. ಮುಕ್ಕೋಟಿ ದೇವತೆ ಗೋವಿನಲ್ಲಿ ವಾಸವಿದ್ದಾರೆ ಅನ್ನೊದನ್ನು ನಂಬಿಕೊಂಡು ಬಂದವರು ನಾವು. ಆದರೆ ಪ್ರತೀ ಬಾರಿಯೂ ಕೂಡ ಅಕ್ರಮವಾಗಿ ಗೋವುಗಳನ್ನು ಸಾಗಿಸಿ ಹತ್ಯೆ ಮಾಡುವ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸ ನಡೆಯುತ್ತಲೇ ಇದೆ ಎಂದು ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ನಂದನ್ ಮಲ್ಯ ಪ್ರಕಟಣೆಯಲ್ಲಿ ತಿಳಿಸಿದರು.
ಇದನ್ನು ತಡೆಯೋದಕ್ಕೆ ಭಜರಂಗದಳ ಹಾಗೂ ಹಿಂದು ಸಂಘಟನೆಗಳು ನಿರಂತರವಾಗಿ ಗೋ ರಕ್ಷಣೆಯ ಕೆಲಸವನ್ನ ಮಾಡುತ್ತಲೇ ಬಂದಿದೆ. ಇತ್ತೀಚೆಗೆ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೂಡ ಅಕ್ರಮ ಗೋ ಸಾಗಾಟ ವಿಪರೀತವಾಗಿ ನಡೆಯುತ್ತಿದ್ದು, ಆ ಮಾಹಿತಿ ಭಜರಂಗದಳದ ಕಾರ್ಯಕರ್ತರಿಗೂ ಕೂಡ ಸಿಕ್ಕಿರುತ್ತದೆ. ಹೀಗಾಗಿ ಭಜರಂಗದಳ ಕಾರ್ಯಕರ್ತರು ಗೋರಕ್ಷಣೆಗೆ ಮುಂದಾಗಿರುತ್ತಾರೆ. ಈ ಸಮಯದಲ್ಲಿ ದಕ್ಷಿಣ ಕನ್ನಡ ಪೊಲೀಸರು ಅಕ್ರಮ ಗೋಸಾಗಾಟ ಮಾಡುತ್ತಿರುವವರನ್ನ ಬಂಧಿಸುವುದು ಬಿಟ್ಟು, ಗೋರಕ್ಷಕರನ್ನೇ ತಡೆಯುತ್ತಿರುವುದು ದುರಂತ. ಇದನ್ನು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾ ತೀವ್ರವಾಗಿ ಖಂಡಿಸುತ್ತದೆ. ಹಾಗೂ ಬಿಜೆಪಿ ಜಿಲ್ಲಾ ಯುವಮೋರ್ಚಾ ಭಜರಂಗದಳದ ಧರ್ಮವೀರರ ಜೊತೆಗೆ ನಿಲ್ಲುತ್ತೇವೆ.
ಭಜರಂಗದಳದ ಕಾರ್ಯಕರ್ತರು ಗೋ ರಕ್ಷಣೆಗೆ ತೆರಳುವ ಮಾಹಿತಿ ಸಿಗುವ ಪೊಲೀಸರಿಗೆ, ಅಕ್ರಮ ಗೋ ಸಾಗಾಟಣೆ ಮಾಡುವವgರು ಸಿಗದೇ ಇರುವುದು ಹೇಗೆ? ಅಕ್ರಮ ಗೋಸಾಗಾಟ ಮಾಡುವವರ ಹಿಂದೆ ಕಾಣದ ‘ಕೈ’ಗಳ ಪ್ರಭಾವ ಏನಾದರು ಇದೆಯಾ? ಹಾಗೆಯೇ ಯಾವುದೊ ಒತ್ತಡಕ್ಕೆ ಮಣಿದು ಭಜರಂಗದಳದ ಕಾರ್ಯಕರ್ತರ ಹಿಂದೆ ಯಾರೂ ಇಲ್ಲವೆಂದು ಅವರನ್ನು ತಡೆಯುತ್ತಿದ್ದಿರಾ? ಅವರ ಜೊತೆಗೆ ಬಿಜೆಪಿ ಯುವ ಮೋರ್ಚಾ ಇದೆ ಅನ್ನೋದನ್ನು ಈ ಮೂಲಕ ನಾವು ನೆನಪಿಸುತ್ತಿದ್ದೇವೆ. ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಸುಮಾರು 5 ಪ್ರಕರಣ ದಾಖಲಾದರೂ ಯಾವುದೇ ಭಯವಿಲ್ಲದೆ ಗೋ ಸಾಗಾಟ ನಡೆಯುತ್ತಿದ್ದು, ಅದನ್ನು ತಡೆದು ಗೋ ಕಳ್ಳರ ಹೆಡೆಮುರಿ ಕಟ್ಟಬೇಕು ಎಂದು ನಂದನ್ ಮಲ್ಯ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.