ಮಂಗಳೂರು-ಬೆಂಗಳೂರು ವಂದೇ ಭಾರತ್: ಜೂ.1 ರಂದು ಪ್ರಾಯೋಗಿಕ ಸಂಚಾರ
ಮಂಗಳೂರು: ಕರಾವಳಿ ಕರ್ನಾಟಕ ಮತ್ತು ರಾಜಧಾನಿ ಬೆಂಗಳೂರು ನಡುವೆ ಬಹು ನಿರೀಕ್ಷಿತ ‘ಬೆಂಗಳೂರು-ಮಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಜೂ.1ರಿಂದ ಪ್ರಾಯೋಗಿಕವಾಗಿ ಸಂಚರಿಸಲಿದೆ.
ಜೂನ್ನಲ್ಲಿ ಈ ರೈಲು ಸಂಚರಿಸುವ ನಿರೀಕ್ಷೆ ಇದ್ದು, ಅದರ ಪೂರ್ವಭಾವಿಯಾಗಿ ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ನಡುವಿನ ಅತ್ಯಂತ ಕಠಿಣವಾದ ಘಾಟ್ ವಿಭಾಗದಲ್ಲಿ ಪ್ರಾಯೋಗಿಕ ಸಂಚಾರ ಜೂ.1 ರಿಂದ ಆರಂಭವಾಗಲಿದೆ. ಸದ್ಯ ಈ ಭಾಗದಲ್ಲಿ ವಿದ್ಯುದೀಕರಣ ಕಾರ್ಯ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಅಂತಿಮ ತಾಂತ್ರಿಕ ಅಡೆತಡೆಗಳು ನಿವಾರಣೆಯಾಗುವ ಹಂತಕ್ಕೆ ತಲುಪಿವೆ. ರೈಲ್ವೆ ಸಚಿವಾಲಯದ ಗುಣಮಟ್ಟ ಮತ್ತು ಮಾನದಂಡಗಳ ವಿಭಾಗವಾದ ಆರ್ಡಿಎಸ್ಒ ಉನ್ನತ ಮಟ್ಟದ ತಂಡವು ಜೂನ್ 1 ರಿಂದ ಈ ಘಾಟ್ ಪ್ರದೇಶದಲ್ಲಿ ಸುಧಾರಿತ ಪ್ರಾಯೋಗಿಕ ಸಂಚಾರವನ್ನು ಆರಂಭಿಸಲಿದೆ.
ಈ ಮಾರ್ಗವು ದುರ್ಗಮ ತಿರುವುಗಳು ಹಾಗೂ 57 ಸುರಂಗಗಳನ್ನು ಹೊಂದಿದೆ. 55 ಕಿಮೀ ಕಠಿಣ ಘಾಟ್ ಮಾರ್ಗ ಇದೆ. ಜೂನ್ನಲ್ಲೇ ರೈಲು ಸಂಚಾರ ಶುರು ಮಾಡುವುದಾಗಿ ಕೇಂದ್ರ ರೈಲು ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಇತ್ತೀಚಿಗೆ ತಿಳಿಸಿದ್ದರು.