
ಕುದ್ಮುಲ್ರಂಗರಾವ್ ಸಾಧನೆ ಗಾಂದೀಜಿಗೆ ಪ್ರೇರಣೆ: ಕ್ಯಾ. ಬ್ರಿಜೇಶ್ ಚೌಟ
ಮಂಗಳೂರು: ತನ್ನ ಇಡೀ ಜೀವಮಾನವನ್ನೇ ದೀನದಲಿತರ ಸೇವೆಗೆ ಮುಡಿಪಾಗಿರಿಸಿದ ಕುದ್ಮುಲ್ರಂಗರಾವ್ ಸಾಧನೆ ಮಹಾತ್ಮಾಗಾಂದೀಜಿಗೆ ಪ್ರೇರಣೆಯಾಗಿತ್ತು ಎಂದು ದ.ಕ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.
ಕುದ್ಮುಲ್ ರಂಗರಾವ್ ಎಜ್ಯುಕೇಶನ್ ಟ್ರಸ್ಟ್ ಸಹಯೋಗದಲ್ಲಿ ಕುದ್ಮುಲ್ ರಂಗರಾವ್ 166ನೇ ಜಯಂತಿ ಹಿನ್ನೆಲೆಯಲ್ಲಿ ಭಾನುವಾರ ಬಾಬುಗುಡ್ಡೆಯ ಕುದ್ಮುಲ್ ರಂಗರಾವ್ ಸಮಾದಿ ಬಳಿ ಪುಷ್ಪಾರ್ಚನೆ ಹಾಘೂ ಗೌರವ ನಮನ ಸಲ್ಲಿಸಿ ಮಾತನಾಡಿದರು.
ಮಹಾತ್ಮಾ ಗಾಂಧಿ 1934 ಫೆ.24ರಂದು ಮಂಗಳೂರನ್ನು ಸಂದರ್ಶಿಸಿದಾಗ ಶೇಡಿಗುಡ್ಡೆಯಲ್ಲಿ ಕುದ್ಮುಲ್ ರಂಗರಾಯರು ಸ್ಥಾಪಿಸಿದ್ದ ಡಿಪ್ರೆಸ್ಟ್ ಕ್ಲಾಸ್ ಮಿಷನ್ ಸಂಸ್ಥೆಗೆ ಭೇಟಿ ಕೊಟ್ಟರು. ಆಗ ರಂಗರಾಯರು ನಿಧನರಾಗಿ ಆರು ವರ್ಷ ಕಳೆದಿತ್ತು. ಗಾಂಧೀಜಿ ಆ ಸಂಸ್ಥೆಯಲ್ಲಿ ಪರಿಶಿಷ್ಟಜಾತಿ, ಪರಿಶಿಷ್ಟಪಂಗಡಗಳ ಶಾಲಾ ಮಕ್ಕಳು ರಚಿಸಿದ ಕರಕುಶಲ ವಸ್ತುಗಳನ್ನು ಮತ್ತು ಅಂದವಾದ ಹೂದೋಟವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಸಾರ್ವಜನಿಕ ಭಾಷಣದಲ್ಲಿ ಗಾಂಧೀಜಿ ದಲಿತ ಉದ್ಧಾರಕ ಕುದ್ಮುಲ್ ರಂಗರಾಯರನ್ನು ತನ್ನ ಗುರು ಎಂದು ಘೋಷಿಸಿ ಅವರ ಸಮಾಜಮುಖಿ ಕೆಲಸಗಳಿಂದ ತಾನು ಪ್ರಭಾವಿತನಾದೆ ಎಂದು ಸಾರಿರುವುದು ವಿಶೇಷ. ಈ ಮೂಲಕ ರಂಗರಾವ್ ಮಹತ್ಮ ಗಾಂಧಿಜಿಗೆ ಪ್ರೇರಣಾದಾಯಕವಾಗಿ ಸೇವಾಕಾರ್ಯ ಮಾಡಿದ್ದರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಕುದ್ಮುಲ್ ರಂಗರಾವ್ ಭಾರತ ಕಂಡ ಮಹಾನ್ ವ್ಯಕ್ತಿವಾದಿ ಹಾಗೂ ಬಹುಮುಖ ವ್ಯಕ್ತಿತ್ವವುಳ್ಳವರಾಗಿದ್ದರು. ಕರಾವಳಿಯ ಸಾಮಾಜಿಕ ಹೋರಾಟದ ಪ್ರಮುಖ ರೂವಾರಿಯಾಗಿರುವ ಇವರ ಜನ್ಮದಿನವನ್ನು ಈ ಹಿಂದೆ ಪಾಲಿಕೆ ಹಾಗೂ ಜಿಲ್ಲಾಡಳಿತದಿಂದ ಪ್ರತೀ ವರ್ಷ ಆಚರಿಸಲಾಗುತ್ತಿತ್ತು. ಆದರೆ ಪ್ರಸ್ತುತ ಜಿಲ್ಲಾಡಳಿತ ಈಬಗ್ಗೆ ಯಾವುದೇ ಇರಾದೆ ತೋರಿಸುತ್ತಿಲ್ಲ. ಕುದ್ಮುಲ್ ರಂಗರಾವ್ ಸಮಾದಿ ಪ್ರವಾಸಿ ತಾಣವಾಗಿ ಅಭಿವೃದ್ದಿಪಡಿಸಲು ಈ ಹಿಂದೆ ಇದ್ದ ಬಿಜೆಪಿ ಸರ್ಕಾರ 3.5ಕೋ.ರೂ ಅನುದಾನ ಮೀಸಲಾಗಿರಿಸಿದ್ದರೂ ಈಗಿನ ಸರ್ಕಾರ ಯೋಜನೆ ಅನುಷ್ಠಾನಕ್ಕೆ ಹಿಂದೇಟು ಹಾಕುತ್ತಿದೆ ಎಂದರು.
ಸಾಮಾಜಿಕ ಕಾರ್ಯಕರ್ತ ವಾದಿರಾಜ ಮಾತನಾಡಿ, ಕುದ್ಮುಲ್ ರಂಗರಾವ್ ಅವರ ಜನ್ಮಶತಮಾನ ಆಚರಿಸಲು ಸಾಧ್ಯವಾಗಿಲ್ಲ, ಮುಂದಿನ 2028ರ ಜ.28ಕ್ಕೆ ಕುದ್ಮುಲ್ ರಂಗರಾವ್ ನಿಧನರಾಗಿ ಶತಮಾನ ಕಳೆದ ಹಿನ್ನೆಲೆಯಲ್ಲಿ ದೇಶಾಧ್ಯಂತ ಇವರ ಸಾಧನೆಯನ್ನು ಪರಿಚಯಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಅವರ ಸಾಧನೆಯ ಪುಸ್ತಕಕ, ಅಂಚೆಚೀಟಿ ಹೊರತರುವ ಕಾರ್ಯ ನಡೆಸಲಾಗುವುದು, ಈ ಮೂಲಕ ಕರಾವಳಿಯ ಕುದ್ಮುಲ್ ರಂಗರಾವ್ ಅವರನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಕಾರ್ಯನ ಮಾಡಬೇಕಾಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಸಾಮಾಜಿಕ ಕಾರ್ಯಕರ್ತ ವಾದಿರಾಜ, ಕುದ್ಮುಲ್ ರಂಗರಾವ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಬಿ.ಆರ್ ಹೃಯನಾಥ್, ಮಾಜಿ ಮೇಯರ್ ಮನೋಜ್ ಕೋಡಿಕಲ್, ಪಾಲಿಕೆ ಮಾಜಿ ಸದಸ್ಯರಾದ ಸಂದೀಪ್ ಗರೋಡಿ, ಶೈಲೇಶ್, ಭರತ್, ಉಪನ್ಯಾಸಕ ಪುಟ್ಟಸ್ವಾಮಿ ಮತ್ತಿತತರು ಇದ್ದರು.
ಕುದ್ಮುಲ್ ರಂಗರಾವ್ ಎಜ್ಯುಕೇಶನ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ರಘುವೀರ್ ಬಾಬುಗುಡ್ಡೆ ಕಾರ್ಯಕ್ರಮ ನಿರೂಪಿಸಿದರು.