
ವಿಶ್ವದಾಖಲೆಯ ಯುವ ನೃತ್ಯಕಲಾವಿದೆ ರೆಮೊನಾ ಪೆರೇರಾ ಅವರಿಗೆ ಬ್ರಹ್ಮಕುಮಾರೀಸ್ ಮಂಗಳೂರು ಶಾಖೆಯಿಂದ ಸನ್ಮಾನ
ಸನ್ಮಾನ ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರೀಸ್ ಹುಬ್ಬಳ್ಳಿ ವಲಯದ ಹಿರಿಯ ಸಹೋದರಿ ರಾಜಯೋಗಿನಿ ಬ್ರಹ್ಮ ಕುಮಾರಿ ನಿರ್ಮಲ ಅವರು ರೆಮೊನಾಳನ್ನು ಸ್ಮೃತಿಚಿಹ್ನೆ, ಗೌರವ ಪತ್ರ ಹಾಗೂ ದೈವೀ ಆಶೀರ್ವಾದಗಳೊಂದಿಗೆ ಸನ್ಮಾನಿಸಿದರು.
ಬಳಿಕ ಅವರು ಮಾತನಾಡಿ, ರೆಮೊನಾಳ ನೃತ್ಯ ಕೇವಲ ಕಲೆ ಅಲ್ಲ, ಅದು ಆತ್ಮದೊಳಗಿನ ಶುದ್ಧತೆ ಮತ್ತು ಪರಮಾತ್ಮದೊಂದಿಗೆ ಸಂಪರ್ಕ ಸಾಧಿಸುವ ಪ್ರೇರಕ ಪ್ರಾರ್ಥನೆ. ಅವರ ಸಾಧನೆ ಸಮಯದ ಮಿತಿಯನ್ನು ಮೀರಿ ನಡೆದ ಮನಸ್ಸಿನ ಉನ್ನತ ಪ್ರದರ್ಶನವಾಗಿದೆ ಎಂದರು.
ಬ್ರಹ್ಮ ಕುಮಾರಿಸ್ ಪ್ರಧಾನ ಕಚೇರಿ ಆಬು ಪರ್ವತ ರಾಜಸ್ಥಾನಕ್ಕೆ ಕಳೆದ ವರ್ಷ ಭೇಟಿ ನೀಡಿದ ರೆಮೊನಾ ಪೆರೇರಾ ಅವರು ತಮ್ಮ ಅನನ್ಯ ಸಾಧನೆಗೆ ಕಾರಣವಾದ ಶಕ್ತಿ ಹಾಗೂ ಶಾಂತಿಗೆ ಬ್ರಹ್ಮಕುಮಾರೀಸ್ನ ರಾಜಯೋಗ ಧ್ಯಾನವೇ ಮೂಲವೆಂದು ತಿಳಿಸಿದರು.
ತಾಯಿ-ತಂದೆ, ಗುರುಗಳು ಹಾಗೂ ಬ್ರಹ್ಮಕುಮಾರೀಸ್ ಕುಟುಂಬದ ಬೆಂಬಲದ ಜತೆಗೇ ದೈವೀ ಶಕ್ತಿ ತಮ್ಮ ಪ್ರಯಾಣದ ಹಿನ್ನೆಲೆಯಾಗಿದೆ ಎಂದು ಅವರು ಹೇಳಿದ್ದಾರೆ.
ಈ ಅಪರೂಪದ ಸಾಧನೆಯ ಮೂಲಕ ರೆಮೊನಾ ತಮ್ಮ ಶಕ್ತಿಯ ನಿರಂತರ ಸಾಧನೆ, ದೃಢ ಸಂಕಲ್ಪ ಮತ್ತು ನೃತ್ಯ ಕಲೆಯ ಮೂಲಕ ಆತ್ಮೀಯತೆಯನ್ನು ವ್ಯಕ್ತಪಡಿಸಿದ್ದಾರೆ.
ಮಂಗಳೂರು ಶಾಖೆಯ ಸಂಚಾಲಕರು ಬ್ರಹ್ಮ ಕುಮಾರಿ ವಿಶ್ವೇಶ್ವರಿ, ಖ್ಯಾತ ಆಪ್ತ ಸಮಾಲೋಚಕಿ ರೇವತಿ, ನೃತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಗಣ್ಯರು ನೂರಾರು ಅಭಿಮಾನಿಗಳು ಭಾಗವಹಿಸಿದ್ದರು.
ಈ ಸನ್ಮಾನ ಸಮಾರಂಭದಲ್ಲಿ ಅನಿಸಿಕೆಗಳ ಹಂಚಿಕೆ ಹಾಗೂ ಸಂವೇದನಾತ್ಮಕ ಚಿಂತನ ಸೇರಿದಂತೆ ಧ್ಯಾನ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದ ಮೂಲಕ ಬ್ರಹ್ಮಕುಮಾರೀಸ್ ಸಂಸ್ಥೆಯು ಯುವ ಪ್ರತಿಭೆಗಳ ಪ್ರೋತ್ಸಾಹ ನೀಡುತ್ತಿರುವ ಮಹತ್ವ, ಆಧ್ಯಾತ್ಮಿಕ ಶ್ರದ್ಧಾ ಹಾಗೂ ಶುದ್ಧತೆಯ ಮೂಲಕ ಸಮಾಜ ಸೇವೆ ಮಾಡುವ ಸಂಕಲ್ಪವನ್ನು ಮಾಡಲಾಯಿತು.