ಮರಾಟಿ ಸಮಾಜ ಸೇವಾ ಸಾಧಕರಿಗೆ ಗೌರವಾರ್ಪಣೆ
Sunday, September 14, 2025
ಮೂಡುಬಿದಿರೆ: ಮೂಡುಬಿದಿರೆ ತಾಲೂಕು ಮರಾಟಿ ಸಮಾಜ ಸೇವಾ ಸಂಘದ, ಚಾರಿಟೇಬಲ್ ಟ್ರಸ್ಟ್, ಮಹಿಳಾ ವೇದಿಕೆ, ಯುವ ವೇದಿಕೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಸಾಧಕರಿಗೆ ಗೌರವಾರ್ಪಣೆ ಕಾಯ೯ಕ್ರಮವು ಭಾನುವಾರ ಸಮಾಜ ಮಂದಿರದಲ್ಲಿ ನಡೆಯಿತು.
ಆಳ್ವಾಸ್ನ ಡಾ.ಗಣೇಶ ನಾಯ್ಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಂಘದ ಅಧ್ಯಕ್ಷ ಶಂಕರ ನಾಯ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾಯ೯ಕ್ರಮದಲ್ಲಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಪ್ರಕಾಶ್ ನಾಯ್ಕ್, ಅಂಚೆ ಇಲಾಖೆಯಲ್ಲಿ ಉತ್ತಮ ಡಾಕ್ ಸೇವಕ ಪ್ರಶಸ್ತಿ ಪಡೆದ ಉಮೇಶ್ ನಾಯ್ಕ, ಉತ್ತಮ ಕೃಷಿಕ ಸಹಕಾರಿ ನಿರ್ದೇಶಕ ಮೂಡು ಕೊಣಾಜೆ ಉಮೇಶ್ ನಾಯ್ಕ, ಪ.ಪೂ.ಕಾ. ಪ್ರಾಂಶುಪಾಲರಾಗಿ ಪದೋನ್ನತಿ ಹೊಂದಿರುವ ಶ್ರೀನಿವಾಸ ಯಶೋದಾ ನಾಯ್ಕ, ರಾಜ್ಯ ಮಟ್ಟದ ಸಮಾವೇಶದ ನೇತಾರ ಮಹಾಲಿಂಗ ಶಾಲಿನಿ ನಾಯ್ಕ, ಅರಣ್ಯ ಇಲಾಖೆಯ ನಿವೃತ್ತ ಉನ್ನತ ಅಧಿಕಾರಿ ಡಾ ಸುಂದರ ನಾಯ್ಕ್ ಅವರನ್ನು ಸನ್ಮಾನಿಸಲಾಯಿತು.
ಶ್ರೀನಿವಾಸ ನಾಯ್ಕ್ ಅವರು ಸನ್ಮಾನಿತರ ಪರವಾಗಿ ಮಾತನಾಡಿ, ಸಾಧಕರನ್ನು ಗುರುತಿಸಿ, ಸಮಾಜವನ್ನು ಐಕ್ಯ ಬಾಂಧವ್ಯದಿಂದ ಒಗ್ಗೂಡಿಸಲು ಪ್ರಯತ್ನಿಸಿದುದು ಸ್ತುತ್ಯಾರ್ಹ ಎಂದರು.
ಶಾಲಿನಿ ನಾಯ್ಕ ಅವರು ಮಾತನಾಡಿ, ಮಕ್ಕಳಲ್ಲಿ ಶಿಸ್ತು, ಸಂಯಮ, ಪ್ರಾಮಾಣಿಕತೆ, ಮಾನವೀಯತೆ ಬೆಳೆಸಿ. ಆರೋಗ್ಯಕ್ಕೆ ಯೋಗ, ಧ್ಯಾನ ಕಲಿಸಿ ಎಂದು ಕೇಳಿಕೊಂಡರು. ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮೈತ್ರಿ, ಆಶಿತ್, ಅಪರ್ಣಾ ಹಾಗೂ ಪಿಯು ನಲ್ಲಿ ಅತಿ ಹೆಚ್ಚು ಅಂಕ ಪಡೆದ ನಿರಂಜನ, ಜೀವನ್, ಭಾಗ್ಯಶ್ರೀ, ಸುಕನ್ಯ ಅವರನ್ನು ಮತ್ತು ಅಂಗನವಾಡಿ, ಆಶಾ ಕಾರ್ಯಕರ್ತೆಯರನ್ನು ಗೌರವಿಸಲಾಯಿತು.
ವಿದ್ಯಾರ್ಥಿಗಳಿಗೆ ಪುಸ್ತಕ ಸಾಮಗ್ರಿಗಳನ್ನು ವಿತರಿಸಲಾಯಿತು.
ಜಿಲ್ಲಾ ಅಧ್ಯಕ್ಷ ಸುಂದರ ನಾಯ್ಕ, ಸುರೇಶ್ ನಾಯ್ಕ, ಪ್ರಭಾಮಣಿ, ಸುಜಾತಾ ಹಾಜರಿದ್ದರು.
ರಾಮಚಂದ್ರ ಕೆಂಬಾರೆ ಸ್ವಾಗತಿಸಿದರು. ಚಂದ್ರಯ್ಯ, ಶುಭಾ ಅಭಿನಂದನಾ ಪತ್ರ ವಾಚಿಸಿದರು. ಪ್ರಕಾಶ್ ನಾಯ್ಕ್ ಕಾರ್ಯಕ್ರಮ ನಿರ್ವಹಿಸಿದರು. ಶೀನ ನಾಯ್ಕ ವಂದಿಸಿದರು.

