
ಪ್ರಕೃತಿ ವಿಕೋಪದಲ್ಲಿ ನಿರ್ವಸಿತರಾದವರಿಗೆ ಆಹಾರ ಒದಗಿಸುವಲ್ಲಿ ನಿರ್ಲಕ್ಷ್ಯ: ಉಳ್ಳಾಲ ನಗರಸಭಾ ಕಮಿಷನರ್ಗೆ ಹುದ್ದೆಯಿಂದ ಮುಕ್ತಿ
Saturday, May 31, 2025
ಉಳ್ಳಾಲ: ತಾಲೂಕಿನಲ್ಲಿ ಸುರಿದ ವಿಪರೀತ ಮಳೆಯಿಂದ ಮನೆ ಹಾನಿಗೆ ಒಳಗಾಗಿ ನಿರ್ವಸಿತರಾದವರಿಗೆ ತಾತ್ಕಾಲಿಕ ಪರಿಹಾರ ಸಿಗುವವರೆಗೆ ಉಚಿತವಾಗಿ ಆಹಾರ ಅವರ ಮನೆಗೆ ತಲುಪಿಸುವಂತೆ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಿದ್ದರು.
ಇದರಂತೆ ನಿನ್ನೆ ಉಳ್ಳಾಲ ನಗರ ಸಭಾ ವ್ಯಾಪ್ತಿಯಲ್ಲಿ ಆಹಾರ ತಲುಪಿಸಲಾಗಿತ್ತು. ಆದರೆ ಇಂದು ಸ್ಥಳೀಯ ಉಳ್ಳಾಲ ಬೈಲ್ ನಿವಾಸಿ ಪದ್ಮಾಕ್ಷಿ ಎಂಬ ಮಹಿಳೆ ನಗರಸಭಾ ಮುಖ್ಯಾಧಿಕಾರಿಗೆ ಕರೆ ಮಾಡಿ ಆಹಾರ ತಲುಪಿಸುವ ಬಗ್ಗೆ ಹೇಳಲಾಗಿ ಅದಕ್ಕೆ ಮುಖ್ಯಾಧಿಕಾರಿ ಆ ವ್ಯವಸ್ಥೆ ನಿನ್ನೆ ಒಂದು ದಿನಕ್ಕೆ ಮಾತ್ರ ಎಂದು ಉತ್ತರಿಸಿದ್ದಾರೆ. ಈ ವಿಷಯವನ್ನು ಪದ್ಮಾಕ್ಷಿ ದೂರವಾಣಿ ಮೂಲಕ ಯು.ಟಿ. ಖಾದರ್ ಅವರ ಗಮನಕ್ಕೆ ತಂದಿದ್ದಾರೆ. ಆ ಕೂಡಲೇ ಯು.ಟಿ. ಖಾದರ್ ಕರ್ತವ್ಯಲೋಪ ಎಸಗಿದ ಕಮಿಷನರ್ ಅವರನ್ನು ಕರ್ತವ್ಯದಿಂದ ಮುಕ್ತಿಗೊಳಿಸಲು ಸೂಚಿಸಿದ್ದು, ಆ ಸ್ಥಾನಕ್ಕೆ ನವೀನ್ ಅವರನ್ನು ನೇಮಕ ಮಾಡಿ ಅವರಿಗೆ ಜವಾಬ್ಧಾರಿ ನೀಡಲಾಗಿದೆ.