ಕನಿಷ್ಠ ಕೂಲಿ ಜಾರಿಗೊಳಿಸದ ಸರಕಾರದ ವಿರುದ್ಧ ಹೋರಾಟ

ಕನಿಷ್ಠ ಕೂಲಿ ಜಾರಿಗೊಳಿಸದ ಸರಕಾರದ ವಿರುದ್ಧ ಹೋರಾಟ


ಮಂಗಳೂರು: ಕನಿಷ್ಠ ಕೂಲಿಯನ್ನು ಜಾರಿಗೊಳಿಸದ ಬೀಡಿ ಮಾಲಕರ ಮತ್ತು ಸರಕಾರದ ವಿರುದ್ಧ ತೀವ್ರ ಹೋರಾಟ ನಡೆಸಬೇಕೆಂದು ಸಿಐಟಿಯು ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಬಿ.ಎಂ.ಭಟ್ ಕರೆ ನೀಡಿದ್ದಾರೆ.

ಮಂಗಳೂರು ಗಣೇಶ್ಬೀಡಿ ಡಿಪೋದ ಮುಂದೆ ಬೀಡಿ ಕಾರ್ಮಿಕರ ಹಕ್ಕೊತ್ತಾಯ ಚಳವಳಿಯನ್ನುದ್ದೇಶಿಸಿ ಮಾತನಾಡಿದರು. 

2018 ರಿಂದ 2024ರ ಬಾಕಿ ಇರುವ ಕನಿಷ್ಠ ಕೂಲಿ ಮೊತ್ತ ಹಾಗೂ 2024 ಎಪ್ರಿಲ್ 1ರಿಂದ ನೀಡಬೇಕಾದ ಕನಿಷ್ಠ ಕೂಲಿಯನ್ನು ಬೀಡಿ ಕಾರ್ಮಿಕರಿಗೆ ವಿತರಿಸದೇ ಮೋಸ ಮಾಡುತ್ತಿರುವ ಬೀಡಿ ಮಾಲಿಕರ ನೀತಿ ಖಂಡನೀಯ ಎಂದರು. 

ಬೀಡಿ ಮಾಲೀಕರಿಗೆ ಪೂರಕವಾಗಿ ಅತ್ಯಂತ ಕನಿಷ್ಠ ಕೂಲಿಯನ್ನು ನಿಗದಿ ಮಾಡಿರುವ ರಾಜ್ಯ ಸರಕಾರ ಅದನ್ನು ಜಾರಿಗೊಳಿಸದೆ ಜನಪರ ಸರಕಾರವೆಂದು ಹೇಳುತ್ತಿರುವುದು ಅಸಹ್ಯವಾಗಿ ಕಾಣುತ್ತಿದೆ ಎಂದು ಅವರು ಸರಕಾರವನ್ನು ಟೀಕಿಸಿದರು. 

ಎಐಟಿಯುಸಿಯ ದ.ಕ.ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಬಿ.ಸುರೇಶ್ ಅವರು ಮಾತನಾಡಿ ಬೀಡಿ ಕಾರ್ಮಿಕರ ತಾಳ್ಮೆಗೂ ಮಿತಿ ಇರಲಿ. ಕನಿಷ್ಠ ಮಜೂರಿಯನ್ನೇ ನೀಡದ ಬೀಡಿ ಮಾಲೀಕರು ಏನು ಸಾಧನೆ ಮಾಡಲು ಹೊರಟಿದ್ದಾರೆ. ಬೀಡಿ ಮಾಲಿಕರಾಗಲೀ, ಸರಕಾರವಾಗಲೀ ಹೋರಾಟ ಮಾಡದೇ ಯಾವುದೇ ಸವಲತ್ತನ್ನೂ ನೀಡಿಲ್ಲ. ಆದುದರಿಂದ ನಮ್ಮ ಹೋರಾಟವನ್ನು ತೀವ್ರಗೊಳಿಸಬೇಕೆಂದು ಹೇಳಿದರು.

ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್ (ಸಿಐಟಿಯು) ಇದರ ಅಧ್ಯಕ್ಷ ವಸಂತ ಆಚಾರಿ ಅವರು ದ.ಕ.ಜಿಲ್ಲಾ ಬೀಡಿ ವರ್ಕರ್ಸ್ ಫೆಡರೇಶನ್ (ಎಐಟಿಯುಸಿ) ಇದರ ಅಧ್ಯಕ್ಷ ಸೀತಾರಾಮ ಬೇರಿಂಜೆಯವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು.

ಸಮಾರೋಪ ಭಾಷಣ ಮಾಡುತ್ತಾ ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್ (ಸಿಐಟಿಯು) ಇದರ ಪ್ರಧಾನ ಕಾರ್ಯದರ್ಶಿ ಜೆ.ಬಾಲಕೃಷ್ಣ ಶೆಟ್ಟಿ ಅವರು ಕಾನೂನುಬದ್ಧ ಸವಲತ್ತನ್ನು ಪಡೆಯಲು ಅ.7ರಿಂದ ರಿಂದ 16ರ ತನಕ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಅಪಾರ ಸಂಖ್ಯೆಯ ಬೀಡಿ ಕಾರ್ಮಿಕರು ಅನಿರ್ದಿಷ್ಟಾವಧಿ ಹೋರಾಟ ನಡೆಸಿದ್ದಾರೆ. ಬೀಡಿ ಮಾಲೀಕರು ಮತ್ತು ರಾಜ್ಯ ಸರಕಾರಕ್ಕೆ ಮನವಿ ನೀಡಲಾಗಿದೆ. ಆದರೆ ಈವರೆಗೂ ಕನಿಷ್ಠ ಕೂಲಿಯನ್ನು ರಾಜ್ಯ ಸರಕಾರಕ್ಕೆ ವಿತರಿಸಲು ಸಾಧ್ಯವಾಗಿಲ್ಲ. ಇದು ಬಡವರ ಪರವಾಗಿರುವ ಸರಕಾರ ಎನ್ನಲು ನೈತಿಕತೆ ಇದೆಯೇ ಎಂದು ಅವರು ಪ್ರಶ್ನಿಸಿದರು. 

ಸಿಐಟಿಯು ಸಂಘಟನೆಯ ಜಯಂತಿ ಬಿ.ಶೆಟ್ಟಿ, ಜಯಲಕ್ಷ್ಮೀ, ಪದ್ಮಾವತಿ ಅಡ್ಯಾರ್ಪದವು, ವನಿತ ಶಿವನಗರ, ಜಯಲಕ್ಷ್ಮೀ ಜಪ್ಪಿನಮೊಗರು, ಗೀತಾ ಜಲ್ಲಿಗುಡ್ಡೆ, ಸದಶಿವ ದಾಸ್, ವಸಂತಿ, ನೋಣಯ್ಯ ಗೌಡ, ಲೋಲಾಕ್ಷಿ, ಹೊನ್ನಯ್ಯ, ಎಐಟಿಯುಸಿಯ ಶೇಖರ್ ಬಿ, ವಾಸುದೇವ ಕುಕ್ಯಾನ್ ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article