ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪೇಜಾವರ ಶ್ರೀ
Thursday, September 11, 2025
ಉಜಿರೆ: ಎರಡು ತಿಂಗಳ ಚಾತುರ್ಮಾಸ್ಯ ವೃತಾಚರಣೆ ಪೂರೈಸಿದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳವರು ಅಯೋಧ್ಯೆ ಹಾಗು ಚೆನ್ನೈ ಸಂಚಾರ ಮುಗಿಸಿ ಸೆ.11 ರಂದು ಅಪರಾಹ್ನ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದಾಗ ಅವರನ್ನು ಕ್ಷೇತ್ರದ ಆನೆಗಳು ಹಾಗೂ ಸಕಲ ಬಿರುದಾವಳಿಗಳೊಂದಿಗೆ ಭವ್ಯವಾಗಿ ಸ್ವಾಗತಿಸಲಾಯಿತು. ಕ್ಷೇತ್ರದ ವತಿಯಿಂದ ಹರ್ಷೇಂದ್ರ ಕುಮಾರ್ ಮಾಲಾರ್ಪಣೆಗೈದು ಬರಮಾಡಿಕೊಂಡರು.
ಶ್ರೀಗಳವರು ಶ್ರೀ ಮಂಜುನಾಥಸ್ವಾಮಿ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಹೆಗ್ಗಡೆಯವರ ಬೀಡಿನಲ್ಲಿ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಕ್ಷೇತ್ರದ ವತಿಯಿಂದ ಮಣೆಗಾರ್ ವಸಂತ ಮಂಜಿತ್ತಾಯ ಅವರ ನೇತೃತ್ವದಲ್ಲಿ ಶ್ರೀಗಳವರಿಗೆ ಪಾದಪೂಜೆ, ಮಾಲಿಕೆ ಮಂಗಳಾರತಿ ಬೆಳಗಲಾಯಿತು. ಶ್ರೀಗಳವರು ಹೆಗ್ಗಡೆ ಯವರಿಗೆ ಶಾಲು ಹೊದಿಸಿ, ಫಲಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು.
ಹೇಮಾವತಿ ಹೆಗ್ಗಡೆ ಹಾಗೂ ಹರ್ಷೇಂದ್ರ ಕುಮಾರ್ ಅವರನ್ನು ಗೌರವಿಸಿದರು. ಬಳಿಕ ಶ್ರೀಗಳವರು ಶ್ರೀ ಸಾನ್ನಿಧ್ಯ ನೂತನ ಸರತಿ ಸಂಕೀರ್ಣವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ವೀರು ಶೆಟ್ಟಿ, ಸೀತಾರಾಮ ತೋಳ್ಪಡಿತ್ತಾಯ, ರಾಮಕೃಷ್ಣ ಕಲ್ಲೂರಾಯ, ವಸಂತ ಮಂಜಿತ್ತಾಯ, ಪಾರುಪತ್ಯೇಗಾರ ಲಕ್ಷ್ಮೀನಾರಾಯಣ ರಾವ್, ಶ್ರೀನಿವಾಸ ರಾವ್, ಪ್ರದೀಪಕುಮಾರ್ ಕಲ್ಕೂರ, ಜನಾರ್ದನ ಹಂದೆ, ಎಂ.ಪಿ. ಶ್ರೀನಾಥ್, ರಾಘವೇಂದ್ರ ಭಟ್ ಮದ್ದಡ್ಕ ಮತ್ತು ಕ್ಷೇತ್ರದ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.