ಕುಕ್ಕೆ ಕ್ಷೇತ್ರಕ್ಕೆ ಇಲ್ಲ ಮಳೆಗಾಲ: ಹರಿದು ಬಂದ ಅಪಾರ ಜನಸಾಗರ
Sunday, June 14, 2026
ಸುಬ್ರಹ್ಮಣ್ಯ: ಜೂನ್ ತಿಂಗಳಲ್ಲಿ ಮಳೆಗಾಲ ಆರಂಭವಾದರೂ ಈ ವರ್ಷ ಮಳೆಯ ಪ್ರಮಾಣ ತುಂಬಾ ಕಡಿಮೆ ಇದ್ದುದರಿಂದ ಮತ್ತು ಮಿಥುನ ಮಾಸ ಇಂದು ರವಿವಾರ ಆರಂಭಗೊಂಡಿದ್ದರಿಂದ ದಕ್ಷಿಣ ಭಾರತದ ನಾಗರಾಧನೆಯ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ರಾಜ್ಯದ ಹಾಗೂ ಹೊರ ರಾಜ್ಯದ ವಿವಿಧ ಭಾಗಗಳಿಂದ ಶನಿವಾರ ರಾತ್ರಿಯಿಂದಲೇ ಭಕ್ತ ಸಾಗರವೇ ಹರಿದು ಬಂದಿದೆ.
ಜೂನ್ ಒಂದರಿಂದ ಶಾಲಾ ಕಾಲೇಜುಗಳು ಆರಂಭಗೊಂಡಿದ್ದರು ಕೂಡ ಭಕ್ತಾದಿಗಳಿಗೆ ತಾವು ಹೇಳಿಕೊಂಡಿದ್ದ ಹರಕೆ ಸೇವೆಗಳನ್ನ ಸಲ್ಲಿಸುವುದಗೋಸ್ಕರ ಜೂನ್ ತಿಂಗಳಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಭಕ್ತರ ಸಂಖ್ಯೆ ಹೆಚ್ಚಾಗಿ ಆಗಮನವಾಗಿದೆ. ಎಲ್ಲೆಡೆ ಪಾರ್ಕಿಂಗ್ ಪ್ರದೇಶಗಳು ತುಂಬಿ ತುಳುಕುತ್ತಿದೆ. ಭಕ್ತಾದಿಗಳ ವಾಹನಗಳು ಎಲ್ಲಿ ಪಾರ್ಕಿಂಗ್ಗೆ ಜಾಗ ಸಿಗುತ್ತದೆ ಎಂದು ಇಡೀ ಪಟ್ಟಣವನ್ನು ಸುತ್ತಾಡಿದ್ದು ಉಂಟು. ಶ್ರೀ ದೇವಳದ ವಸತಿ ಗ್ರಹಗಳೆಲ್ಲ ವಾರಕ್ಕೆ ಮೊದಲೇ ಬುಕ್ ಆಗಿದ್ದು, ಹಾಗೆಯೇ ಖಾಸಗಿ ವಸತಿಗ್ರಹಗಳು ಕೂಡ ಭಕ್ತರ ವಾಸ್ತವ್ಯ ಗೋಸ್ಕರ ಶನಿವಾರ ದಿಂದಲೇ ಭರ್ತಿಯಾಗಿರುತ್ತದೆ. ಶ್ರೀ ದೇವರ ದರ್ಶನಕ್ಕಾಗಿ ಭಕ್ತಾದಿಗಳು ರಥ ಬೀದಿಯಲ್ಲಿ ಜವಾವಣೆ ಆಗಿದ್ದು ಮಳೆಯ ಸಿಂಚನ ಆಗದಿದ್ದರಿಂದ ಅಲ್ಲಿಂದಲೇ ಸರತಿ ಸಾಲಿನಲ್ಲಿ ಬರಲು ಸಾಧ್ಯವಾಯಿತು.
ಶ್ರೀ ದೇವಳದ ಕಾರ್ಯನಿರ್ವಾಹಕ ಅಧಿಕಾರಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಭಕ್ತರ ಸುಗಮ ದರ್ಶನ, ತೀರ್ಥ ಪ್ರಸಾದ ಸ್ವೀಕಾರ, ಹಾಗೂ ಭೋಜನ ಪ್ರಸಾದ ಸ್ವೀಕಾರಕ್ಕಾಗಿ ವಿವಿಧಡೆ ವ್ಯವಸ್ಥೆಗಳನ್ನು ಮಾಡಿದ್ದರು. ಆದಿ ಸುಬ್ರಹ್ಮಣ್ಯ ಭೋಜನ ಶಾಲೆಯಲ್ಲಿ ಭಕ್ತಾದಿಗಳಿಗೆ ಬಫೆ ಸಿಸ್ಟಮ್ ಭೋಜನವನ್ನು ಏರ್ಪಡಿಸಲಾಗಿತ್ತು.


