ಮೂರನೇ ವರ್ಷದ ‘ಯಕ್ಷ ಸಿರಿ’ ಯಕ್ಷಗಾನ ತರಬೇತಿ
ಗೋವಿಂದದಾಸ ಕಾಲೇಜು ಸುರತ್ಕಲ್ ಇದರ ಆಡಳಿತಾತ್ಮಕ ನಿರ್ದೇಶಕ ರಮೇಶ್ ಭಟ್ ಎಸ್.ಜಿ. ಅವರು ಉದ್ಘಾಟಿಸಿ ಮಾತನಾಡಿ, ನಾನು ಸುರತ್ಕಲ್ ಬಂಟರ ಸಂಘವನ್ನು ಹತ್ತಿರದಿಂದ ಗಮನಿಸುತ್ತ ಬಂದವನು. ಪ್ರತೀ ಸ್ಪರ್ಧೆಯಲ್ಲೂ ಸುರತ್ಕಲ್ ಬಂಟರ ಸಂಘ ಪ್ರಶಸ್ತಿ ಪಡೆದುಕೊಂಡೇ ಬಂದಿದೆ. ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಸಂಘ ಸದಾ ಮುಂದಿದೆ. ಬಹುಷಃ ಇದೇ ಕಾರಣಕ್ಕೆ ರಾಜ್ಯೋತ್ಸವ ಪ್ರಶಸ್ತಿಗೂ ಸಂಘ ಭಾಜನವಾಗಿದೆ ಎಂದು ಹೇಳಿದರು.
ಯಕ್ಷಗಾನ ಅನ್ನುವುದು ಶ್ರೇಷ್ಠವಾದ ಕಲೆ. ಯಕ್ಷಗಾನ ಕಲಾವಿದನಿಗೆ ಭಾಷಾ ಶುದ್ಧಿ ಮತ್ತು ಸಂವಹನಾ ಸಾಮರ್ಥ್ಯವಿದೆ. ಪುರಾಣದ ಜ್ಞಾನ ಸಂಪಾದನೆಗೆ ಯಕ್ಷಗಾನ ಕಲೆ ಪೂರಕ. ಪುರಾಣ ಪುರುಷರ ಆದರ್ಶ ಚರಿತ್ರೆ ಮಕ್ಕಳಿಗೆ ತಿಳಿಯುತ್ತದೆ. ಹೀಗಾಗಿ ಇಂದಿನ ಮಕ್ಕಳಿಗೆ ಇದರ ತರಬೇತಿ ಅವಶ್ಯ. ಮಕ್ಕಳ ವ್ಯಕ್ತಿತ್ವದ ಸಕಾರಾತ್ಮಕ ಬೆಳವಣಿಗೆಗೆ ಇದು ಸಹಕಾರಿ. ಇಷ್ಟು ಮಾತ್ರವಲ್ಲದೆ ಕಲೆಯಲ್ಲಿ ಮುಂದಿರುವ ಮಕ್ಕಳು ಕಲಿಕೆಯಲ್ಲೂ ಮುಂದಿದ್ದಾರೆ ಎನ್ನುವುದನ್ನು ಸಾಧಿಸಿ ತೋರಿಸಲು ಯಕ್ಷಸಿರಿಯ ಮಕ್ಕಳ ಶೈಕ್ಷಣಿಕ ಸಾಧನೆಗಾಗಿ ಅಭಿನಂದಿನಾ ಕಾರ್ಯಕ್ರಮ ಹಮ್ಮಿಕೊಂಡಿರುವ ಸಂಘಕ್ಕೆ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದರು.
ಬಂಟರ ಸಂಘ ಸುರತ್ಕಲ್ ಇದರ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಕ್ಷಗಾನ ತುಳುನಾಡಿನ ಹೆಸರಾಂತ ಕಲೆಯಾಗಿದ್ದು ಮಕ್ಕಳಿಗೆ ಕಲೆಯ ಮೇಲೆ ಆಸಕ್ತಿ ಬೆಳೆಯಲು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಕ್ಕಳು ಯಕ್ಷಗಾನದ ಜೊತೆಗೆ ಶೈಕ್ಷಣಿಕ ಕ್ರೀಡಾ ಚಟುವಟಿಕೆಗಳಲ್ಲೂ ಮುಂದಿರುವುದು ಖುಷಿಯ ವಿಚಾರ ಎಂದರು.
ಮುಖ್ಯ ಅತಿಥಿಗಳಾಗಿ ಉದ್ಯಮಿ ಸತೀಶ್ ಮುಂಚೂರು, ದ.ಕ ಜಿಲ್ಲಾ ಬಿ.ಜೆ.ಪಿ ವಕ್ತಾರ ರಾಜ್ ಗೋಪಾಲ್ ರೈ, ಹೋಟೆಲ್ ಉದ್ಯಮಿ ಚಂದ್ರಹಾಸ ಶೆಟ್ಟಿ ಕಂಫಟ್೯, ದೀಪಕ್ ಶೆಟ್ಟಿ ಲಿಂಗಮಾರುಗುತ್ತು, ಮಮತ ಪ್ರೇಮ್ ನಾಥ್ ಹೆಗ್ಡೆ, ಸೀಮಾ ಶೆಟ್ಟಿ ಸುಭಾಷಿತನಗರ, ಸಹನಾ ರಾಜೇಶ್ ರೈ, ಯಕ್ಷ ಗುರು ರಾಕೇಶ್ ರೈ ಅಡ್ಕ, ಸಂಘದ ಮಾಜಿ ಅಧ್ಯಕ್ಷ ಸುಧಾಕರ್ ಎಸ್.ಪೂಂಜಾ, ಸಂಘದ ಉಪಾಧ್ಯಕ್ಷ ಪ್ರವೀಣ್ ಪಿ. ಶೆಟ್ಟಿ, ಕೋಶಾಧಿಕಾರಿ ರತ್ನಾಕರ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಸಾಂಸ್ಕೃತಿಕ ಕಾರ್ಯದರ್ಶಿ ದೇವೇಂದ್ರ ಶೆಟ್ಟಿ, ಕ್ರೀಡಾ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ಮಧ್ಯ, ಮಹಿಳಾ ವೇದಿಕೆಯ ಅಧ್ಯೆಕ್ಷೆ ಸರೋಜ ತಾರಾನಾಥ್ ಶೆಟ್ಟಿ ಉಪಸ್ಥಿತರಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಲೀಲಾಧರ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಕವಿತಾ ಪುಷ್ಪರಾಜ್ ಶೆಟ್ಟಿ ವಂದಿಸಿ, ಡಾ. ಸುಧಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.