ಕಾಡಾನೆ ಹಾಗೂ ವನ್ಯ ಮೃಗಗಳ ಹಾವಳಿ ತಡೆಗಟ್ಟಲು ಆಗ್ರಹಿಸಿ ಮಂಡೆಕೋಲಿನಲ್ಲಿ ಪ್ರತಿಭಟನೆ

ಕಾಡಾನೆ ಹಾಗೂ ವನ್ಯ ಮೃಗಗಳ ಹಾವಳಿ ತಡೆಗಟ್ಟಲು ಆಗ್ರಹಿಸಿ ಮಂಡೆಕೋಲಿನಲ್ಲಿ ಪ್ರತಿಭಟನೆ


ಸುಳ್ಯ: ಮಂಡೆಕೋಲು ರೈತ ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲಿ ಕಾಡಾನೆ ಹಾಗೂ ವನ್ಯ ಮೃಗಗಳ ಹಾವಳಿ ತಡೆಗಟ್ಟಲು ಆಗ್ರಹಿಸಿ ಮಂಡೆಕೋಲಿನಲ್ಲಿ ಬೃಹತ್ ಪ್ರತಿಭಟನಾ ಸಭೆ ಹಾಗೂ ಧರಣಿ ಸತ್ಯಾಗ್ರಹ ನ.24 ರಂದು ನಡೆಯಿತು. 

ಹಲವಾರು ಮಂದಿ ಕೃಷಿಕರು ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದರು. ಕಳೆದ 15 ವರ್ಷಗಳಿಂದ ಕಾಡಾನೆ ಹಾಗೂ ಇತರ ವನ್ಯ ಮೃಗಗಳ ಹಾವಳಿಯಿಂದ ಮಂಡೆಕೋಲು ಗ್ರಾಮದ ಕೃಷಿಕರು ತತ್ತರಿಸಿ ಹೋಗಿದ್ದಾರೆ. ಆದುದರಿಂದ ಕಾಡಾನೆ ಹಾವಳಿ ತಡೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಆನೆ ಹಾವಳಿ ತಡೆಯಲು ಗ್ರಾಮದ ಅರಣ್ಯದಂಚಿನಲ್ಲಿ ಸರಕಾರದ ವತಿಯಿಂದ ಸೋಲಾರ್ ಬೇಲಿ ನಿರ್ಮಿಸಬೇಕು, ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳ ಕಾರ್ಯಪಡೆ ರಚಿಸಬೇಕು, ಮಂಗಗಳ ಹಾವಳಿ ತಡೆಗೆ ಮಂಕಿ ಪಾರ್ಕ್ ಮಾಡಬೇಕು ಎಂದು ಒತ್ತಾಯಿಸಿದರು.


ರೈತ ಹಿತರಕ್ಷಣಾ ಸಮಿತಿಯ ಪ್ರಮುಖರಾದ ಸುರೇಶ್ ಕಣರಡ್ಕ, ಶಿವಪ್ರಸಾದ್ ಉಗ್ರಾಣಿಮನೆ, ಜಯರಾಜ್ ಕುಕ್ಕೇಟ್ಟಿ, ಅನಂತ ಪದ್ಮನಾಭ ಭಟ್, ಡಿ.ಸಿ. ಬಾಲಚಂದ್ರ, ರಾಮಚಂದ್ರ ಮಾಸ್ತರ್ ಕೇನಾಜೆ, ಗ್ರಾ.ಪಂ. ಉಪಾಧ್ಯಕ್ಷೆ ಪ್ರತಿಮಾ ಹೆಬ್ಬಾರ್, ಗ್ರಾ.ಪಂ. ಮಾಜಿ ಅಧ್ಯಕ್ಷೆ ವಿನುತ ಪಾತಿಕಲ್ಲು, ಮಲೆನಾಡು ಹಿತರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಕುಮಾರ್ ಶಿರಾಡಿ, ಕೃಷಿಕರಾದ ಪಿ.ಬಿ.ಪ್ರಭಾಕರ ರೈ, ಸುದರ್ಶನ ಪಾತಿಕಲ್ಲು ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಪ್ರತಿಭಟನಾ ಸ್ಥಳ ಶಾಸಕಿ ಭಾಗೀರಥಿ ಮುರುಳ್ಯ ಆಗಮಿಸಿ ಮನವಿ ಸ್ವೀಕರಿಸಿ, ಮಾತನಾಡಿದರ ಅವರು, ಕಾಡಾನೆ ಹಾವಳಿ ತಡೆಗೆ ಶಾಶ್ವತ ಕ್ರಮ ಕೈಗೊಳ್ಳಲು ಈಗಾಗಲೇ ಸರಕಾರವನ್ನು ಒತ್ತಾಯಿಸಲಾಗಿದೆ. ಸೋಲಾರ್ ಬೇಲಿ ನಿರ್ಮಾಣಕ್ಕೆ  ಶೇ.100 ಸಹಾಯಧನ ನೀಡಬೇಕು ಸೇರಿ ವಿವಿಧ ಬೇಡಿಕೆಗಳನ್ಬು ಕಳೆದ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಲಾಗಿದೆ.ಮುಂದಿನ ಬೆಳಗಾವಿ ಅಧಿವೇಶನದಲ್ಲಿ ಮತ್ತೊಮ್ಮೆ ಪ್ರಸ್ತಾಪಿಸಲಾಗುವುದು ಎಂದು ಹೇಳಿದರು. ಸೋಲಾರ್ ಬೇಲಿ, ಮಂಕಿ ಪಾರ್ಕ್ ನಿರ್ಮಾಣ ಕುರಿತು ವರದಿ ಸಿದ್ಧಪಡಿಸಿ ಕೊಡುವಂತೆ ಶಾಸಕರು ಅರಣ್ಯಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಸುಳ್ಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಕುಮಾರ್ ಪೈ, ಪುತ್ತೂರು ಎಸಿಎಫ್ ಸುಬ್ಬಯ್ಯ ನಾಯ್ಕ್, ಸುಳ್ಯ ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ಆಗಮಿಸಿ ಮನವಿ ಸ್ವೀಕರಿಸಿದರು. ಪ್ರತಿಭಟನಾಕಾರರು ಮುಂದಿರಿಸಿದ ಬೇಡಿಕೆಯನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಪರಿಹಾರ ಕ್ರಮ ಕೈಗೊಳ್ಳಲಾಗುವುದು. ದ.ಕ. ಜಿಲ್ಲೆಗೆ  ಆನೆ ಕಾರ್ಯಪಡೆ ರಚಿಸಲು ಅನುಮತಿ ಲಭಿಸಿದ್ದು, ಸುಳ್ಯ ಕೇಂದ್ರವಾಗಿ ಕಾರ್ಯಾಚರಿಸಲಿದೆ. ಇದರಿಂದ ಆನೆ ಹಾವಳಿ ತಡೆಯಲು ಪರಿಣಾಮಕಾರಿ ಕ್ರಮಕೈಗೊಳ್ಳಲು ಸಾಧ್ಯ ಎಂದು ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ತಿಳಿಸಿದರು.

ಮಂಡೆಕೋಲು ಗ್ರಾಮ ಪಂಚಾಯತ್ ಅಧ್ಯಕ್ಷ ಕುಶಲ ಉದ್ದಂತಡ್ಕ, ಪ್ರಮುಖರಾದ ಹರೀಶ್ ಕಂಜಿಪಿಲಿ, ಗಣೇಶ್ ಮಾವಂಜಿ, ಶಂಕರ ಪೆರಾಜೆ, ಲಕ್ಷ್ಮಣ ಉಗ್ರಾಣಿಮನೆ, ಕೃಷ್ಣಪ್ರಸಾದ್ ಭಟ್, ಚಂದ್ರಜಿತ್ ಮಾವಂಜಿ, ಶುಭಕರ ಬೊಳುಗಲ್ಲು, ಜನಾರ್ಧನ ಬರೆಮೇಲು, ಡಿ.ವಿ.ಸುರೇಶ್, ಕೆಪಿ.ಜಗದೀಶ್ ಸಂಪಾಜೆ, ವೀಣಾ ದೇವರಗುಂಡ, ನಾಗೇಶ್ ದೇವಗುಂಡ, ಜಲಜಾ ದೇವರಗುಂಡ, ಕೇಶವಮೂರ್ತಿ ಹೆಬ್ಬಾರ್, ಆಶಿಕ್ ದೇವರಗುಂಡ ಮತ್ತಿತರರು ಇದ್ದರು. ಪ್ರತಿಭಟನಾ ಸಭೆಗೆ ಮುನ್ನ ಬೃಹತ್ ಮೆರವಣಿಗೆ ನಡೆಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article