ಕಂದಾಯ ಅಧಿಕಾರಿಗಳ ಕತ೯ವ್ಯಕ್ಕೆ ಅಡ್ಡಿ: ಸ್ಟೆರ್ ಲೈಟ್ ಕಂಪನಿ ವಿರುದ್ಧದ ಹೋರಾಟಗಾರ ಅಲ್ಫೋನ್ಸ್ ಡಿ'ಸೋಜಾ ಅರೆಸ್ಟ್
Monday, February 16, 2026
ಮೂಡುಬಿದಿರೆ: ಕಂದಾಯ ಅಧಿಕಾರಿಗಳ ಕತ೯ವ್ಯಕ್ಕೆ ಅಡ್ಡಿ, ವಿಷದ ಬಾಟಲಿ ಹಿಡಿದುಕೊಂಡು ಆತ್ಮಹತ್ಯೆ ಮಾಡುವುದಾಗಿ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಕಿಸಾನ್ ಸಂಘದ ಕಾರ್ಯಕರ್ತ, ಸ್ಟೆರ್ ಲೈಟ್ ಕಂಪನಿ ವಿರುದ್ಧದ ಹೋರಾಟಗಾರ, ರೈತ ಮುಖಂಡ ಅಲ್ಫೋನ್ಸ್ ಡಿಸೋಜ ಅವರನ್ನು ಮೂಡುಬಿದಿರೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಅಲ್ಫೋನ್ಸ್ ಡಿ'ಸೋಜ ಅವರು ಮನೆಯಲ್ಲಿ ಶನಿವಾರ ಗೈರುಹಾಜರಿದ್ದ ವೇಳೆ ಸ್ಟೆರ್ ಲೈಟ್ ಕಂಪನಿ ಸಿಬ್ಬಂದಿಗಳು ಪೊಲೀಸ್ ಭದ್ರತೆಯೊಂದಿಗೆ ಗದ್ದೆಗೆ ಪ್ರವೇಶಿಸಿ ಮರಗಳನ್ನು ಕಡಿದು, ಭತ್ತದ ಬೆಳೆ ಹಾನಿಗೊಳಿಸಿದ್ದಾರೆ ಎಂದು ಆರೋಪಿಸಿ ಕಂಪನಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದರು.
ಸೋಮವಾರ ಕಂದಾಯ ಅಧಿಕಾರಿಗಳು ಮತ್ತೆ ಸ್ಥಳಕ್ಕೆ ಭೇಟಿ ನೀಡಿದಾಗ ವಿಷದ ಬಾಟಲಿ ಹಿಡಿದುಕೊಂಡು ಆತ್ಮಹತ್ಯೆ ಮಾಡುವುದಾಗಿ ಬೆದರಿಕೆಯೊಡ್ಡಿದ ಪರಿಣಾಮ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ. ಜಿ. ಬಂಧಿಸಿದ್ದಾರೆ.
ಇದಕ್ಕೂ ಮೊದಲು ಮಾಧ್ಯಮದೊಂದಿಗೆ ಮಾತನಾಡಿದ ಅಲ್ಫೋನ್ಸ್ ಅವರು “ಬೆಳೆ ಕಟಾವು ಮಾಡಲು ಒಂದು ತಿಂಗಳ ಕಾಲಾವಕಾಶ ನೀಡಿರಿ” ಎಂದು ಮನವಿ ಮಾಡಿದರೂ ಸಹ ಕೇಳಿಸಿಕೊಳ್ಳಲಿಲ್ಲ ಬಿತ್ತನೆ ಬಿಡುವ ಹಂತದಲ್ಲಿದ್ದ ಫಲವತ್ತಾದ ಭತ್ತದ ಬೆಳೆ ನಾಶಪಡಿಸಲಾಗಿದೆ. ಈ ಬಗ್ಗೆ ತಾನು ಪೊಲೀಸರಿಗೆ ದೂರು ನೀಡಿ ಕೆಲಸ ತಾತ್ಕಾಲಿಕವಾಗಿ ನಿಲ್ಲಿಸುವಂತೆ ಸೂಚಿಸಿದ್ದರೂ, ತಮ್ಮ ಗೈರುಹಾಜರಿಯಲ್ಲಿ ಮತ್ತೆ ಕೆಲಸ ಆರಂಭಿಸಲಾಗಿದೆ ಎಂದು ದೂರಿದ್ದಾರೆ. ಯಾವುದೇ ಮುಂಚಿತ ನೋಟಿಸ್ ನೀಡದೇ, ಪರಿಹಾರ ಮೊತ್ತದ ಬಗ್ಗೆ ಮಾತುಕತೆ ನಡೆಸದೇ ಕ್ರಮ ಕೈಗೊಳ್ಳಲಾಗಿದೆ. ನಾನು ಅನಾರೋಗ್ಯದಿಂದ ಬಳಲುತ್ತಿದ್ದು, ಜೀವಕ್ಕೆ ಏನಾದರೂ ಆದಲ್ಲಿ ಅದಕ್ಕೆ ಸ್ಟೆರ್ ಲೈಟ್ ಕಂಪೆನಿಯೇ ನೇರ ಹೊಣೆ ಎಂದು ತಿಳಿಸಿದ್ದರು.
ಈ ಕುರಿತು ಕಮಿಷನರ್ ಸುಧೀರ್ ರೆಡ್ಡಿ ಅವರಿಗೆ ಮಾಹಿತಿ ನೀಡಲಾಗಿದೆ. ಎಂದು ತಿಳಿಸಿದ್ದು, ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಅವರು ಆಗ್ರಹಿಸಿದ್ದರು.

