ಧರ್ಮಸ್ಥಳ ಗ್ರಾಮದಲ್ಲಿ ಎಸ್ಐಟಿ ತನಿಖೆ ವಿಚಾರ- ಸೋಮವಾರ ಗೃಹ ಸಚಿವರಿಂದ ಸದನದಲ್ಲಿ ಉತ್ತರ: ದಿನೇಶ್ ಗುಂಡೂರಾವ್
ನೆಹರೂ ಮೈದಾನದಲ್ಲಿ ಶುಕ್ರವಾರ 79ನೆ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದರು.
ಸದನದಲ್ಲಿ ತನಿಖೆ ವಿಚಾರದಲ್ಲಿ ಗೃಹ ಸಚಿವ ಪರಮೇಶ್ವರ್ ಹಾಗೂ ಮುಖ್ಯಂತ್ರಿ ಸಿದ್ಧರಾಮಯ್ಯ ಅವರೂ ಹೇಳಿಕೆ ನೀಡಬಹುದು. ಇದರಲ್ಲಿ ಮುಚ್ಚಿ ಹಾಕುವಂತದ್ದು ಏ ನೂ ಇಲ್ಲ. ದರ್ಶನ್, ಪ್ರಜ್ವಲ್ ರೇವಣ್ಣ ಪ್ರಕರಣಗಳೇ ಇರಲಿ, ನಿಜಾಂಶ ಹೊರಬೇಕು. ತಪ್ಪಾಗಿದ್ದರೆ ಶಿಕ್ಷೆಯಾಗಬೇಕು. ಅಮಾಯಕರಿಗೆ ತೊಂದರೆ ಆಗಬಾರದು. ಆಪಾದ ನೆಗೆ ತಕ್ಕುದಾಗಿ ತನಿಖೆ ನಡೆಯುತ್ತಿದೆ ಎಂದವರು ಹೇಳಿದರು.
ರಾಷ್ಟ್ರೀಯ ವಾಹಿನಿಗೆ ಸಂದರ್ಶನ ನೀಡುವ ಮೂಲಕ ದೂರುದಾರ ತನ್ನ ಗುರುತು ಪತ್ತೆಗೆ ಕಾರಣವಾಗುತ್ತಿದ್ದಾನೆ ಎಂಬ ಸುದ್ದಿಗಾರರ ಪ್ರಶ್ನೆಗೆ, ದೂರುದಾರ ಏನು ಹೇಳಿಕೆ ನೀಡಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ಆದರೆ ಕಾನೂನು ಪ್ರಕಾರ ಯಾವ ಕ್ರಮ ಆಗಬೇಕು ಎಂಬ ಬಗ್ಗೆ ಪೊಲೀಸ್ ಇಲಾಖೆ ಕ್ರಮ ವಹಿಸಲಿದೆ. ಈ ವಿಚಾರ ದೇಶ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಯಿತು. ಆಪಾದನೆ, ಹೇಳಿಕೆ ಮತ್ತು ಅದಕ್ಕೆ ಮಾಧ್ಯಮದಲ್ಲೂ ಅದಕ್ಕೆ ಪ್ರಚಾರ ದೊರಕಿದ್ದು, ಆ ಆರೋಪಳೆಲ್ಲವೂ ಗಂಭೀರವಾದ ಆರೋಪ. ಹಾಗಾಗಿ ಇದೀಗ ಉತ್ತಮ ಅಧಿಕಾರಿಗಳ ತನಿಖೆಯಿಂದ ಯಾರಿಗೂ ಅನುಮಾನ ಇರದು. ಈಗ ಯಾರು ಏನೇ ಮಾತನಾಡಿದರೂ, ಜನರ ಮುಂದಿಡುವ ಸತ್ಯಾಂಶ ಮುಖ್ಯವಾಗುತ್ತದೆ ಎಂದು ಸಚಿವರು ಹೇಳಿದರು.
ಯಾರಾರಯರೋ ಏನೇನೋ ಹೇಳಿಕೆ ನೀಡುವುದಕ್ಕೆ ನಾವು ಪ್ರತಿಕ್ರಿಯೆ ನೀಡಲು ಆಗದು. ನಿಜಾಂಶ ಏನಿದೆ,ಸಾಕ್ಷ್ಯ ಏನಿದೆ ಅದರ ಪ್ರಕಾರ ಸರಕಾರ ಹಾಗೂ ಪೊಲೀಸ್ ಇಲಾಖೆ ನಡೆದುಕೊಳ್ಳಲಿದೆ.
ಯಾವುದೇ ಷಡ್ಯಂತ್ರ ಇರಬಹುದು ಎಂಬ ಆರೋಪವನ್ನೂ ಅಲ್ಲಗಳೆಯಲಾಗದು. ತನಿಖೆ ಮೂಲಕವೇ ಅದು ಹೊರಬರಬೇಕಿದೆ. ನನ್ನದು ಸೇರಿದಂತೆ ವೈಯಕ್ತಿಕವಾಗಿ ಎಲ್ಲರದ್ದೂ ಭಿನ್ನ ಅಭಿಪ್ರಾಯ ಇರಬಹುದು. ಆದರೆ ಅದು ಸಾಬೀತುಗೊಳ್ಳಬೇಕಾದರೆ, ತನಿಖೆ ಮೂಲಕವೇ ಗೊತ್ತಾಗುವುದು. ಹಾಗಾಗಿ ಎಲ್ಲಾ ವಿಚಾರದಲ್ಲೂ ತನಿಖೆ ಆಗಲಿದೆ.
ಉತ್ಖನನ ಇನ್ನು ಎಲ್ಲಿಯವರೆಗೆ ನಡೆಯಲಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ, ಅದು ಎಸ್ಐಟಿ ನಿರ್ಧರಿಸಲಿದೆ. ಕಾಡು ಪ್ರದೇಶದಲ್ಲಿ ಮಳೆ ನಡುವೆ ಅಗೆಯುವುದು ಸುಲಭದ ಕೆಲಸವಲ್ಲ. ಪೊಲೀಸರು ಜವಾಬ್ಧಾರಿತವಾಗಿ ನಡೆದುಕೊಂಡಿದ್ದಾರೆ. ಅವರಿಗೂ ತೊಂದರೆಯಾಗಿದೆ. ಅದರೂ ಅವರು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೊಲೀಸ್ನವರಿಗೆ ಯಾವುದೇ ಹಸ್ತಕ್ಷೇಪವಿಲ್ಲದೆ ಮುಕ್ತ ಅವಕಾಶ ನೀಡಲಾಗಿದೆ. ಉತ್ಖನನ ಮುಂದುವರಿಯಲಿದೇ, ಮುಂದೆ ಏನು ಮಾಡಬೇಕು ಎಂಬ ಬಗ್ಗೆ ಗೃಹ ಸಚಿವರು ಸೋಮವಾರ ಸದನದಲ್ಲಿ ತಿಳಿಸಲಿದ್ದಾರೆ ಎಂದರು.
ನಾನು ಅನೇಕ ಸಂಘಟನೆಗಳು, ಅದರಲ್ಲಿ ಎಡ ಸಂಘಟನೆಗಳು ಸೇರಿ ಒತ್ತಡ ಹಾಕಿದ್ದರು ಎಂದಿರುವುದು. ಹಾಗಾಗಿ ಎಸ್ಐಟಿ ತನಿಖೆಗೆ ಆದೇಶಿಸಲಾಯಿತು. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರೂ ಎಸ್ಐಟಿ ತನಿಖೆಯಾದರೆ ಒಳ್ಳೆಯದು ಎಂದಿದ್ದರು. ನ್ಯಾಯಾಧೀಶ ಗೋಪಾಲಗೌಡರೂ ಹೇಳಿಕೆ ನೀಡಿದ್ದರು. ನಾನು ದ.ಕ. ಜಿಲ್ಲಾ ಪೊಲೀಸರೇ ತನಿಖೆ ಮಾಡುತ್ತಾರೆ, ಎಸ್ಐಟಿ ಅಗತ್ಯ ಇಲ್ಲ ಎಂದು ಹೇಳಿದ್ದೆ. ಆದರೆ ಎಸ್ಐಟಿ ಮಾಡಿದ್ದೇ ಒಳ್ಳೆಯದಾಯಿತು. ಇಲ್ಲವಾದರೆ ಸ್ಥಳೀಯ ಪೊಲೀಸರು ಸರಿಯಾಗಿ ಮಾಡಿಲ್ಲ ಎಂಬ ಗೂಬೆ ಕೂರಿಸುವ ಕೆಲಸ ಆಗುತ್ತಿತ್ತು. ಉತ್ತಮ ಅಧಿಕಾರಿಗಳ ಮೂಲಕ ಒತ್ತಡವಿಲ್ಲದೆ ತನಿಖೆ ನಡೆಯುತ್ತಿದೆ ಎಂದು ಗುಂಡುರಾವ್ ಹೇಳಿದರು.