ಮೂಡುಬಿದಿರೆ ಸಮಾಜ ಮಂದಿರದಲ್ಲಿ ದಸರಾ ಸಾಹಿತ್ಯ-ಸಾಂಸ್ಕೃತಿಕ ಉತ್ಸವ ಸಂಪನ್ನ
ಮೂಡುಬಿದಿರೆ: ನಾವು ಬೆಳೆಯಬೇಕಾದರೆ ಶಿಕ್ಷಕರು ಮುಖ್ಯ ದೇಶ ಬೆಳೆಯಬೇಕಾದರೆ ಉನ್ನತ ಶಿಕ್ಷಣ ಅಗತ್ಯವಾಗಿ ಬೇಕು. ಶಾಲಾ ಶಿಕ್ಷಣದಲ್ಲಿ ಕ್ರಾಂತಿಕಾರಿ ಪರಿವರ್ತನೆ, ಸಂಶೋಧನೆಗೆ ಆದ್ಯತೆ, ರಾಷ್ಟ್ರೀಯತೆಯ ಮನೋಭಾವ ಇಂದು ಅಗತ್ಯವಾಗಿದೆ. ಕೌಶಲ ಮಾತ್ರವಲ್ಲ ಸಾಮಾಜಿಕ ಕೌಶಲಗಳಿಲ್ಲದ ಶಿಕ್ಷಣ ಅರ್ಥಹೀನ. ಅದರಿಂದ ಯಾವುದೇ ಲಾಭವಿಲ್ಲ. ಉನ್ನತ ಶಿಕ್ಷಣದಲ್ಲಿ ಕಲಾ ವಿಭಾಗ ನಿರ್ಲಕ್ಷಿತವಾಗಿದೆ. ಆದರೆ ಅದರ ಪಠ್ಯಕ್ರಮವನ್ನು ಸಂಪೂರ್ಣವಾಗಿ ಸಕಾಲಿಕವಾಗಿ ಬದಲಾಯಿಸಿದಾಗ ಇಲ್ಲಿಯೂ ಉದ್ಯೋಗಾವಕಾಶಗಳನ್ನು ಕಾಣಲು ಸಾಧ್ಯವಿದೆ. ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.
ಅವರು ಶುಕ್ರವಾರ ಸಂಜೆ ಸಮಾಜ ಮಂದಿರ ಸಭಾ ವತಿಯಿಂದ ಸಮಾಜ ಮಂದಿರದಲ್ಲಿ ಜರಗಿದ ಐದು ದಿನಗಳ 78ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವವದ ಸಮಾರೋಪ ಸಮಾರಂಭದಲ್ಲಿ ಉನ್ನತ ಶಿಕ್ಷಣದ ಸವಾಲುಗಳ ಕುರಿತು ಮಾತನಾಡಿದರು.
ಹಿರಿಯ ಲೆಕ್ಕ ಪರಿಶೋಧಕ ರಘುಪತಿ ಎಸ್. ಭಟ್ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಮಂದಿರ ಸಭಾದ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಉಪಸ್ಥಿತರಿದ್ದರು.
ಸಮಾಜ ಮಂದಿರ ಪುರಸ್ಕಾರ:
ವಿವಿಧ ರಂಗಗಳಲ್ಲಿ ಸಾಧನೆಗೈದ ರಾಜೇಶ್ ಆರ್.ಶ್ಯಾನುಭಾಗ್ (ಛಾಯಾಗ್ರಹಣ) ತಿಲಕ್ ಕುಲಾಲ್ (ಚಿತ್ರಕಲೆ) ಹೆರಾಲ್ಡ್ ತಾವ್ರೋ (ಸಂಗೀತ) ಅಶ್ರಫ್ ವಾಲ್ಪಾಡಿ (ಮಾಧ್ಯಮ) ಪ್ರಕಾಶ್ ಅಮೀನ್ (ಯೋಗ, ಸಂಸ್ಕೃತಿ) ರಾಜೇಶ್ ಪೂಜಾರಿ (ಕಲಾರಂಗ)ದ ಸಾಧಕರನ್ನು ಸಮಾಜ ಮಂದಿರ ಗೌರವ 2025 ಮೂಲಕ ಗೌರವಿಸಲಾಯಿತು.ಜತೆಕಾರ್ಯದರ್ಶಿ, ದಸರಾ ಉತ್ಸವ ಸಂಚಾಲಕ ಗಣೇಶ್ ಕಾಮತ್ ಕಾರ್ಯಕ್ರಮ ನಿರೂಪಿಸಿ ಸಮ್ಮಾನಿತರ ವಿವರ ನೀಡಿದರು. ಆಡಳಿತ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.