ಆಳ್ವಾಸ್ ನಲ್ಲಿ ಮಹಿಳಾ ಆರೋಗ್ಯದ ರಾಷ್ಟ್ರೀಯ ಸಮಾವೇಶ
Thursday, November 27, 2025
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮಹಿಳಾವೇದಿಕೆ ಸಕ್ಷಮ ಹಾಗೂ ಐಎಪಿಇಎನ್ ಸಂಸ್ಥೆಯ ಮಂಗಳೂರು ಘಟಕದ ಸಹಯೋಗದಲ್ಲಿ ಗುರುವಾರ ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಮಹಿಳಾ ಆರೋಗ್ಯದ ಕುರಿತು ಒಂದು ದಿನದ ರಾಷ್ಟೀಯ ಸಮಾವೇಶ ನಡೆಯಿತು.
ಬೆಂಗಳೂರಿನ ಕ್ಷೇಮವನ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ಶ್ರದ್ಧಾ ಅಮಿತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ ಮಹಿಳೆ ಇಂದು ಶಿಕ್ಷಣದಲ್ಲಿ ಮೇಲುಗೈ ಸಾಧಿಸಿದ್ದರೂ, ಜಾಗತಿಕ ಮಟ್ಟದಲ್ಲಿ ಕೇವಲ ಶೇ.15ರಷ್ಟು ಉನ್ನತ ಕಂಪೆನಿಗಳ ಪ್ರಮುಖ ನಿರ್ವಹಣಾ ಸ್ಥಾನದಲ್ಲಿದ್ದಾರೆ. ಮಹಿಳೆಯರಿಂದ ಮುನ್ನಡೆಸುವ ಸಂಸ್ಥೆಗಳು ಹೆಚ್ಚಿನ ಉತ್ಪಾದಕತೆ ಮತ್ತು ಕಾರ್ಯಕ್ಷಮತೆ ತೋರುತ್ತಿದ್ದರೂ, ಮಹಿಳೆಯರ ನಾಯಕತ್ವ ಪ್ರತಿನಿಧಿತ್ವದಲ್ಲಿ ಗಣನೀಯ ಏರಿಕೆ ಕಂಡು ಬಂದಿಲ್ಲ. ಮುಟ್ಟಿನ ರಜಾ ನೀತಿ ಪ್ರಗತಿಶೀಲವಾದರೂ, ಕಾರ್ಯಕ್ಷಮತೆಯ ಕೊರತೆ ಎಂಬ ಭಾವನೆಯನ್ನು ಮೂಡಿಸಬಹುದು ಎಂದರು.
ಸ್ತ್ರೀರೋಗ ತಜ್ಞೆ ಡಾ. ಅಖಿಲಾ ವಾಸುದೇವನ್ ಮಾತನಾಡಿ, ಪ್ರೌಢಾವಸ್ಥೆಯಲ್ಲಿ ಹೆಣ್ಣುಮಕ್ಕಳ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆ ಕಂಡುಬರುತ್ತದೆ. ಈ ಸಮಯದಲ್ಲಿ ಪಾಲಕರ ಮಾರ್ಗದರ್ಶನ ಅತೀ ಅಗತ್ಯ. ಆರೋಗ್ಯವನ್ನು ಕಾಪಾಡಿಕೊಳ್ಳಲು ವ್ಯಾಯಾಮ ಮತ್ತು ಸರಿಯಾದ ಆಹಾರ ಪದ್ಧತಿಗಳನ್ನು ಪಾಲಿಸುವುದು ಅಗತ್ಯ ಎಂದು ಸಲಹೆ ನೀಡಿದರು.
ಪೌಷ್ಟಿಕಾಂಶ ತಜ್ಞೆ ಡಾ.ಶಿಲ್ಪಾ ವರ್ಮಾ, ಶಿಕ್ಷಣ ತಜ್ಞೆ ಡಾ.ಮಂಜುಳಾ ಎಂ.ವೈ., ಯೋಗ ತಜ್ಞೆ ಕವಿತಾ ವೆಂಕಟಾಚಲಂ ವಿ., ಬೆಂಗಳೂರು ಮೂಲದ ವೆಲ್ನೆಸ್ ಎಜುಕೇಟರ್ ಸ್ಮಿತಾ ವರ್ಷಾ ಎಂ.ಯು ಸಂಪನ್ಮೂಲ ವ್ಯಕ್ತಿಯಾಗಿದ್ದರು.
ಆಳ್ವಾ ಫಾರ್ಮಸಿಯ ಆಡಳಿತಾಧಿಕಾರಿ ಡಾ.ಗ್ರೀಷ್ಮ ವಿವೇಕ್ ಆಳ್ವ, ಮಹಿಳೆಯರು ತಮ್ಮ ಆರೋಗ್ಯದ ಕುರಿತು ಸದಾ ಗಮನ ಹರಿಸಬೇಕು. ಒಂದು ಕುಟುಂಬದಲ್ಲಿ ತಾಯಿ ಆರೋಗ್ಯವಂತಳಾಗಿದ್ದರೆ ಅವರ ಸಂಪೂರ್ಣ ಕುಟುಂಬವೂ ಆರೋಗ್ಯಪೂರ್ಣವಾಗಿರಲು ಸಾಧ್ಯ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಸಕ್ಷಮ ವೇದಿಕೆಯ ಅಧ್ಯಕ್ಷೆ ಡಾ.ಅರ್ಚನಾ ಪ್ರಭಾತ್ ಉಪಸ್ಥಿತರಿದ್ದರು.
ಹಿಸಾನತ್ ಮನೋರತ್ ಕಾಯ೯ಕ್ರಮ ನಿರೂಪಿಸಿದರು. ಸಕ್ಷಮದ ಕಾರ್ಯದರ್ಶಿ ಡಾ.ದೀಪಾ ಕೊಠಾರಿ ವಂದಿಸಿದರು.
ಸಮಾವೇಶದಲ್ಲಿ ವಿವಿಧ ಭಾಗಗಳಿಂದ 850ಕ್ಕೂ ಅಧಿಕ ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು, ಉಪನ್ಯಾಸಕರು ಭಾಗವಹಿಸಿದ್ದರು.







