ಕ್ರೀಡಾ ದಿನಾಚರಣೆ: ಸಂತ ಫಿಲೋಮಿನಾ ಕಾಲೇಜಿನಲ್ಲಿ ಸಾಧಕರಿಗೆ ಸನ್ಮಾನ
Friday, August 29, 2025
ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಆವರಣದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಕ್ರೀಡಾ ಸಾಧಕರ ಸನ್ಮಾನ ಕಾರ್ಯಕ್ರಮವನ್ನು ದೈಹಿಕ ಶಿಕ್ಷಣ ನಿರ್ದೇಶಕ ಡಾ. ಎಲಿಯಾಸ್ ಪಿಂಟೋ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಪ್ರಥಮ ಬಿಬಿಎ ವಿಭಾಗದ ವಿದ್ಯಾರ್ಥಿ ನಿಖಿಲ್ ಯೋಗಾಸನದಲ್ಲಿ ಚಿನ್ನದ ಪದಕ, ಪ್ರಥಮ ಬಿಎಸ್ಸಿಯ ನಂದನ್ ಈಜು ಸ್ಪರ್ಧೆಯ 3 ಮತ್ತು 6 ಮೀಟರ್ ಡೈವಿಂಗ್ ವಿಭಾಗದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ, ತೃತೀಯ ಬಿಸಿಎ ವಿದ್ಯಾರ್ಥಿನಿ ವರ್ಷಾ ಉಡುಪಿಯಲ್ಲಿ ನಡೆದ ರಾಜ್ಯ ಅಮೆಚೂರ್ ಅಥ್ಲೆಟಿಕ್ ಮೀಟರ್ನಲ್ಲಿ ಹ್ಯಾಮರ್ ಥ್ರೋನಲ್ಲಿ ಬೆಳ್ಳಿ ಪದಕ, ಪ್ರಥಮ ಬಿಕಾಂನ ಪೃಥ್ವಿ ರಾಜ್ಯ ಮಟ್ಟದ ಅಮೆಚೂರ್ ಅಥ್ಲೆಟಿಕ್ ಮೀಟರ್ನಲ್ಲಿ ಹ್ಯಾಮರ್ ಥ್ರೋನಲ್ಲಿ ಕಂಚಿನ ಪದಕ ಪಡೆಯುವುದರ ಮುಖಾಂತರ ಕಾಲೇಜಿಗೆ ಕೀರ್ತಿ ತಂದಿದ್ದು, ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ರೆ.ಡಾ. ಅಂಟೋನಿ ಪ್ರಕಾಶ್ ಮೊಂತೇರೋ ಮಾತನಾಡಿ, ಜೀವನದಲ್ಲಿ ಶಿಸ್ತು ಮತ್ತು ಏಕಾಗ್ರತೆಯ ಮಹತ್ವವನ್ನು ಎತ್ತಿಹಿಡಿದರು. ಯಶಸ್ಸು ಗಳಿಸಲು ಧ್ಯಾನಚಂದ್ ಅವರಂತಹ ಶಿಸ್ತು ಇರಬೇಕು ಎಂದು ಕರೆ ನೀಡಿದರು. ಕೇವಲ ಕ್ರೀಡಾಪಟು ಮಾತ್ರವಲ್ಲದೆ ರಾಷ್ಟ್ರೀಯ ಐಕಾನ್ ಆಗಿ ಬೆಳೆದ ಧ್ಯಾನಚಂದ್ ಅವರ ಸಮರ್ಪಣಾ ಭಾವವನ್ನು ಅವರು ಶ್ಲಾಘಿಸಿದರು, ಕ್ರೀಡೆಯು ಜೀವನದಲ್ಲಿ ಶಿಸ್ತು, ಏಕಾಗ್ರತೆ ಮತ್ತು ತಂಡದ ಕೆಲಸವನ್ನು ಕಲಿಸುತ್ತದೆ ಎಂದು ಅವರು ಒತ್ತಿ ಹೇಳಿದರು.
ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ. ವಿಜಿಯಯ್ ಕುಮಾರ್ ಎಂ., ಶೈಕ್ಷಣಿಕ ವಿಭಾಗದ ಕುಲಸಚಿವರಾದ ಡಾ. ನಾರ್ಬರ್ಟ್ ಮಸ್ಕರೇನ್ಹಸ್, ಪರೀಕ್ಷಾಂಗ ಕುಲಸಚಿವರಾದ ಡಾ. ವಿನಯಚಂದ್ರ ಮತ್ತು ಐಕ್ಯೂಎಸಿ (IQAC) ಸಂಯೋಜಕ ಡಾ. ಎಡ್ವಿನ್ ಡಿ’ಸೋಜ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ. ರಾಧಾಕೃಷ್ಣ ಗೌಡ ಸ್ವಾಗತಿಸಿದರು. ವಿದ್ಯಾರ್ಥಿ ಕಲ್ಯಾಣಾಧಿಕಾರಿ ಸ್ವರ್ಲ್ ಫಿಯೋನಾ ಪಿರೇರಾ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.


