
ಸಂತ ಫಿಲೋಮಿನಾ ಕಾಲೇಜಿನ ಮಾನವಿಕ ವಿಭಾಗದಿಂದ ‘ಕಾಲಿಗೆ ಮಣ್ಣು, ಮನಸ್ಸಿಗೆ ಮಜಾ!’ ಕಾರ್ಯಕ್ರಮ
Saturday, August 2, 2025
ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಮಾನವಿಕ ವಿಭಾಗದ ಆಶ್ರಯದಲ್ಲಿ ‘ಕಾಲಿಗೆ ಮಣ್ಣು, ಮನಸ್ಸಿಗೆ ಮಜಾ!’ ಎಂಬ ಶೀರ್ಷಿಕೆ ಅಡಿಯಲ್ಲಿ ಮಾನವಿಕ ವಿಭಾಗದ ವಿದ್ಯಾರ್ಥಿಗಳಿಗೆ ಕೇಸರಿನ ಗದ್ದೆಯಲ್ಲಿ ನಡೆಯಪಡುವ ವಿವಿಧ ಆಟೋಟ ಸ್ಪರ್ಧೆಗಳನ್ನು ಪುತ್ತೂರು ಬೆದ್ರಾಳ ಸಮೀಪದ ಅಪ್ಪಿ ಮೂಲ್ಯ ಇವರ ಗದ್ದೆಯಲ್ಲಿ ಇಂದು ನಡೆಯಿತು.
ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಆಧುನಿಕ ಯುಗದಲ್ಲಿ ಕೃಷಿ ಮಾಡುವ ಜನರ ಒಲವು ಕ್ಷೀಣಿಸುತ್ತಿದೆ, ಕಾರಣಗಳು ಹಲವಾರು. ಕೃಷಿಯ ಮೇಲಿನ ಒಲವನ್ನು ಹೆಚ್ಚಿಸಲು ಕಾಲೇಜಿನ ಮಾನವಿಕ ವಿಭಾಗವು ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ್ದು ಸಂತೋಷದ ವಿಚಾರ. ವಿದ್ಯಾರ್ಥಿಗಳಿಗೆ ಕೃಷಿಯ ಮಹತ್ವ, ಕೃಷಿಯ ವಿವಿಧ ಸವಾಲುಗಳು ಮತ್ತು ಪರಿಹಾರಗಳು ಮನದಟ್ಟು ಮಾಡುವ ಮೂಲಕ ದೇಶದ ಪ್ರಗತಿ ಕಾಣಲು ಸಾಧ್ಯ. ಎಲ್ಲರೂ ತಂತ್ರಜ್ಞಾನದ ಆವಿಷ್ಕಾರದಲ್ಲಿ ತೊಡಗಿದರೆ ಹೊಟ್ಟೆಗೆ ಅನ್ನ ನೀಡುವವನು ಯಾರು ಎಂಬ ದೂರದ್ರಷ್ಟಿಯಂದಿಗೆ ಕೃಷಿಗೆ ಯುವಜನರು ಒಲವು ತೋರಿದಲ್ಲಿ ನಮ್ಮ ರಾಷ್ಟ್ರವು ಅಭಿವೃದ್ಧಿಯ ಕಡೆಗೆ ಸಾಗಬಹುದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಪ್ರಾಯೋಜಕರಾದ ಅಪ್ಪಿ ಮೂಲ್ಯರ ಮಗ ನಾರಾಯಣ ಮೂಲ್ಯರನ್ನು ಸನ್ಮಾನಿಸಿದರು.
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ವಾಸುದೇವ ಎನ್. ಕಾರ್ಯಕ್ರಮದ ಪ್ರಾಮುಖ್ಯತೆಯನ್ನು ವಿವರಿಸಿದರು. ದ್ವಿತೀಯ ಬಿ.ಎ. ವಿದ್ಯಾರ್ಥಿ ಪವನ್ ಸ್ವಾಗತಿಸಿ, ತೃತೀಯ ಬಿ.ಎ. ವಿದ್ಯಾರ್ಥಿ ಮಹಮ್ಮದ್ ಮುಜಾಮಿಲ್ ವಂದಿಸಿದರು. ದ್ವಿತೀಯ ಬಿ.ಎ. ವಿದ್ಯಾರ್ಥಿನಿ ಕೃತಿಕಾ ಕಾರ್ಯಕ್ರಮವನ್ನು ನಿರೂಪಿಸಿದರು.
ವಿದ್ಯಾರ್ಥಿಗಳಾದ ಧನ್ಯಶ್ರೀ ಮತ್ತು ಬಳಗ ತುಳುನಾಡಿನ ಪಾಡ್ಥನವನ್ನು ಹಾಡುವ ಮೂಲಕ ಕಾರ್ಯಕ್ರವಮದ ಸೊಬಗನ್ನು ಹೆಚ್ಚಿಸಿದರು. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ವಿದ್ಯಾರ್ಥಿಯಾದ ಧನುಷ್ ಶೇಖರ್ ರಾವ್ ಕೋಣವನ್ನು ಓಡಿಸುವ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದರು.
ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಕ್ಯಾ. ಜೋನ್ಸನ್ ಡೇವಿಡ್ ಸಿಕ್ವೇರಾ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಿದರು. ಸಮಾರೋಪ ಕಾರ್ಯಕ್ರಮದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲ ಡಾ. ವಿಜಯಕುಮಾರ್ ಎಂ. ಬಹುಮಾನಗಳನ್ನು ವಿತರಿಸಿ ಶುಭಹಾರೈಸಿದರು. ಮಾನವಿಕ ವಿಭಾಗದ ಉಪನ್ಯಾಸಕರಾದ ಹರ್ಷಿತ ಪಿ.ವಿ., ಅನಿಷಾ ಡಿ.ಬಿ. ಸಹಕರಿಸಿದರು.