
ಪ್ರಾಮಾಣಿಕತೆ ಮೆರೆದ ನ್ಯಾಯಾಲಯದ ಸಿಬ್ಬಂದಿ
Friday, March 7, 2025
ಮಂಗಳೂರು: ನಗರದ ನ್ಯಾಯಾಲಯದ ಆವರಣದಲ್ಲಿ ಬಿದ್ದು ಸಿಕ್ಕಿದ ಚಿನ್ನವನ್ನು ವಾರಸುದಾರರಿಗೆ ಹಸ್ತಾಂತರಿಸುವ ಮೂಲಕ ಜೆಎಂಎಫ್ಸಿ ನಾಲ್ಕನೇ ನ್ಯಾಯಾಲಯದ ಸಿಬ್ಬಂದಿ ಚಂದ್ರಶೇಖರ್ ಗಳಪ್ಪಗೋಲ್ ಪ್ರಾಮಾಣಿಕತೆ ಮೆರೆದಿದ್ದಾರೆ.
ನ್ಯಾಯಾಲಯದ ಆವರಣದಲ್ಲಿ ಇಂಟರ್ನ್ಶಿಪ್ ನಡೆಸುತ್ತಿದ್ದ ವಕೀಲೆ ವಿದ್ಯಾರ್ಥಿನಿ ದಿಲ್ನಾಝ್ ಎಂಬವರ 60,000ಕ್ಕೂ ಅಧಿಕ ಬೆಲೆಯ ಚಿನ್ನದ ಬ್ರಾಸ್ಲೈಟ್ ಮಾ.3ರಂದು ಕಳೆದುಹೋಗಿತ್ತು. ರಸ್ತೆಬದಿ, ನ್ಯಾಯಾಲಯದ ಆವರಣಗಳಲ್ಲಿ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಆದರೆ ಕಳೆದುಹೋಗಿದ್ದ ಚಿನ್ನ ನ್ಯಾಯಾಲಯದ ಸಿಬ್ಬಂದಿ ಚಂದ್ರಶೇಖರ್ ಗಳಪ್ಪಗೋಲ್ರಿಗೆ ಸಿಕ್ಕಿತ್ತು. ತಕ್ಷಣ ಅದನ್ನು ಅವರು ನ್ಯಾಯಾಲಯದ ಮುಖ್ಯಕಚೇರಿಗೆ ನೀಡಿ ವಾರೀಸುದಾರರಿಗೆ ಹಸ್ತಾಂತರಿಸುವಂತೆ ಕೇಳಿಕೊಂಡಿದ್ದರು.
ಅದರಂತೆ ಈ ಬಗ್ಗೆ ವಾಟ್ಸ್ಆಪ್ ಗ್ರೂಪ್ಗಳಲ್ಲಿ ಮಾಹಿತಿಯನ್ನು ಹಂಚಿಕೊಳ್ಳಲಾಗಿತ್ತು. ಇದನ್ನು ಗಮನಿಸಿದ ಹಿರಿಯ ವಕೀಲ ಇಬ್ರಾಹಿಂ ತನ್ನ ಬಳಿ ಇಂಟರ್ನ್ಶಿಪ್ ನಡೆಸುತ್ತಿರುವ ದಿಲ್ನಾಝ್ಗೆ ತಿಳಿಸಿದರು. ಅದರಂತೆ ಗುರುವಾರ ನ್ಯಾಯಾಲಯದ ಆವರಣದಲ್ಲಿ ಚಂದ್ರಶೇಖರ್ ಗಳಪ್ಪಗೋಲ್ ಖುದ್ದಾಗಿ ಹಸ್ತಾಂತರಿಸುವ ಮೂಲಕ ಗಮನ ಸೆಳೆದಿದ್ದಾರೆ.