
ಕಾಂಗ್ರೆಸ್ ಶಾಸಕರಿಂದಲೇ ಮುಖ್ಯಮಂತ್ರಿ ಕುರ್ಚಿಗೆ ಬಾಂಬ್: ಹರಿಕೃಷ್ಣ ಬಂಟ್ವಾಳ್ ಲೇವಡಿ
ಬಂಟ್ವಾಳ: ಇಸ್ರೇಲ್ ದೇಶವು ಇರಾನ್ ಮೇಲೆ ಯುದ್ದ ಸಾರುವುದರೊಂದಿಗೆ ಬಾಂಬ್ ಹಾಕುತ್ತಿದ್ದರೆ, ಇತ್ತ ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುರ್ಚಿಗೆ ಅವರ ಸ್ವಪಕ್ಷೀಯ ಶಾಸಕರೇ ಬಾಂಬ್ ಇಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ಲೇವಡಿ ಮಾಡಿದರು.
ಸೋಮವಾರ ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮ ಪಂಚಾಯತ್ ಕಚೇರಿ ಮುಂಭಾಗ ಕರ್ನಾಟಕ ರಾಜ್ಯ ಸರಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತಾನಾಡಿದರು.
ಸಿಎಂ ಸಿದ್ದರಾಮಯ್ಯ ಅವರ ಅಪ್ತ ಶಾಸಕರಾದ ಬಿ.ಆರ್. ಪಾಟೀಲ್ ಅವರೇ ಲಂಚ ನೀಡಿದರೆ ಮಾತ್ರ ಮನೆ ನೀಡಲಾಗುತ್ತಿದೆ ಎಂದು ವಸತಿ ಸಚಿವರ ಮೇಲೆಯೇ ಗಂಭೀರ ಆರೋಪ ಮಾಡುತ್ತಿದ್ದರೆ, ಕಾನೂನು ಸಚಿವರಾದ ಎಚ್.ಕೆ. ಪಾಟೀಲ್ ಸರಕಾರಕ್ಕೆ 7 ಪುಟಗಳ ಪತ್ರವನ್ನು ಬರೆದು ಸರಕಾರಕ್ಕೆ ಚಾಟಿ ಬೀಸೂತ್ತಿದ್ದಾರೆ. ಎಲ್ಲಾ ಕ್ಷೇತ್ರದಲ್ಲು ಅಲ್ಪಸಂಖ್ಯಾತ ಮುಸ್ಲಿಂರಿಗೆ ಮೀಸಲಾತಿ ಪ್ರಮಾಣದಲ್ಲಿ ಹೆಚ್ಚಳ ಮಾಡುತ್ತಿರುವ ಸಿದ್ದರಾಮಯ್ಯ ಸರಕಾರ ಔರಂಗಜೇಬನ ಆಡಳಿತದ ಹಾದಿಯಲ್ಲಿ ಸಾಗುತ್ತಿದೆ ಎಂದು ಹರಿಕೃಷ್ಣ ಬಂಟ್ವಾಳ ಆರೋಪಿಸಿದರು.
ಕರ್ನಾಟಕ ರಾಜ್ಯ ಸರಕಾರವು ಕಳೆದ 2 ವರ್ಷಗಳಿಂದ ಜನರಿಗೆ ಸುಲಭವಾಗಿ ಸಿಗುವ ಸರಕಾರಿ ಸೇವೆಗಳನ್ನು ಇನ್ನಿಲ್ಲದ ನಿಯಾಮಗಳನ್ನು ಹಾಕಿ ಇನ್ನಷ್ಟು ಕಠಿಣಗೊಳ್ಳುತ್ತಿದೆಯಲ್ಲದೆ ಜನಸಾಮಾನ್ಯರ ಅನುಕೂಲಕ್ಕಿರುವ ಪಿಂಚಣಿ ಸಹಿತ ಅನೇಕ ಸವಲತ್ತುಗಳಲ್ಲೂ ಕಡಿತಗೊಳಿಸಿ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದ ಟೀಕಿಸಿದರು.
ಪ್ರತಿಭಟನಾ ಸಭೆಯಲ್ಲಿ ಸಂಗಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಜೀವಿ ಪೂಜಾರ್ತಿ, ಉಪಾಧ್ಯಕ್ಷ ಸುರೇಶ್ ಕುಲಾಲ್, ಗ್ರಾ.ಪಂ. ಸದಸ್ಯರಾದ ಸಂದೇಶ್ ಶೆಟ್ಟಿ ಪೋಡುಂಬು, ಸುನೀಲ್ ಶೆಟ್ಟಿಗಾರ್, ಉದಯ ಪೂಜಾರಿ, ಶಕುಂತಲಾ, ಪ್ರೇಮ, ವಿದ್ಯಾ ಪ್ರಭು, ಶಾಂತ, ಸಿದ್ದಕಟ್ಟೆ ಸಿ.ಎ. ಬ್ಯಾಂಕ್ ನಿರ್ದೇಶಕರಾದ ವಿಶ್ವನಾಥ ಶೆಟ್ಟಿಗಾರ್, ಶಕ್ತಿ ಕೇಂದ್ರದ ಪ್ರಮುಖ್ ನವೀನ್ ಹೆಗ್ಡೆ, ಬಿಜೆಪಿ ಸ್ಥಳೀಯ ಪ್ರಮುಖರಾದ ದೀಪಕ್ ಶೆಟ್ಟಿಗಾರ್, ದೇವರಾಜ್ ಸಾಲಿಯಾನ್, ಉಮೇಶ್ ಗೌಡ, ಸುಂದರ ಪೂಜಾರಿ, ಭಾಸ್ಕರ ಪ್ರಭು, ಸದಾನಂದ ಪೂಜಾರಿ ಕರ್ಪೆ, ಮಾಧವ ಶೆಟ್ಟಿಗಾರ್, ವಿನೋದ್ ಅಡಪ, ಭೋಜ ಶೆಟ್ಟಿಗಾರ್,, ಗಣೇಶ ಮೇಲುಗುಡ್ಡೆ, ಕೃಷ್ಣಪ್ಪ ಪೂಜಾರಿ ದಾಮೋದರ ಪೂಜಾರಿ, ರಾಜೇಶ್ ಶೆಟ್ಟಿ ಮತ್ತಿತ್ತರು ಉಪಸ್ಥಿತರಿದ್ದರು.
ಬಿಜೆಪಿ ಬಂಟ್ವಾಳ ಮಂಡಲ ಕಾರ್ಯದರ್ಶಿ ಪ್ರಭಾಕರ ಪ್ರಭು ಸ್ವಾಗತಿಸಿದರು. ಸಂದೇಶ್ ಶೆಟ್ಟಿ ವಂದಿಸಿದರು. ಬಳಿಕ ಪಿಡಿಒ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.