
ಹಿಂದೂ ರುದ್ದ ಭೂಮಿಯಲ್ಲಿ ಅಳವಡಿಸಿದ್ದ ಲಕ್ಷಾಂತರ ರೂ. ಮೌಲ್ಯದ ಸೊತ್ತು ಕಳವು
ಬಂಟ್ವಾಳ: ತಾಲೂಕಿನ ಅಮ್ಮಾಡಿ ಗ್ರಾಮದ ದೇವಿನಗರ ಎಂಬಲ್ಲಿರುವ ಹಿಂದೂ ರುದ್ರಭೂಮಿಯಿಂದ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನ ಕಳವುಗೈದ ಘಟನೆ ಬೆಳಕಿಗೆ ಬಂದಿದೆ.
ರುದ್ರಭೂಮಿಯಲ್ಲಿದ್ದ ಹೆಣ ಸುಡುವ ಎರಡು ಸಿಲಿಕಾನ್ ಚೇಂಬರ್, ಹಿತ್ತಾಳೆಯ ನೀರಿನ ನಳ್ಳಿ, ಕಬ್ಬಿಣದ ಏಣಿ, ಕಬ್ಬಿಣದ ಗೇಟ್ ಹಾಗೂ ಇನ್ನಿತರ ಸೊತ್ತುಗಳು ಸೇರಿದಂತೆ ಸುಮಾರು 4 ಲಕ್ಷ ಮೌಲ್ಯದ ಸೊತ್ತುಗಳನ್ನು ಕಳವುಗೈಯಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸೋಮವಾರ ಸ್ಥಳೀಯ ನಿವಾಸಿ ಐತಪ್ಪ ಪೂಜಾರಿ ಎಂಬವರ ಮೃತದೇಹದ ದಹನ ಮಾಡಲೆಂದು ರುದ್ರಭೂಮಿಗೆ ಬಂದಿದ್ದ ವೇಳೆ ಈ ಕಳವು ಕೃತ್ಯ ಬೆಳಕಿಗೆ ಬಂದಿದೆ.
ಈ ಬಗ್ಗೆ ಅಮ್ಟಾಡಿ ಗ್ರಾಮ ಪಂಚಾಯತ್ ವತಿಯಿಂದ ಹಾಗೂ ಹಿಂದೂ ರುದ್ರಭೂಮಿ ಸಮಿತಿಯಿಂದಲು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ಇದೇ ಪರಿಸರದಲ್ಲಿ ಇಂಡಸ್ಟ್ರೀವೊಂದರ ಹೊರಗಡೆ ಇರಿಸಲಾಗಿದ್ದ ತಗಡುಶೀಟನ್ನು ಕಳವುಗೈದ ಘಟನೆಯು ನಡೆದಿದ್ದು, ಇದೀಗ ಸ್ಮಶಾನದಲ್ಲಿ ಅಳವಡಿಸಲಾದ ಸೊತ್ತುಗಳನ್ನೇ ಕಿತ್ತುಕೊಂಡು ದೋಚಲಾಗಿದೆ. ಹಗಲು ಹೊತ್ತಿನಲ್ಲಿ ಇದನ್ನು ಗಮನಿಸಿರುವ ಕಳ್ಳರು ರಾತ್ರಿ ಹೊತ್ತಿನಲ್ಲಿ ಈ ಕೃತ್ಯ ನಡೆಸಿರಬೇಕೆಂದು ಶಂಕಿಸಲಾಗಿದೆ.
ಅಮ್ಟಾಡಿ ಗ್ರಾಮದಲ್ಲಿ ಕೆಲವು ದಿನಗಳಿಂದ ಕಳ್ಳರ ಹಾವಳಿ ಕಂಡು ಬಂದಿದ್ದು, ಮನೆಯ ಹೊರಗಡೆ ನಿಲ್ಲಿಸಿರುವ ವಾಹನಗಳ ಸಹಿತ ಬೆಲೆ ಬಾಳುವ ವಸ್ತುಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಅಮ್ಟಾಡಿ ಗ್ರಾ.ಪಂ. ಅಧ್ಯಕ್ಷ ವಿಜಯಕುಮಾರ್ ಅವರು ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ.