
ಅಖಿಲ ಭಾರತ ಅಂತರ್ ವಿ.ವಿ ರಾಷ್ಟ್ರೀಯ ಯುವಜನೋತ್ಸವ: ಮೂಡುಬಿದಿರೆಯ ಆಳ್ವಾಸ್ ಕಾಲೇಜು ವಿದ್ಯಾರ್ಥಿಗಳ ಪಾರಮ್ಯ
ಎರಡು ದಶಕಗಳಿಂದ ನಿರಂತರ ಸಾಧನೆ: ಅತೀ ಹೆಚ್ಚು ಪದಕ ಗಳಿಸಿರುವ ಹೆಗ್ಗಳಿಕೆ
ಮೂಡುಬಿದಿರೆ: ಉತ್ತರ ಭಾರತದ ಅಮಿಟಿ ಯುನಿವರ್ಸಿಟಿ ನೋಯ್ಡಾ ಕ್ಯಾಂಪಸ್ನಲ್ಲಿ ಮಾ.3 ರಿಂದ 7ರವರೆಗೆ ನಡೆದ 38ನೇ ಅಖಿಲ ಭಾರತ ವಿಶ್ವವಿದ್ಯಾಲಯಗಳ ಅಂತರ್ ವಿವಿ ರಾಷ್ಟ್ರೀಯ ಸಾಂಸ್ಕೃತಿಕ ಯುವಜನೋತ್ಸವದಲ್ಲಿ ಅತೀ ಹೆಚ್ಚು ಪದಕಗಳೊಂದಿಗೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಪಾರಮ್ಯ ಮೆರೆದಿದ್ದಾರೆ.
ಜನಪದ ವಾದ್ಯ ಸಂಗೀತ ಸಮೂಹ ಪ್ರಥಮ, ಕರ್ನಾಟಕ ಶಾಸ್ತ್ರೀಯ ಸಂಗೀತ ವೈಯಕ್ತಿಕ ದ್ವಿತೀಯ, ಸುಗಮ ಸಂಗೀತ ವೈಯಕ್ತಿಕ ದ್ವಿತೀಯ, ಶಾಸ್ತ್ರೀಯನೃತ್ಯ ಭರತನಾಟ್ಯ ವೈಯಕ್ತಿಕ ದ್ವಿತೀಯ, ವಾದ್ಯಸಂಗೀತ ವೈಯಕ್ತಿಕ(ಬಾನ್ಸುರಿ ವಾದನ) ದ್ವಿತೀಯ, ಜನಪದ ನೃತ್ಯ ಸಮೂಹ ತೃತೀಯ. ಸಾಂಸ್ಕೃತಿಕ ಮೆರವಣಿಗೆಯಲ್ಲಿ ನಾಲ್ಕನೇ, ಭಾರತೀಯ ಸಮೂಹ ಸಂಗೀತದಲ್ಲಿ ಐದನೇ ಸ್ಥಾನಗಳನ್ನು ಆಳ್ವಾಸ್ ವಿದ್ಯಾರ್ಥಿಗಳು ಪಡೆದಿದ್ದಾರೆ
ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಅಶ್ವಿಜಾ ಉಡುಪ, ಶಾಸ್ತ್ರೀಯ ನೃತ್ಯ ಭರತನಾಟ್ಯ ಶ್ರೇಯಾ ಜಿ, ಸುಗಮ ಸಂಗೀತದಲ್ಲಿ ವಿಭಾ ನಾಯಕ್, ವಾದ್ಯ ಸಂಗೀತ( ಬಾನ್ಸುರಿ ವಾದನ) ಸ್ವಯಂಪ್ರಕಾಶ್ ಪ್ರಭು ವೈಯಕ್ತಿಕ ವಿಭಾಗಗಳಲ್ಲಿ ಪದಕಗಳನ್ನು ಜಯಿಸಿದ್ದಾರೆ.
ಸಾಧಕ ವಿದ್ಯಾರ್ಥಿಗಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅಭಿನಂದಿಸಿ, ರಾಷ್ಟ್ರಮಟ್ಟದಲ್ಲಿ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಲು ಆಳ್ವಾಸ್ ಕಾಲೇಜಿನಿಂದಲೇ 20 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಇದೊಂದು ಮಹತ್ತರವಾದ ಸಾಧನೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ದಶಕಗಳಿಂದ ರಾಷ್ಟ್ರಮಟ್ಟದಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಸಾಂಸ್ಕೃತಿಕ ಉತ್ಸವಗಳಲ್ಲಿ ಪದಕಗಳನ್ನು ಗೆಲ್ಲುತ್ತಿರುವುದು ಪ್ರಶಂಸನೀಯ ಮತು ಉಲ್ಲೇಖನೀಯ.