ಯುವಕನನ್ನು ಅಪಹರಿಸಿ ಹಲ್ಲೆ
ಕುಂದಾಪುರ: ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪ ಯುವಕನೋರ್ವನನ್ನು ಕಾರಿನಲ್ಲಿ ಅಪಹರಿಸಿ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಹಲ್ಲೆಗೊಳಗಾದ ಯುವಕ ಬ್ರಹ್ಮಾವರ ತಾಲೂಕಿನ ಹಂದಾಡಿ ಗ್ರಾಮದ ನಿತಿನ್ (26) ಎಂದು ತಿಳಿದು ಬಂದಿದೆ.
ಹಲ್ಲೆ ನಡೆಸಿದ ಆರೋಪಿಗಳು ಸಂಪತ್, ಅಭಿಷೇಕ್ ಪಾಲನ್, ರಕ್ಷತ್, ಸನತ್ ಮತ್ತು ಚೇತನ್ ಎಂದು ಗುರುತಿಸಲಾಗಿದ್ದು, ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣ ವಿವರ:
ಅ.29 ರಂದು ರಾತ್ರಿ 9:15ರ ಸುಮಾರಿಗೆ ನಿತಿನ್ ಅವರು ಬಾರ್ಕೂರಿನಲ್ಲಿ ಇರುವ ವೇಳೆ ಆರೋಪಿ ಸಂಪತ್ ಎಂಬಾತನು ಕರೆ ಮಾಡಿ ಎಲ್ಲಿದ್ದೀಯ ಎಂದು ಕೇಳಿದ. ಸ್ವಲ್ಪ ಸಮಯದ ಬಳಿಕ ಅಲ್ಲಿಗೆ ಸಂಪತ್, ಅಭಿಷೇಕ್ ಪಾಲನ್, ರಕ್ಷತ್, ಸನತ್ ಮತ್ತು ಚೇತನ್ ರವರುಗಳು ಬೈಕಿನಲ್ಲಿ ಮತ್ತು ಕಾರಿನಲ್ಲಿ ಬಂದು, ಅವರೆಲ್ಲರೂ ಸೇರಿ ನಿತಿನ್ ಅವರನ್ನು ಕಾರಿನಲ್ಲಿ ಎಳೆದು ಕೂರಿಸಿಕೊಂಡು ಬ್ರಹ್ಮಾವರ ತಾಲೂಕು 52ನೇ ಹೇರೂರು ಗ್ರಾಮದ ಕೆ.ಇ.ಬಿ. ಬಳಿ ಇರುವ ಗ್ರೌಂಡ್ ಗೆ ಕರೆದುಕೊಂಡು ಹೋದರು. ಅಲ್ಲಿ ನಿತಿನ್ ಅವರನ್ನು
ಕಾರಿನಿಂದ ಕೆಳಗಿಳಿಸಿದ್ದು, ಎಲ್ಲರೂ ಅವರನ್ನು ಸುತ್ತುವರಿದು ನಿಂತು, ಬಳಿಕ ಆರೋಪಿತ ಅಭೀಷೇಕ್ ಪಾಲನ್ ಎಂಬಾತನು ಕೈಯಿಂದ
ನಿತಿನ್ಗೆ ಎಡ ಕೆನ್ನೆಗೆ ಹೊಡೆದು ಬಳಿಕ ಅವಾಚ್ಯವಾಗಿ ಬೈದು ಕಾರಿನಿಂದ ರಾಡ್ ತೆಗೆದು ನಿತಿನ್ಗೆ ಬೀಸಿದಾಗ, ಅದನ್ನು ಕೈಯಿಂದ ಹಿಡಿದಿದ್ದು, ಈ ವೇಳೆ ರಾಡ್ ನಿತಿನ್ ಅವರ ಕಿವಿಯ ಬಳಿ ತಾಗಿರುತ್ತದೆ.
ಬಳಿಕ ಉಳಿದವರು ನಿತಿನ್ ನನ್ನು ಹಿಂದಿನಿಂದ ದೂಡಿ ಕೈಯಿಂದ ಹೊಡೆದಿರುತ್ತಾರೆ. ಈ ಘಟನೆ ನಡೆಯುವಾಗ ಚೇತನ್ ಮತ್ತು ಆಕಾಶ್ ಎಂಬುವವರು ಸ್ಥಳದಲ್ಲಿ ಇದ್ದಿರುತ್ತಾರೆ.
ಈ ವೇಳೆ ನಿತಿನ್ ಬೊಬ್ಬೆ ಹೊಡೆಯುವುದನ್ನು ಕೇಳಿ ಜನರು ಅಲ್ಲಿಗೆ ಬರುವುದನ್ನು ಕಂಡ ಆರೋಪಿತರು ನಿತಿನ್ ನ್ನು ಪುನಃ ಕಾರಿನಲ್ಲಿ ತುಂಬಿಕೊಂಡು ನಂತರ ಸಂಪತ್ ಮತ್ತು ಪಾಲನ್ ರವರು ಕಾರಿನಲ್ಲಿ ಹೊಟ್ಟೆಗೆ ಮತ್ತು ಕುತ್ತಿಗೆಗೆ ಹೊಡೆದ ಪರಿಣಾಮ ನಿತೀನ್ ಪ್ರಜ್ಞೆ ಕಳೆದುಕೊಂಡಿದ್ದು, ಅವರನ್ನು ಬಾರ್ಕೂರು ಬ್ರಿಡ್ಜ್ ಬಳಿ ಬಿಟ್ಟು ಹೋಗಿದ್ದರು. ಮಧ್ಯರಾತ್ರಿ ವೇಳೆಗೆ ನಿತಿನ್ ಎಚ್ಚರಗೊಂಡು ಮನೆಗೆ ಹೋದರು ಎನ್ನಲಾಗಿದೆ. ಈ ಬಗ್ಗೆ ಸಲ್ಲಿಸಲಾದ ದೂರಿನಾಧಾರದಲ್ಲಿ ಬ್ರಹ್ಮಾವರ ಪೊಲೀಸರು ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿದ್ದಾರೆ. ಈ ಘಟನೆಗೆ ಕಾರಣವೇನು ಎಂಬುದು ತನಿಖೆಯ ನಂತರವಷ್ಟೇ ತಿಳಿಯಬೇಕಿದೆ.