.jpeg)
ಅಪಘಾತ: ಮಹಿಳೆ ಸಾವು, ಏಳು ಮಂದಿಗೆ ಗಾಯ
ಕಾಸರಗೋಡು: ಅಂಬ್ಯುಲೆನ್ಸ್ ಹಾಗೂ ಕಾರು ನಡುವೆ ಉಂಟಾದ ಅಪಘಾತದಲ್ಲಿ ಚಿಕಿತ್ಸೆಗೆ ತೆರಳುತ್ತಿದ್ದ ಓರ್ವ ಮಹಿಳೆ ಮೃತಪಟ್ಟು, ಏಳು ಮಂದಿ ಗಾಯಗೊಂಡ ಘಟನೆ ಉಪ್ಪಳ ಗೇಟ್ ಸಮೀಪ ಮಂಗಳವಾರ ಸಂಜೆ ನಡೆದಿದೆ.
ಮೃತಪಟ್ಟ ಮಹಿಳೆಯನ್ನು ಶಾಹೀನಾ (48) ಎಂದು ಗುರುತಿಸಲಾಗಿದೆ.
ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗೆಂದು ಕಣ್ಣೂರಿನ ಆಸ್ಪತ್ರೆಯಿಂದ ಮಂಗಳೂರಿಗೆ ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ಅಪಘಾತಕ್ಕೀಡಾಗಿ ಮಗುಚಿಬಿದ್ದಿದೆ. ಗಂಭೀರ ಗಾಯಗೊಂಡ ಶಾಹೀನಾ ಅವರನ್ನು ಕೂಡಲೇ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟರು.
ಶಾಹೀನಾ ಅವರ ಪುತ್ರಿ ರಿಯಾ ಫಾತಿಮಾ (9), ಸಹೋದರಿ ಶಜಿನಾ (45), ಸಂಬಂಧಿಕ ಆಸೀಫ್ (22), ಅಂಬ್ಯುಲೆನ್ಸ್ ಚಾಲಕ ಅಕ್ರಂ (38) ಗಾಯಗೊಂಡವರಲ್ಲಿ ಸೇರಿದ್ದಾರೆ.
ಭಾರೀ ಮಳೆಯಿಂದ ರಸ್ತೆಯಲ್ಲಿ ನೀರು ತುಂಬಿದ್ದರಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ರಸ್ತೆಯಲ್ಲಿ ನೀರು ತುಂಬಿದ್ದನ್ನು ಕಂಡ ಅಂಬ್ಯುಲೆನ್ಸ್ ಚಾಲಕ ಬ್ರೇಕ್ ಹಾಕಿದ್ದರಿಂದ ಹಿಂದಿನಿಂದ ಬಂದ ಕಾರು ಅಂಬ್ಯುಲೆನ್ಸ್ಗೆ ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಅಂಬ್ಯುಲೆನ್ಸ್ ನಿಯಂತ್ರಣ ತಪ್ಪಿ ಮಗುಚಿ ಬಿತ್ತು ಎಂದು ತಿಳಿದು ಬಂದಿದೆ. ಕಾರಿನ ಹಿಂದಿದ್ದ ಐದು ವಾಹನಗಳು ಒಂದಕ್ಕೊಂದು ಢಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದೆ.