
ಸೈಬರ್ ವಂಚಕರ ವಿರುದ್ಧ ಎಚ್ಚರಿಕೆಯಿಂದಿರಲು ಪೊಲೀಸ್ ಇಲಾಖೆ ಮನವಿ
ಮಂಗಳೂರು: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಮನಗಂಡ ಪೊಲೀಸ್ ಇಲಾಖೆಯು ಸೈಬರ್ ವಂಚಕರ ವಿರುದ್ಧ ಎಚ್ಚರಿಕೆಯಿಂದಿರಲು ಮನವಿ ಮಾಡಿದೆ. ಅದಕ್ಕಾಗಿ ಸಾಮಾಜಿಕ ಜಾಲತಾಣಗಳ ಮೊರೆ ಹೋಗಿರುವ ಪೊಲೀಸ್ ಇಲಾಖೆಯು ಮುನ್ನೆಚ್ಚರಿಕೆಯ ಕ್ರಮವಾಗಿ ಕೆಲವು ಸೂಚನೆಗಳನ್ನು ನೀಡಿದೆ.
ಹೂಡಿಕೆ ಮೋಸದ ಬಲೆಗೆ ಬೀಳಬೇಡಿ, ಹೂಡಿಕೆ ಮೋಸ ಎಂದರೇನು? ಸೈಬರ್ ವಂಚಕರು ನಕಲಿ ಹೂಡಿಕೆ ಅವಕಾಶಗಳ ಮೂಲಕ ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭದ ಭರವಸೆ ನೀಡಿ ಮೋಸಗೊಳಿಸು ತ್ತಾರೆ. ನೀವು ಹಣ ಹೂಡಿದ ನಂತರ ನಿಮ್ಮ ಹಣ ಕಣ್ಮರೆಯಾಗುತ್ತದೆ. ಈ ರೀತಿಯ ಮೋಸಗಳು ವೃತ್ತಿಪರವಾಗಿ ಕಾಣಿಸುತ್ತವೆ ಮತ್ತು ಅದರಿಂದ ಮುಕ್ತವಾಗಲು ಕೆಲವು ವಿಧಾನಗಳನ್ನು ಬಳಸಬಹುದು ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ನಕಲಿ ವೆಬ್ಸೈಟ್ಗಳು, ವಾಟ್ಸ್ಆಪ್ ಗುಂಪುಗಳು ಮತ್ತು ಟೆಲಿಗ್ರಾಂ ಚಾನೆಲ್ಗಳು, ಸಿನಿಮಾ ತಾರೆಯರ/ಹೆಸರಾಂತ ವ್ಯಕ್ತಿಗಳ ನಕಲಿ ಪ್ರಮಾಣಪತ್ರಗಳು, ಮೋಸದ ಆಪ್ಗಳು ಅಥವಾ ಸಾಮಾಜಿಕ ಜಾಲತಾಣಗಳ ಜಾಹೀರಾತುಗಳ ಬಗ್ಗೆ ಎಚ್ಚರ ವಹಿಸುವಂತೆ ಸೂಚಿಸಿದ್ದಾರೆ.
ವಂಚಕರು ಖಚಿತ ಹೆಚ್ಚುವರಿ ಲಾಭದ ಭರವಸೆ ನೀಡುತ್ತಾರೆ, ತಕ್ಷಣ ಹೂಡಿಕೆಗೆ ಒತ್ತಡ ಹಾಕುತ್ತಾರೆ, ಹಣದ ದ್ವಿಗುಣ/ತ್ರಿಗುಣ ಲಾಭದ ಭರವಸೆ ನೀಡುತ್ತಾರೆ, ನೋಂದಾಯಿಸದ ಕಂಪನಿಗಳು ಅಥವಾ ಏಜೆಂಟ್ಗಳು, ಯುಪಿಐ, ನಕಲಿ ಲಾಭ ತೋರಿಸುವ ನಕಲಿ ಸ್ಕ್ರೀನ್ಶಾಟ್ಗಳನ್ನು ತೋರಿಸಿ ಮೋಸದ ಬಲೆಗೆ ಕೆಡವುತ್ತಿರುವ ಬಗ್ಗೆ ಜಾಗೃತೆ ವಹಿಸಲು ಮನವಿ ಮಾಡಿದ್ದಾರೆ.
ಸುರತ್ಕಲ್ನಲ್ಲಿ ವಾಟ್ಸ್ಆಪ್ ಗ್ರೂಪ್ಗಳ ಮೂಲಕ ಹೂಡಿಕೆ ಮಾಡುವಂತೆ ನಂಬಿಸಿ ಹಂತ ಹಂತವಾಗಿ 1.57 ಕೋ.ರೂ. ಹಣ ಹೂಡಿಕೆ ಮಾಡಿಸಿ ಮೋಸ ಮಾಡಿದ್ದಾರೆ. ಕೆಪಿಟಿಯಲ್ಲಿ ಶೇರುಮಾರುಕಟ್ಟೆ ಲಾಭದ ಆಶಯದಲ್ಲಿ ವಾಟ್ಸ್ಆಪ್ ತರಬೇತಿ ಗ್ರೂಪ್ ಮೂಲಕ 37.49 ಲಕ್ಷ ರೂ. ಹೂಡಿಕೆ ಮಾಡಿಸಿ ಬಳಿಕ ಲಾಭಾಂಶ ಪಡೆಯಲು ಹೆಚ್ಚು ತೆರಿಗೆ ಪಾವತಿಸುವಂತೆ ಒತ್ತಾಯಿಸಿ ಮೋಸ ಮಾಡಿದ್ದಾರೆ ಎಂದು ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.
ಪಂಜಿಮೊಗರುವಿನಲ್ಲಿ ಇನ್ಸ್ಟ್ರಾಗ್ರಾಂನಲ್ಲಿ ವರ್ಕ್ ಫ್ರಂ ಹೋಂ ಜಾಹೀರಾತು ನೆಪದಲ್ಲಿ 27.01 ಲಕ್ಷ ರೂ.ವನ್ನು ದೋಚಿದ್ದಾರೆ. ಕಂಕನಾಡಿಯಲ್ಲಿ ಫೇಸ್ಬುಕ್ ಜಾಹೀರಾತು ಮೂಲಕ ಶೇರುಮಾರುಕಟ್ಟೆ ಲಾಭದ ಭರವಸೆ ನೀಡಿ 30.55 ಲಕ್ಷ ರೂ. ಹೂಡಿಕೆ ಮಾಡುವಂತೆ ನಂಬಿಸಿ ಬಳಿಕ ಹಣ ನೀಡದೆ ಮೋಸ ಮಾಡಿದ್ದಾರೆ. ಉರ್ವದಲ್ಲಿ ಟೆಲಿಗ್ರಾಂ ಖಾತೆಯ 13.57 ಲಕ್ಷ ರೂ. ಹೂಡಿಕೆ ಮಾಡಿಸಿ ಯಾವುದೇ ಲಾಭ, ಹೂಡಿಕೆ ಹಣ ನೀಡದೆ ಮೋಸ ಮಾಡಿದ್ದಾರೆ ಎಂದು ಕಮಿಷನರ್ ಮಾಹಿತಿ ನೀಡಿದ್ದಾರೆ.