ಕೋಡಿಬೆಂಗ್ರೆ ಬಾರ್ಜ್ ಸೇವೆಗೆ ಚಾಲನೆ
Wednesday, October 8, 2025
ಕುಂದಾಪುರ: ಕರಾವಳಿ ಭಾಗದಲ್ಲಿ ಮೀನುಗಾರರಿಗೆ ಹಲವಾರು ಸಮಸ್ಯೆಗಳಿವೆ. ಈ ಬಗ್ಗೆ ಕೇಂದ್ರ ಸರ್ಕಾರದ ಸ್ಪಂದನೆ ಸಮರ್ಪಕವಾಗಿಲ್ಲ. ಸರಿಯಾದ ಅನುದಾನ ಸಹಕಾರ ಸಿಗದೆ ಅಭಿವೃದ್ಧಿಗೆ ತೊಡಕಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಹೆಚ್ಷಿನ ಅನುದಾನದ ಮೂಲಕ ಮೀನುಗಾರರ ಸಮಸ್ಯೆ ಪರಿಹಾರಕ್ಕೆ ಒತ್ತು ನೀಡಲಾಗುವುದು. ಮೀನುಗರರ ಎಲ್ಲ ಸಮಸ್ಯೆಗಳ ನಿವಾರಣೆಗೆ ಸರ್ಕಾರ ಸದಾ ಬದ್ಧವಾಗಿದೆ ಎಂದು ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಹೇಳಿದರು.
ಅವರು ಬುಧವಾರ ಬ್ರಹ್ಮಾವರ ತಾಲೂಕು ಕೋಡಿಬೆಂಗ್ರೆ-ಹಂಗಾರಕಟ್ಟೆ ನಡುವಿನ ಹೊಸ ಬಾರ್ಜ್ ಸೇವೆಗೆ ಚಾಲನೆ ನೀಡಿ ಮಾತನಾಡಿದರು.
ಹಂಗಾರಕಟ್ಟೆ-ಕೋಡಿಬೆಂಗ್ರೆ ನಡುವೆ ಸೇತುವೆ ಪ್ರಸ್ತಾಪವಿದ್ದು ಈ ಬಗ್ಗೆ ಕೂಡ ಪೂರಕ ಕ್ರಮಕೈಗೊಳ್ಳಲಾಗುವುದು. ಮೀನುಗಾರರ ಯಾವುದೇ ಸಮಸ್ಯೆಗಳಿದ್ದರು ಇಲ್ಲಿನ ಸ್ಥಳೀಯ ನಾಯಕ ನೇತೃತ್ವದಲ್ಲಿ ಅದನ್ನು ಬಗೆಹರಿಸಲಾಗುವುದು ಎಂದವರು ಭರವಸೆ ನೀಡಿದರು.
ಈ ಸಂದರ್ಭ ಮೀನುಗಾರರ ವಿವಿಧ ಬೇಡಿಕೆಗಳ ಕುರಿತು ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಕಾಂಗ್ರೆಸ್ ಪ್ರಮುಖರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಗ್ರಾ.ಪಂ. ಉಪಾಧ್ಯಕ್ಷ ಪ್ರಸಾದ್, ಮೀನುಗಾರ ಸಂಘದ ಪ್ರಮುಖರು, ಪಕ್ಷದ ಗಣ್ಯರು ಉಪಸ್ಥಿತರಿದ್ದರು.